Homeರಾಜ್ಯಕೆಪಿಎಸ್‌‍ಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಮಾತಾಡೋ ಧೈರ್ಯ ಇಲ್ಲವೇ..? : ಎಚ್‌ಡಿಕೆಗೆ ಪ್ರಿಯಾಂಕ್‌ ಸವಾಲು

ಕೆಪಿಎಸ್‌‍ಸಿ ಅಧ್ಯಕ್ಷರ ನೇಮಕಾತಿ ಬಗ್ಗೆ ಮಾತಾಡೋ ಧೈರ್ಯ ಇಲ್ಲವೇ..? : ಎಚ್‌ಡಿಕೆಗೆ ಪ್ರಿಯಾಂಕ್‌ ಸವಾಲು

ಬೆಂಗಳೂರು, ಆ.28- ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಕುರಿತು ಮಾತನಾಡುತ್ತಿರುವ ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಕೆಪಿಎಸ್‌ಸಿ ಅಧ್ಯಕ್ಷರ ನೇಮಕಾತಿಯ ಬಗ್ಗೆಯೂ ಮಾತನಾಡುವ ಧೈರ್ಯ ತೋರಿಸಲಿ ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಸವಾಲು ಹಾಕಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಎಸ್‌ಸಿ ನೇಮಕಾತಿಯಲ್ಲಿ ಅಕ್ರಮದ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಅವರು ಶಿವಶಂಕರಪ್ಪ ಹಾಗೂ ಸಾಹುಕಾರ್‌ ಅವರನ್ನು ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದು ಯಾರು ಎಂಬುದನ್ನೂ ಹೇಳಬೇಕು ಎಂದು ಆಗ್ರಹಿಸಿದರು.

‘ಅವರ ಮನೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅಥವಾ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಫೋಟೊ ಇಲ್ಲ. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರ ಫೋಟೊ ಇದೆ ಎಂದು ಹೇಳಲಾಗುತ್ತಿದೆ. ₹200 ಕೋಟಿ ನೀಡಿ ಕೆಪಿಎಸ್‌ಸಿಗೆ ಅಧ್ಯಕ್ಷರಾಗಿ ನೇಮಕ ಮಾಡಲಾಗಿತ್ತು ಎಂದು ಬಿಜೆಪಿ ಮಾಜಿ ಶಾಸಕರೇ ಆರೋಪಿಸಿದ್ದಾರೆ. ಇದು ನಿಜವೇ? ಇದರ ಬಗ್ಗೆ ಮಾತನಾಡಲು ಕುಮಾರಸ್ವಾಮಿ ಅವರಿಗೆ ಧೈರ್ಯವಿದೆಯೇ?’ ಎಂದು ಪ್ರಶ್ನಿಸಿದರು.

ತಮ್ಮ ಮಾತಿನ ಶೈಲಿ ಕುರಿತು ಜೆಡಿಎಸ್‌ ನಾಯಕರು ಟೀಕಿಸುತ್ತಿರುವುದನ್ನು ಪ್ರಸ್ತಾಪಿಸಿದ ಅವರು, ‘ನನ್ನ ನಾಲಿಗೆಯ ಬಗ್ಗೆ ಮಾತನಾಡಲು ಜೆಡಿಎಸ್‌ನವರಿಗೆ ಯಾವ ನೈತಿಕತೆ ಇದೆ? ಈವರೆಗೆ ಬಿಜೆಪಿ ನಾಯಕರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಪ್ರಿಯಾಂಕ್‌ ಖರ್ಗೆ ಬೇಕಾಗಿದ್ದರು. ಈಗ ಜೆಡಿಎಸ್‌ಗೂ ನಾನು ಅನಿವಾರ್ಯವಾಗಿದ್ದರೆ ಮಾತನಾಡಿಕೊಳ್ಳಲಿ’ ಎಂದು ವ್ಯಂಗ್ಯವಾಡಿದರು.

