Homeರಾಜ್ಯರಸ್ತೆಬದಿ ನಿಂತಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭ

ರಸ್ತೆಬದಿ ನಿಂತಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆ ಆರಂಭ

ಬೆಂಗಳೂರು,ಜು.10- ಗ್ರೇಟರ್‌ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ರಸ್ತೆ, ಪಾದಚಾರಿ ಮಾರ್ಗ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಅನಾಥವಾಗಿ ಬಿಟ್ಟಿರುವ ವಾಹನಗಳ ವಿರುದ್ಧ ಇಂದಿನಿಂದ ವಿಶೇಷ ಕಾರ್ಯಾಚರಣೆ ಆರಂಭಿಸಲಾಗಿದೆ. ಜಿಬಿಎ ಕಾಯ್ದೆ-2024ರ ಸೆಕ್ಷನ್‌ 324ರ ಅನ್ವಯ ಜುಲೈ 10ರಿಂದ ಈ ಕಾರ್ಯಾಚರಣೆ ಜಾರಿಗೆ ಬಂದಿದ್ದು, ಐದು ನಗರ ಪಾಲಿಕೆಗಳು ಹಾಗೂ ಸಂಚಾರ ಪೊಲೀಸ್‌‍ ಇಲಾಖೆ ಜಂಟಿಯಾಗಿ ಅನಾಥ ವಾಹನಗಳನ್ನು ಗುರುತಿಸಿ ತೆರವುಗೊಳಿಸುವ ಕ್ರಮ ಕೈಗೊಂಡಿವೆ.

ಇಂದು ಬೆಳಿಗ್ಗೆ ಕ್ವೀನ್ಸ್ ರಸ್ತೆಯಲ್ಲಿ ಅನಾಥ ವಾಹನಗಳ ತೆರವು ಕಾರ್ಯಚರಣೆಗೆ ಚಾಲನೆ ನೀಡಿದ ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ಜಿಬಿಎ ಹಾಗೂ ಪೊಲೀಸ್‌‍ ಇಲಾಖೆ
ಇಬ್ಬರೂ ಜಂಟಿಯಾಗಿ ಕಾರ್ಯಚರಣೆ ನಡೆಸಲಾಗುತ್ತೆ.ರಸ್ತೆ ಹಾಗೂ ಫುಟ್‌ ಪಾತ್‌ ಜಾಗದಲ್ಲಿ ತಮ್ಮ ಸ್ವಂತ ವಾಹನ ಬಿಟ್ಟಿದ್ದಾರೋ ಇವುಗಳ ತೆರವು ಕಾರ್ಯ ಮಾಡಬೇಕು ಅಂತ ಹದಿನೈದು ದಿನಗಳ ಹಿಂದೆ ಮನವಿ ಮಾಡಿದ್ವಿ ಆದ್ರೂ ಪಾರ್ಕ್‌ ಮಾಡಿರೋದ್ರಿಂದ ಜನರಿಗೆ ತೊಂದರೆಯಾಗ್ತಿದೆ. ಈ ರೀತಿ ವಾಹನಗಳು ತಿಂಗಳು ಗಟ್ಟಲೇ ಬಿಟ್ಟು ಹೋಗ್ತಾರೆ. ಯಾರಿಗೇ ಸೇರಿದ್ದೆ ಅನ್ನೋದು ಗೊತ್ತಿಲ್ಲ. ಸಾರ್ವಜನಿಕ ಸ್ಥಳಗಳನ್ನ ಅತಿಕ್ರಮಣ ಮಾಡಿಕೊಂಡಿರೋದು ಕಾನೂನು ಉಲ್ಲಂಘನೆ.ಒಂದು ರೀತಿಯಲ್ಲಿ ಬೆಂಗಳೂರು ಅಸಹ್ಯವಾಗಿ ಕಾಣಲು ಇದು ಕಾರಣ ಎಂದರು.

