ಬೆಂಗಳೂರು, ಆ.30- ಅಮೆರಿಕ ಪ್ರವಾಸ ಮುಗಿಸಿ ಮರಳಿದ ಬಳಿಕ ದೇಶದಲ್ಲೇ ಅಲ್ಲೋಲಕಲ್ಲೋಲವಾಗುವ ವಿಚಾರವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸುವುದಾಗಿ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಎಂಥೆಂಥವರು ಅಧಿಕಾರ ನಡೆಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸುತ್ತೇನೆ. ನನ್ನ ವಿಚಾರದಲ್ಲಿ ದಾಖಲೆಗಳಿದ್ದರೆ ಚರ್ಚೆ ಮಾಡಲಿ. ನಾನು ಯಾವುದೇ ಬೇನಾಮಿ ವ್ಯಾಪಾರ ಮಾಡಿಲ್ಲ” ಎಂದು ಹೇಳಿದರು.
ಸೆಪ್ಟೆಂಬರ್ 2ರ ರಾತ್ರಿ ಅಮೆರಿಕ ಪ್ರವಾಸಕ್ಕೆ ತೆರಳಲಿದ್ದು, ಸೆಪ್ಟೆಂಬರ್ 12ರಂದು ವಾಪಸ್ ಆಗುವುದಾಗಿ ತಿಳಿಸಿದರು. ‘ಅಕ್ಕ’ ಸಂಘಟನೆಯ ರಜತ ಮಹೋತ್ಸವ ಕಾರ್ಯಕ್ರಮಕ್ಕೆ ಒತ್ತಾಯಪೂರ್ವಕವಾಗಿ ಆಹ್ವಾನ ನೀಡಿದ್ದು, ಇಷ್ಟವಿಲ್ಲದಿದ್ದರೂ ಅವರ ಅಕ್ಕರೆಯ ಒತ್ತಾಯಕ್ಕೆ ಮಣಿದು ಕಾರ್ಯಕ್ರಮಕ್ಕೆ ತೆರಳುತ್ತಿದ್ದೇನೆ ಎಂದರು.
ಕೆಪಿಎಸ್ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟದ ಉಪಸಮಿತಿ ರಚಿಸಲಾಗಿದೆಯೇ? ಆ ಸಮಿತಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೇ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆಯೇ? ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
1984ರಲ್ಲಿ ತಾವು ಖರೀದಿಸಿದ್ದ ಜಮೀನಿನ ವಿಚಾರದಲ್ಲಿ ಈಗ ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದ ಅವರು, ಒಬ್ಬ ಅಧಿಕಾರಿ ಕಾನೂನುಬಾಹಿರವಾಗಿ ಕಾರ್ಯನಿರ್ವಹಿಸಿ ತಮ್ಮ ವಿರುದ್ಧ ಬಳಸಿರುವ ಪದಗಳ ಕುರಿತೂ ಪ್ರಕರಣವಿದೆ ಎಂದು ಹೇಳಿದರು.
ಶಾಂತಿನಗರ ಹೌಸಿಂಗ್ ಸೊಸೈಟಿ ಸೇರಿದಂತೆ ಕೆಲವು ಸೊಸೈಟಿಗಳಲ್ಲಿ ನಡೆದಿರುವ ಬೆಳವಣಿಗೆಗಳು, ನೈಸ್ ರಸ್ತೆ ವಿಚಾರದಲ್ಲಿ ಭಾಗಿಯಾಗಿರುವವರು ಹಾಗೂ ಉದ್ಯಾನವನಗಳಲ್ಲಿ ಶೇ.5ರಷ್ಟು ಜಮೀನನ್ನು ಪರಭಾರೆ ಮಾಡಲು ಉದ್ದೇಶಿಸಿರುವ ಸರ್ಕಾರದ ಕ್ರಮದ ವಿರುದ್ಧ ನಡೆಯುವ ಹೋರಾಟಕ್ಕೆ ತಮ್ಮ ಪಕ್ಷದ ಬೆಂಬಲವಿದೆ ಎಂದು ಕುಮಾರಸ್ವಾಮಿ ತಿಳಿಸಿದರು.