ಕುಮಾರಸ್ವಾಮಿ ಅವರು ಈ ಹಿಂದೆ ಆರ್‌ಎಸ್‌ಎಸ್‌ ಅನ್ನು ‘ವಿಷಸರ್ಪ’ ಎಂದು ಟೀಕಿಸಿ ಲೇಖನ ಬರೆದಿದ್ದರು. ಆಗ ಅವರ ವಿಚಾರಧಾರೆ ಮೆಚ್ಚಿ ತಾವು ಅಭಿಮಾನಿಯಾಗಿದ್ದೆ. ಆದರೆ, ಅಧಿಕಾರಕ್ಕಾಗಿ ತತ್ವ-ಸಿದ್ಧಾಂತಗಳನ್ನು ಬದಿಗೊತ್ತುವವರ ಬಗ್ಗೆ ಏನು ಹೇಳಬೇಕು? ಜೆಡಿಎಸ್‌-ಬಿಜೆಪಿಯಿಂದ ತಾನು ಕಲಿಯಬೇಕಾದದ್ದು ಏನೂ ಇಲ್ಲ ಎಂದರು.

ಜ್ಞಾನೇಂದ್ರ ಕುಮಾರ್‌ ವಿಚಾರ

ಐಎಎಸ್‌ ಅಧಿಕಾರಿ ಜ್ಞಾನೇಂದ್ರ ಕುಮಾರ್‌ ಅವರ ವಿಚಾರದಲ್ಲಿ ಕುಮಾರಸ್ವಾಮಿ ಮಾಡುತ್ತಿರುವ ಆರೋಪಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ‘ಅವರು ಓಡಿ ಹೋಗಿದ್ದಾರೆಯೇ ಅಥವಾ ನಮ್ಮ ವಶದಲ್ಲಿದ್ದಾರೆಯೇ ಎಂಬುದು ಕುಮಾರಸ್ವಾಮಿಗೆ ಹೇಗೆ ಗೊತ್ತು? ಎಲ್ಲ ವಿಚಾರಗಳನ್ನೂ ಬಹಿರಂಗವಾಗಿ ಚರ್ಚಿಸಲು ಸಾಧ್ಯವಿಲ್ಲ’ ಎಂದರು.

ಒಬ್ಬ ಅಧಿಕಾರಿ ಲಿಖಿತವಾಗಿ ರಜೆಗಾಗಿ ಅರ್ಜಿ ಸಲ್ಲಿಸಿದರೆ ಸರ್ಕಾರ ಅದನ್ನು ನಂಬಬೇಕಲ್ಲವೇ? ಜ್ಞಾನೇಂದ್ರ ಕುಮಾರ್‌ ಎಲ್ಲಿದ್ದಾರೆ ಎಂಬುದು ತಮಗೆ ಗೊತ್ತಿದೆ. ಆದರೆ, ಆ ಮಾಹಿತಿಯನ್ನು ಕುಮಾರಸ್ವಾಮಿ ಅಥವಾ ಬಿಜೆಪಿಯವರಿಗೆ ನೀಡುವ ಅಗತ್ಯವಿಲ್ಲ ಎಂದು ಹೇಳಿದರು. ಜ್ಞಾನೇಂದ್ರ ಕುಮಾರ್‌ ಮರಳಿ ಕರ್ತವ್ಯಕ್ಕೆ ಹಾಜರಾಗಲಿದ್ದಾರೆ. ಬಳಿಕ ಅವರು ನೀಡಿರುವ ಮಾಹಿತಿ ಸತ್ಯವೇ ಅಥವಾ ಸುಳ್ಳೇ ಎಂಬುದನ್ನು ಪರಿಶೀಲಿಸಲಾಗುವುದು ಎಂದರು.

‘ಕುಮಾರಸ್ವಾಮಿ ರಾಜ್ಯದ ಪರವಾಗಿ ಧ್ವನಿ ಎತ್ತಿದ್ದಾರೆಯೇ?’

ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿರುವುದರಿಂದ ರಾಜ್ಯಕ್ಕೆ ಅವರಿಂದ ಆಗಿರುವ ಲಾಭವೇನು? ರಾಜ್ಯದ ಪರವಾಗಿ ಅವರು ಯಾವಾಗಲಾದರೂ ಕೇಂದ್ರದಲ್ಲಿ ಧ್ವನಿ ಎತ್ತಿದ್ದಾರೆಯೇ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು. ‘ಪ್ರಿಯಾಂಕ್‌ ಖರ್ಗೆ ಅವರನ್ನು ಟೀಕಿಸಿದರೆ ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಕೇಶವಕೃಪಾದಲ್ಲಿ ಅಂಕಗಳು ಸಿಗುತ್ತವೆ. ಅದಕ್ಕಾಗಿ ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನನ್ನನ್ನು ಟೀಕಿಸುವುದನ್ನೇ ಅವರು ಫ್ಯಾಷನ್‌ ಮಾಡಿಕೊಂಡಿದ್ದಾರೆ. ನನ್ನಿಂದಾಗಿ ಬಿಜೆಪಿಯ ಬಾಡಿಗೆ ಭಾಷಣಕಾರರಿಗೆ ಹಾಗೂ ಸಾಮಾಜಿಕ ಜಾಲತಾಣದಲ್ಲಿರುವವರಿಗೆ ಸಂಬಳ ಸಿಗುತ್ತಿದೆ’ ಎಂದು ವ್ಯಂಗ್ಯವಾಡಿದರು.

ಪ್ರಜ್ವಲ್‌ ರೇವಣ್ಣ ವಿಚಾರ

ಪ್ರಜ್ವಲ್‌ ರೇವಣ್ಣ ಪ್ರಕರಣದ ಕುರಿತು ಕುಮಾರಸ್ವಾಮಿ ನೀಡಿರುವ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಪ್ರಿಯಾಂಕ್‌ ಖರ್ಗೆ, ‘ಹಾಸನದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ನಡೆಸುವಂತೆ ನಾವು ಹೇಳಿದ್ದೆವೇ? ಸಂತ್ರಸ್ತ ಮಹಿಳೆಯರ ಕುರಿತು ಮಾತನಾಡಲು ಕುಮಾರಸ್ವಾಮಿಗೆ ಸಾಧ್ಯವಾಗುತ್ತಿಲ್ಲ’ ಎಂದು ಟೀಕಿಸಿದರು.

ಗೃಹ ಸಚಿವನಾಗಿ ಪರಪ್ಪನ ಅಗ್ರಹಾರ ಸೇರಿದಂತೆ ರಾಜ್ಯದ ಎಲ್ಲ ಕಾರಾಗೃಹಗಳನ್ನು ಸ್ವಚ್ಛಗೊಳಿಸುವುದು ತಮ್ಮ ಕರ್ತವ್ಯ. ಆ ಕೆಲಸವನ್ನು ತಾವು ಮಾಡುತ್ತಿದ್ದೇವೆ ಎಂದರು.‘ಜೈಲಿನಲ್ಲಿರುವ ಪ್ರಜ್ವಲ್‌ ರೇವಣ್ಣ ಮೊಬೈಲ್‌ ಬಳಸಬಹುದೇ? ಅವರಿಂದ ಕುಮಾರಸ್ವಾಮಿಗೆ ಕರೆಗಳು ಬರುತ್ತಿದ್ದವೇ? ಈ ಬಗ್ಗೆ ಮಾಹಿತಿ ಇದ್ದರೂ ವಿಷಯವನ್ನು ಮುಚ್ಚಿಟ್ಟಿದ್ದರೇ?’ ಎಂದು ಪ್ರಿಯಾಂಕ್‌ ಖರ್ಗೆ ಪ್ರಶ್ನಿಸಿದರು.

RELATED ARTICLES
spot_img

Latest News