ಹದಿನೈದು ದಿನಗಳ ಹಿಂದೆನೇ ಹೇಳಿದ್ರೂ ಸಹ ತೆರವು ಮಾಡಿಲ್ಲ.ಈಗಾಗಲೇ ಪೊಲೀಸರು 1581 ವೆಹಿಕಲ್‌ ರಸ್ತೆ ಬದಿಯಲ್ಲಿ ಬಿಟ್ಟಿರೋದನ್ನ ಗುರುತು ಮಾಡಿದ್ದಾರೆ. ಬಹುಶಃ ಅದರ ಸಂಖ್ಯೆ ಹೆಚ್ಚಿದೆ.ಸದ್ಯ ವಾಹನಕ್ಕೆ ಒಂದು ವಾರದ ನೊಟೀಸ್‌‍ ಅಂಟಿಸುತ್ತೇವೆ. ನೋಟಿಸ್‌‍ ಅಂಟಿಸಿ ಒಂದು ವಾರದ ಅವಕಾಶ ಮಾಲೀಕರಿಗೆ ನೀಡಲಾಗುತ್ತೆ. ಸದ್ಯಕ್ಕೆ 500 ರಿಂದ 1000 ಪೆನಾಲ್ಟಿ ಇದೆ.ಒಂದು ವಾರದ ನಂತರ ತೆಗೆದುಕೊಂಡಿಲ್ಲ ಅಂದ್ರೆ ಟೋಯಿಂಗ್‌ ಮಾಡಬೇಕು.ಆದಾದ ಬಳಿಕ ಅವರು ಟೋಯಿಂಗ್‌ ಚಾರ್ಜ್‌ಸ್‌‍ ಕಟ್ಟಿ ಬಿಡಿಸಿಕೊಂಡು ಹೋಗಬಹುದು. ಆಗಲೂ ಬಾರದೇ ಇದ್ದರೆ ಹರಾಜು ಹಾಕ್ತೀವೆ. ಯಾರು ಬೇಕಾದ್ರೂ ಹರಾಜಲ್ಲಿ ಭಾಗವಹಿಸಬಹುದು ಎಂದು ಅವರು ಹೇಳಿದರು.

ಇಲ್ಲಿಂದ ತೆಗೆದುಕೊಂಡು ಬೇರೆ ಕಡೆ ನಿಲ್ಲಿಸಿದ್ರೆ ಅವರ ಮೇಲೆ ಸಿವಿಯರ್‌ ಪೆನಾಲ್ಟಿ ಹಾಕುತ್ತೇವೆ. ಸದ್ಯ 1581 ವಾಹನಗಳ ಪಟ್ಟಿ ಇದೆ.. ಇದೇ ಸಂಪೂರ್ಣ ಪಟ್ಟಿ ಅಲ್ಲಅಸ್ತ್ರಂ ಆ್ಯಪ್‌ನಲ್ಲಿ ಸಾರ್ವಜನಿಕರು ಕೂಡ ಇಂತಹ ಬೀಡಾಡಿ ವಾಹನವನ್ನ ರಿಪೋರ್ಟ್‌ ಮಾಡಬಹುದು. ಸರ್ಕಾರದ ಗಮನಕ್ಕೆ ಸಾರ್ವಜನಿಕರು ತರಬಹುದು. ಆಗಲೂ ಕೂಡ ಇದೇ ನಿಯಮವನ್ನ ಪಾಲುಸುತ್ತೇವೆ, ಬೆಂಗಳೂರು ಸುಧಾರಣೆ ಆಗಬೇಕು. ಜನರು ನೆಮ್ಮದಿಯಾಗಿ ಬದುಕಲು ಸಹಾಯವಾಗಬೇಕುನಿಮ್ಮ ಗಾಡಿಯನ್ನ ಮನೆಯಲ್ಲಿ ಇಟ್ಟುಕೊಳ್ಳಿ. ಬೇಕಾದರೆ ನಿಮ ಸ್ವಂತ ಜಾಗದಲ್ಲಿ ಇಟ್ಟುಕೊಳ್ಳಿ. ಅದನ್ನ ಬಿಟ್ಟು ರೋಡ್‌ ಅಲ್ಲಿ ನಿಲ್ಲಿಸೋಕೆ ರೋಡ್‌ ಗುಜರಿ ಜಾಗ ಅಲ್ಲ ಎಂದು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

