ಬೆಂಗಳೂರು, ಜು. 11 ಸಾರ್ವಜನಿಕರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಜುಲೈ 12ರ ಭಾನುವಾರವೂ ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಸಾರ್ವಜನಿಕ ರಜೆ ಇದ್ದರೂ ಆಸ್ತಿ ನೋಂದಣಿ, ಮುದ್ರಾಂಕ (ಸ್ಟಾಂಪ್) ಖರೀದಿ ಸೇರಿದಂತೆ ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯ ಎಲ್ಲಾ ಸೇವೆಗಳು ಎಂದಿನಂತೆ ಲಭ್ಯವಿರಲಿವೆ.
ಕಾರ್ಯದೊತ್ತಡ ಕಡಿಮೆ ಮಾಡಿ, ಸಾರ್ವಜನಿಕರಿಗೆ ತ್ವರಿತ ಸೇವೆ ಒದಗಿಸುವ ಉದ್ದೇಶದಿಂದ ಈ ವಿಶೇಷ ವ್ಯವಸ್ಥೆ ಮಾಡಲಾಗಿದೆ ಎಂದು ಇಲಾಖೆ ತಿಳಿಸಿದೆ. ರಾಜ್ಯದ ಎಲ್ಲಾ ಉಪ ನೋಂದಣಿ ಕಚೇರಿಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸಲಿದ್ದು, ನೋಂದಣಿ ಸಂಬಂಧಿತ ಸೇವೆ ಪಡೆಯಬೇಕಿರುವ ಸಾರ್ವಜನಿಕರು ಈ ವಿಶೇಷ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆ ಮನವಿ ಮಾಡಿದೆ. ಈ ಕುರಿತು ನೋಂದಣಿ ಮತ್ತು ಮುದ್ರಾಂಕಗಳ ಇಲಾಖೆಯು ಅಧಿಕೃತ ಪ್ರಕಟಣೆ ಹೊರಡಿಸಿದೆ.
ಸಬ್ ರಿಜಿಸ್ಟಾರ್ ಕಚೇರಿಯಲ್ಲಿ ಸರ್ವರ್ಡೌನ್ : ತಪ್ಪಿಲ್ಲ ಜನಸಾಮಾನ್ಯರ ಅಲೆದಾಟ
ಚಿಕ್ಕಬಳ್ಳಾಪುರ, ಜು.11- ರಾಜ್ಯದಲ್ಲಿ ಸರ್ವರ್ ಕೈಕೊಟ್ಟ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಮನೆ, ಸೈಟ್ ಹಾಗೂ ಜಮೀನುಗಳ ಖರೀದಿ ಮಾರಾಟ ಪ್ರಕ್ರಿಯೆದಾರರ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಪರದಾಟ, ಗೋಳಾಟ ಕೇಳುವವರೇ ಇಲ್ಲದಂತಾಗಿದೆ.
ರಾಜ್ಯದ ಎಲ್ಲ ಸಬ್ ರಿಜಿಸ್ಟಾರ್ ಕಚೇರಿಗಳಲ್ಲಿಯೂ ಸರ್ವರ್ ಕೈಕೊಟ್ಟಿರುವ ಕಾರಣ ಕಳೆದ ಒಂದು ವಾರದಿಂದ ಜನಸಾಮಾನ್ಯರ ಅಲೆದಾಟ ಮಾತ್ರ ತಪ್ಪಿಲ್ಲ ರಾಜ್ಯಾದ್ಯಂತ ಉದ್ಭವಿಸಿರುವ ಈ ಸಮಸ್ಯೆಯಿಂದ ಮೂಲಗಳ ಪ್ರಕಾರ ರಾಜ್ಯ ಸರ್ಕಾರಕ್ಕೆ ಪ್ರತಿದಿನವೂ ಕೋಟ್ಯಂತರ ರೂ.ಗಳ ಸ್ಟಾಂಪ್ ಡ್ಯೂಟಿ ನಷ್ಟವಾಗುತ್ತಿದೆ. ಸರ್ಕಾರಕ್ಕೆ ಪ್ರತಿದಿನವೂ ಬರಬೇಕಾದ ಆದಾಯಕ್ಕೆ ಕುಂದುಂಟಾಗಿದೆ ಅದರೂ ಮುಖ್ಯಮಂತ್ರಿ ಶಿವಕುಮಾರ್ ನೇತೃತ್ವದ ಸರ್ಕಾರ ಮೂಗುಮನಂತಾಗಿ ಇಂಗು ತಿಂದ ಮಂಗನಂತಾಗಿದೆ.
