ನವದೆಹಲಿ, ಸೆ.4 (ಪಿಟಿಐ)- ದೇಶದ ಮೊದಲ ಇಮೇಜಿಂಗ್ ಉಪಗ್ರಹವನ್ನು ಭೂ-ಕಕ್ಷೆಗೆ ಯಶಸ್ವಿಯಾಗಿ ಉಡಾವಣೆ ಮಾಡಿದ್ದಕ್ಕಾಗಿ ಕಾಂಗ್ರೆಸ್ ಪಕ್ಷ ಇಸ್ರೋವನ್ನು ಶ್ಲಾಘಿಸಿದೆ. ಆಧುನಿಕ ಭಾರತದ ನಿರ್ಮಾತೃಗಳು ದೂರದೃಷ್ಟಿಯೊಂದಿಗೆ ದೇಶದ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಭದ್ರ ಬುನಾದಿ ಹಾಕಿದ್ದು, ವಿಜ್ಞಾನಿಗಳ ಹಲವು ತಲೆಮಾರುಗಳು ಗಮನಾರ್ಹ ಸಾಧನೆಗಳ ಮೂಲಕ ಆ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) 2,300 ಕೆಜಿಗಿಂತ ಹೆಚ್ಚು ತೂಕದ ಪೇಲೋಡ್ ಅನ್ನು ರಾಕೆಟ್ ಮೂಲಕ ನಿಖರವಾದ ಕಕ್ಷೆಗೆ ಯಶಸ್ವಿಯಾಗಿ ಸೇರಿಸುವ ಮೂಲಕ ಮತ್ತೊಮ್ಮೆ ಇತಿಹಾಸ ನಿರ್ಮಿಸಿದೆ ಎಂದು ಖರ್ಗೆ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ.
ಜಿಎಸ್ಎಲ್ವಿ ಎಫ್-17/ಇಒಎಸ್-05 ಕಾರ್ಯಾಚರಣೆಯ ಸಂಪೂರ್ಣ ತಂಡಕ್ಕೆ ಅಭಿನಂದನೆ ಸಲ್ಲಿಸಿರುವ ಅವರು, ಜಿಯೋಸಿಂಕ್ರೋನಸ್ ಕಕ್ಷೆಯಿಂದ ಭಾರತದ ಮೊದಲ ಇಮೇಜಿಂಗ್ ಉಪಗ್ರಹ ಇಒಎಸ್-05 ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿರುವುದು ದೇಶದ ಭೂ ವೀಕ್ಷಣಾ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸಲಿದೆ ಎಂದಿದ್ದಾರೆ.
ಭಾರತದ ಬಾಹ್ಯಾಕಾಶ ಕಾರ್ಯಕ್ರಮವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ವಿಜ್ಞಾನಿಗಳು, ಬಾಹ್ಯಾಕಾಶ ಎಂಜಿನಿಯರ್ಗಳು ಮತ್ತು ಸಂಶೋಧಕರ ಸಮರ್ಪಣೆ ಹಾಗೂ ಜಾಣ್ಮೆಯ ಬಗ್ಗೆ ನಮಗೆ ಅಪಾರ ಹೆಮ್ಮೆ ಇದೆ ಎಂದು ಖರ್ಗೆ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷವು ಸದಾ ವೈಜ್ಞಾನಿಕ ಮನೋಭಾವ ಮತ್ತು ಬಾಹ್ಯಾಕಾಶ ಸಂಶೋಧನೆಗೆ ಬದ್ಧವಾಗಿದೆ. ಆಧುನಿಕ ಭಾರತದ ನಿರ್ಮಾತೃಗಳು ದೂರದೃಷ್ಟಿಯೊಂದಿಗೆ ಬಾಹ್ಯಾಕಾಶ ಕಾರ್ಯಕ್ರಮದ ಅಡಿಪಾಯ ಹಾಕಿದರು. ವಿಜ್ಞಾನಿಗಳ ಹಲವು ತಲೆಮಾರುಗಳು ಮಹತ್ವದ ಸಾಧನೆಗಳ ಮೂಲಕ ಆ ಪರಂಪರೆಯನ್ನು ಮುಂದುವರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.
2026ರ ಮೊದಲ ಯಶಸ್ಸು
ಈ ಉಡಾವಣೆಯು 2026ನೇ ಸಾಲಿನಲ್ಲಿ ಇಸ್ರೋ ಸಾಧಿಸಿದ ಮೊದಲ ಯಶಸ್ಸಾಗಿದೆ. ಶ್ರೀಹರಿಕೋಟಾದ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಯಾದ ಸುಮಾರು 18 ನಿಮಿಷಗಳ ಬಳಿಕ ಇಒಎಸ್-05 ಉಪಗ್ರಹವನ್ನು ಉದ್ದೇಶಿತ ಸಬ್-ಜಿಯೋಸಿಂಕ್ರೋನಸ್ ವರ್ಗಾವಣೆ ಕಕ್ಷೆಗೆ ಯಶಸ್ವಿಯಾಗಿ ಸೇರಿಸಲಾಯಿತು.