ಹಲವು ದಿನಗಳಿಂದ ರಸ್ತೆಯ ಅಕ್ಕಪಕ್ಕದಲ್ಲಿ. ಪುಟ್‌ ಪಾತ್‌ ಪ್ರದೇಶ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಬಿಟ್ಟುಹೋಗಿರುವ ವಾಹನಗಳನ್ನು ಗುರುತಿಸಿ ಮೊದಲು ಅಧಿಕೃತ ಸ್ಟಿಕ್ಕರ್‌ ನೋಟಿಸ್‌‍ ಅಂಟಿಸಲಾಗುತ್ತದೆ. ಬಳಿಕ ವಾಹನದ ಚಕ್ರಕ್ಕೆ ವೀಲ್‌ ಕ್ಲಾಂಪ್‌ ಅಳವಡಿಸಿ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ.ನೋಟಿಸ್‌‍ ನೀಡಿದ ಬಳಿಕವೂ ವಾಹನವನ್ನು ತೆರವುಗೊಳಿಸದಿದ್ದರೆ, ಸಂಬಂಧಿತ ವಾಹನವನ್ನು ಟೋಯಿಂಗ್‌ ಮೂಲಕ ಜಪ್ತಿ ಮಾಡಲಾಗುತ್ತದೆ. ನಂತರ ನಿಯಮಾನುಸಾರ ಬಹಿರಂಗ ಹರಾಜು ಪ್ರಕ್ರಿಯೆ ನಡೆಸಲಾಗುತ್ತದೆ ಎಂದು ತಿಳಿಸಿದರು.

ಶಾಸಕ ರಿಜ್ವಾನ್‌ ಅರ್ಷದ್‌ ಮಾತಾನಾಡಿ , ನಮ್ಮ ಕ್ಷೇತ್ರದಲ್ಲಿ ಕೂಡ ಈ ರೀತಿಯ ವಾಹನಗಳು ಹೆಚ್ಚಿವೆ. 6 ತಿಂಗಳು, ವರ್ಷದಿಂದ ವಾಹನಗಳನ್ನು ಬಿಟ್ಟು ಹೋಗಿದ್ದಾರೆ ಅಂಥ ವಾಹನಗಳ ತೆರವಿಗೆ ಕಾರ್ಯಾಚರಣೆ ಆಗ್ತಾ ಇದೆ .ಸ್ವಲ್ಪ ಹೊತ್ತು ನಿಲ್ಲಿಸಿದರೆ ಪರವಾಗಿಲ್ಲ, ಆದರೆ ದೀರ್ಘಾವಧಿ ಬಿಟ್ಟರೆ ಸಮಸ್ಯೆ ಹೆಚ್ಚು .ಟ್ರಾಫಿಕ್‌ ಕೂಡ ಹೆಚ್ಚಾಗುತ್ತೆ, ಕಸ ತಂದು ಅಲ್ಲಿಯೇ ಸುರಿಯುತ್ತಾರೆ.ಇದರಿಂದ ಟ್ರಾಫಿಕ್‌ ಸಮಸ್ಯೆ ಉಂಟಾಗುತ್ತದೆ ಎಂದು ತಿಳಿಸಿದರು.

ಇನ್ನೂ ಸಾಂಕೇತಿಕಾವಾಗಿ ಸಚಿವರು ಅನಾಥ ವಾಹನಗಳ ಮೇಲೆನೋಟಿಸ್‌‍ ಅಂಟಿಸಿ, ಗಾಡಿಯ ಚಕ್ರ ಲಾಕ್‌ ಮಾಡಿದರು.ಇಂದು ಮೊದಲ ದಿನವೇ ನಗರದ ಐದು ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 1581 ಕ್ಕೂ ಹೆಚ್ಚು ಅನಾಥ ವಾಹನಗಳಿಗೆ ನೋಟಿಸ್‌‍ ಅಂಟಿಸಲಾಗಿದೆ. ನೋಟಿಸ್‌‍ ಪಡೆದ ವಾಹನಗಳ ಮಾಲೀಕರು 7 ದಿನಗಳೊಳಗೆ ತಮ್ಮ ವಾಹನವನ್ನು ಸ್ವಂತ ಜಾಗ ಅಥವಾ ಕಾಂಪೌಂಡ್‌ಗೆ ಸ್ಥಳಾಂತರಿಸಬೇಕು. ಇಲ್ಲವಾದರೆ ವಾಹನವನ್ನು ಜಪ್ತಿ ಮಾಡಿ ಹರಾಜು ಹಾಕಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ರಸ್ತೆ ಬದಿ ವಾಹನ ನಿಲ್ಲಿಸಿದರೆ ದಂಡ
ಬೆಂಗಳೂರು, ಜು.10- ರಸ್ತೆಬದಿ ಹಾಗೂ ನಿಲುಗಡೆ ರಹಿತ ಸ್ಥಳಗಳಲ್ಲಿ ವಾಹನಗಳನ್ನು ನಿಲ್ಲಿಸುವವರ ವಿರುದ್ಧ ದಂಡ ಪ್ರಯೋಗ ನಡೆಸಲಾಗುವುದು ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್‌‍ ಆಯುಕ್ತ ಕಾರ್ತಿಕ್‌ ರೆಡ್ಡಿ ಅವರು ಎಚ್ಚರಿಕೆ ನೀಡಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸಂಚಾರದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಸಂಚಾರಿ ಪೊಲೀಸರು ಹಾಗೂ ಜಿಬಿಎ ಜಂಟಿಯಾಗಿ ಈ ಮಹತ್ವದ ಕಾರ್ಯಾಚರಣೆ ನಡೆಸುತ್ತಿದೆ ಎಂದು ಹೇಳಿದರು.