ರಾಜ್ಯ ಸರ್ಕಾರದ ಕಾವೇರಿ ತಂತ್ರಾಂಶ-2 ಸಾಫ್ಟ್ ವೇರ್ನಲ್ಲಿ ತಾಂತ್ರಿಕ ದೋಷದ ಸಮಸ್ಯೆ ಉದ್ಭವವಾಗಿದ್ದು, ಕಳೆದ ಒಂದು ವಾರದಿಂದ ಸರ್ವರ್ ಇಲ್ಲದ ಕಾರಣ ರಾಜ್ಯಾದ್ಯಂತ ಜಿಲ್ಲಾಕೇಂದ್ರ ಹಾಗೂ ತಾಲೂಕು ಕೇಂದ್ರಗಳ ಉಪನೊಂದಣಾಧಿಕಾರಿಗಳ ಕಚೇರಿಗಳ ಮುಂಭಾಗದಲ್ಲಿ ಜನ ಕಾದು ಕಾದು ಸುಸ್ತಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕುವಂತಾಗಿದೆ.
ರಾಜ್ಯಸರ್ಕಾರವೇ ನಿಗದಿ ಮಾಡಿರುವ 1 ಲಕ್ಷಕ್ಕೆ 7500 ರೂ.ಗಳ ಸ್ಟಾಂಪ್ ಡ್ಯೂಟಿ ಲೆಕ್ಕದಲ್ಲಿ ನೋಡಿದರೂ, ಕೇವಲ ತಾಲೂಕು ಕೇಂದ್ರ ಒಂದರಲ್ಲೇ ದಿನಕ್ಕೆ 70 ರಿಂದ 80 ರಷ್ಟು ಅರ್ಜಿಗಳು ಖರೀದಿ ಮಾರಾಟ ಪ್ರಕ್ರಿಯೆ ಮೂಲಕ ವಿಲೇವಾರಿಯಾಗುತ್ತವೆ. ಇನ್ನು ರಾಜ್ಯಾದ್ಯಂತ ಇರುವ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ನಡೆಯುವ ಆಸ್ತಿಗಳ ರಿಜಿಸ್ಟಾರ್ ಪ್ರಕ್ರಿಯೆ ಕಳೆದ ಒಂದು ವಾರದಿಂದ ಸ್ಥಗಿತಗೊಂಡಿರುವ ಕಾರಣ ರಾಜ್ಯಸರ್ಕಾರಕ್ಕೆ ಅಗುತ್ತಿರುವ ನಷ್ಟದ ಪ್ರಮಾಣ ಎಷ್ಟು ಕೋಟಿಗಳಾಗಿರಬಹುದು ಎನ್ನುವ ಅಂದಾಜು ಲಕ್ಕಕ್ಕೇ ಇಲ್ಲದಂತಾಗಿದೆ.
ಕಾವೇರಿ ತಂತ್ರಾಂಶದ ದೋಷದ ಕಾರಣದ ನೆಪ ಹೇಳಿ ಕಳೆದ ವರ್ಷವೂ ಸುಮಾರು ಹತ್ತು ದಿನಗಳ ಕಾಲ ಜನಸಾಮಾನ್ಯರನ್ನು ಸತಾಯಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸರ್ಕಾರವು, ಕೊನೆಗೆ ದಿಢೀರನೇ ಶೇ. 2 ರಷ್ಟು ಸ್ಟಾಂಪ್ ಡ್ಯೂಟಿ ಹೆಚ್ಚಿಸಿ ಆದೇಶ ಹೊರಡಿಸಿತ್ತು. ಇಂದಿನ ಡಿ.ಕೆ.ಶ ಶಿವಕುಮಾರ್ ನೇತೃತ್ವದ ಸರ್ಕಾರದಲ್ಲೂ ಈ ತೆರನಾದ ದರ ಹೆಚ್ಚಳದ ಕಾರ್ಯತಂತ್ರ ಅಡಗಿದೆಯೇ? ಎಂಬ ಅನುಮಾನ ರಾಜ್ಯದ ಜನತೆಯಲ್ಲಿ ಮೂಡುತ್ತಿದೆ.
