ನವದೆಹಲಿ, ಆ.18- ಅಯೋಧ್ಯೆಯ ರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣದಲ್ಲಿ ಶ್ರೀ ರಾಮ ಜನಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಮಾಜಿ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟ್ನ ಮಾಜಿ ಸದಸ್ಯ ಅನಿಲ್ ಮಿಶ್ರಾ ಅವರಿಗೆ ವಿಶೇಷ ತನಿಖಾ ತಂಡ (ಎಸ್ಐಟಿ) ಕ್ಲೀನ್ ಚಿಟ್ ನೀಡಿದೆ.
ವಿಚಾರಣೆಯ ಸಂದರ್ಭದಲ್ಲಿ, ಚಂಪತ್ ರಾಯ್ ಅವರು ತಮ್ಮ ಮೇಲಿರುವ ಆರೋಪಗಳನ್ನು ನಿರಾಕರಿಸಿದ್ದರು. ತಾವೇ ಸ್ವತಃ ಈ ಸಂಬಂಧ ದೂರು ದಾಖಲಿಸಿದ್ದಾಗಿ ಮತ್ತು ದೇಣಿಗೆ ಸಂಗ್ರಹದಲ್ಲಿ ಪಾರದರ್ಶಕತೆ ಕಾಪಾಡಲು ತಾವು ಬದ್ಧರಾಗಿದ್ದಾಗಿ ಅವರು ತಿಳಿಸಿದ್ದರು.
ಪ್ರಕರಣ ಬೆಳಕಿಗೆ ಬಂದಾಗ ತಾನು ಪ್ರಾಮಾಣಿಕವಾಗಿ ನಡೆದುಕೊಂಡಿದ್ದಾಗಿಯೂ ಅವರು ವಾದಿಸಿದ್ದರು.ದೇಣಿಗೆ ಸಂಗ್ರಹದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಗಳು ಕೇಳಿಬಂದಾಗ, ಜೂನ್ 27ರಂದು ಚಂಪತ್ ರಾಯ್ ಮತ್ತು ಅನಿಲ್ ಮಿಶ್ರಾ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದರು.
ಇದೇ ವೇಳೆ, ಉತ್ತರ ಪ್ರದೇಶ ಗೃಹ ಇಲಾಖೆಯು ಸಲ್ಲಿಸಿದ ಈ ಅಂತಿಮ ವರದಿಯನ್ನು ಮುಂದಿನ ಕ್ರಮಕ್ಕಾಗಿ ರಾಮಮಂದಿರ ಟ್ರಸ್ಟ್ಗೆ ಹಸ್ತಾಂತರಿಸಿದೆ.ಉತ್ತರಪ್ರದೇಶ ಸರ್ಕಾರ ಜೂನ್ 13ರಂದು ದೇವಸ್ಥಾನ ಟ್ರಸ್ಟ್ ಮನವಿ ಮೇರೆಗೆ ವಿಶೇಷ ತನಿಖಾ ತಂಡ ರಚಿಸಿತು. ಜೂನ್ 23ರಂದು ಪ್ರಾಥಮಿಕ ವರದಿಯನ್ನು ಈ ತಂಡ ಸಲ್ಲಿಸಿತು. ಅದಾದ ಬಳಿಕ ಟ್ರಸ್ಟ್ ಸದಸ್ಯರು ರಾಮಜನ್ಮಭೂಮಿ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ದಾಖಲಿಸುತ್ತಾರೆ. ಜೂನ್ 25ರಂದು ಠಾಣೆಯಲ್ಲಿ ಎಫ್ಐಆರ್ ದಾಖಲಾಗುತ್ತದೆ.
ಎಸ್ಐಟಿ ಅಂತಿಮ ವರದಿಯಲ್ಲಿ 8 ಜನರನ್ನು ಮಾತ್ರ ಆರೋಪಿಗಳೆಂದು ಹೆಸರಿಸಿದೆ. ಅವಿನಾಶ್ ಶುಕ್ಲಾ, ಅನುಕಲ್್ಪ ಮಿಶ್ರಾ, ಲವಕುಶ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ, ಸುಭಾಷ್ ಶ್ರೀವಾಸ್ತವ ಮತ್ತು ರಾಮಶಂಕರ್ ಯಾದವ್ ಅವರು ಈ ಆರೋಪಿಗಳಾಗಿದ್ದಾರೆ. ಇವರನ್ನು ಈಗಾಗಲೇ ಬಂಧಿಸಲಾಗಿದ್ದು, ಪ್ರಕರಣದ ತನಿಖೆ ಮುಂದುವರಿದಿದೆ.