ರಸ್ತೆಬದಿಯಲ್ಲಿ ಮತ್ತು ನಿಲುಗಡೆ ರಹಿತ ಸ್ಥಳಗಳಲ್ಲಿ ಶಾಶ್ವತವಾಗಿ ನಿಲ್ಲಿಸಲಾದ ಅನಾಥ ವಾಹನಗಳನ್ನು ತೆರವುಗೊಳಿಸಲಾಗುತ್ತಿದೆ. ಮೊದಲ ಹಂತದಲ್ಲಿ ಸುಮಾರು 1580 ಇಂತಹ ವಾಹನಗಳನ್ನು ಗುರುತಿಸಲಾಗಿದೆ. ಅವುಗಳಿಗೆ ನೋಟೀಸ್‌‍ ಅಂಟಿಸಿ 7 ದಿನಗಳ ಕಾಲ ಕಾಲಾವಕಾಶ ನೀಡಲಾಗುತ್ತದೆ.

ಈ ಅವಧಿಯೊಳಗೆ ವಾಹನ ಮಾಲೀಕರು 500 ರೂ. ಪಾರ್ಕಿಂಗ್‌ ದಂಡ ಪಾವತಿಸಿ ತಮ ವಾಹನಗಳನ್ನು ತೆಗೆದುಕೊಂಡು ಹೋಗಬಹುದು. ಒಂದು ವೇಳೆ ಮಾಲೀಕರು ನೋಟೀಸ್‌‍ ಅವಧಿಯಲ್ಲಿ ವಾಹನಗಳನ್ನು ತೆರವುಗೊಳಿಸದಿದ್ದರೆ ನಮ ಪೊಲೀಸರು ಅವುಗಳನ್ನು ಟೋಯಿಂಗ್‌(ತೆರವು)ಮಾಡುತ್ತಾರೆ. ನಂತರ 15 ದಿನಗಳ ಕಾಲ ಸಾರ್ವಜನಿಕ ಪ್ರಕಟಣೆ ನೀಡುತ್ತಾರೆ.

ಈ ಅವಧಿಯಲ್ಲೂ ಮಾಲೀಕರು ಬಾರದಿದ್ದರೆ ಜಿಬಿಎ ನಿಯಮಗಳ ಪ್ರಕಾರ ಅಂತಹ ವಾಹನಗಳನ್ನು ಹರಾಜು ಮಾಡಲಾಗುವುದು ಎಂದು ಕಾರ್ತಿಕ್‌ ರೆಡ್ಡಿ ತಿಳಿಸಿದ್ದಾರೆ.ವಾಹನ ಮಾಲೀಕರು ಎಲ್ಲೆಂದರೆಲ್ಲಿ ರಸ್ತೆಬದಿ, ನೋಪಾರ್ಕಿಂಗ್‌ ಸ್ಥಳಗಳಲ್ಲಿ ವಾಹನವನ್ನು ನಿಲ್ಲಿಸುವುದನ್ನು ತಪ್ಪಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News