ಡಾಕಾ, ಡಿ.20- ಬಾಂಗ್ಲಾದ ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹದಿ ಹತ್ಯೆ ಖಂಡಿಸಿ ಬಾಂಗ್ಲಾದೇಶದಲ್ಲಿ ಭುಗಿಲೆದ್ದಿರುವ ಹಿಂಸಾತ್ಮಕ ಪ್ರತಿಭಟನೆಯನ್ನು, ಅಲ್ಲಿನ ಮೂಲಭೂತವಾದಿ ಶಕ್ತಿಗಳು ಹೈಜಾಕ್ ಮಾಡಿವೆ.
ಪ್ರತಿಭಟನೆಯ ನೆಪದಲ್ಲಿ ಭಾರತ ವಿರೋಧಿ ಭಾವನೆಯನ್ನು ಅಲ್ಲಿನ ಜನರಲ್ಲಿ ಬಿತ್ತಲಾಗುತ್ತಿದ್ದು, ಭಾರತದ ಗಡಿಭಾಗಕ್ಕೆ ನುಗ್ಗುವ ಪ್ರಯತ್ನ ಕೂಡ ನಡೆದಿದೆ ಎಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಗಡಿ ಭಾಗದಲ್ಲಿ ಕಟ್ಟೆಚ್ಚರವಹಿಸಿದ್ದು, ಯಾವುದೇ ಸಂಭವನೀಯ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿದೆ. ಅತ್ತ ಮೂಲಭೂತವಾದಿಗಳು ಹಿಂದೂ ಯುವಕನೋರ್ವನನ್ನು ಹತ್ಯೆ ಮಾಡಿ ಆತನ ಶವವನ್ನು ಮರಕ್ಕೆ ನೇತು ಹಾಕಿ ಸುಟ್ಟುಹಾಕಿದ್ದಾರೆ.
ಇಂಕ್ವಿಲಾಬ್ ಫೋರಂ ಮತ್ತು ಜಮಾತ್ ಉಗ್ರಗಾಮಿಗಳು ನಿನ್ನೆ ಬಾಂಗ್ಲಾದೇಶದ ಬೆನಪೋಲ್ನಿಂದ ಭಾರತದ ಗಡಿಯವರೆಗೆ ಮೆರವಣಿಗೆ ನಡೆಸಿ ಪ್ರತಿಭಟಿಸಿದ್ದಾರೆ. ಪ್ರತಿಭಟನಾಕಾರರು ಗಡಿ ಭಾಗಕ್ಕೆ ನುಗ್ಗುತ್ತಿರುವುದರಿಂದ, ಸೇನೆ ಹೈ ಅಲರ್ಟ್ ಘೋಷಣೆ ಮಾಡಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸುವಂತೆ ಭಾರತವನ್ನು ಒತ್ತಾಯಿಸಿದ ಪ್ರತಿಭಟನಾಕಾರರು, ಭಾರತ ವಿರೋಧಿ ಘೋಷಣೆಗಳನ್ನು ಕೂಗಿದ್ದಾರೆ. ಏತನ್ಮಧ್ಯೆ, ಚಟ್ಟೋಗ್ರಾಮ್ನಲ್ಲಿರುವ ಚಂದ್ರನಾಥ ದೇವಸ್ಥಾನದ ಹೊರಗೆ, ಧಾರ್ಮಿಕ ಘೋಷಣೆಗಳನ್ನು ಕೂಗುತ್ತಾ, ಕೋಮುದ್ವೇಷವನ್ನು ಹರಡುವ ವ್ಯವಸ್ಥಿತ ಷಡ್ಯಂತ್ರ ಕೂಡ ನಡೆದಿದೆ.
ಪ್ರತಿಭಟನಾಕಾರರು ರಾಜಧಾನಿ ಢಾಕಾದ ಪ್ರಮುಖ ಢಾಕೇಶ್ವರಿ ದೇವಸ್ಥಾನದ ಮೇಲೆ ದಾಳಿ ನಡೆಸುವ ಗುರಿ ಹೊಂದಿದ್ದರಿಂದ, ದೇವಸ್ಥಾನವನ್ನು ರಕ್ಷಿಸಲು ಹೆಚ್ಚುವರಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ. ಢಾಕಾದ ಟೋಪ್ಖಾನಾ ರಸ್ತೆಯಲ್ಲಿರುವ ಶಿಲ್ಪಿ ಗೋಷ್ಠಿ ಸಾಂಸ್ಕೃತಿಕ ಕೇಂದ್ರವನ್ನು ಸುತ್ತುವರೆದಿದ್ದ ಪ್ರತಿಭಟನಾಕಾರರು, ಕಟ್ಟಡವನ್ನು ಧ್ವಂಸಗೊಳಿಸುವ ವಿಫಲ ಪ್ರಯತ್ನ ನಡೆಸಿದ್ದಾರೆ.
ಹತ್ಯೆಗೀಡಾದ ಷರೀಫ್ ಉಸ್ಮಾನ್ ಹದಿ ಅವರ ಮೃತದೇಹವನ್ನು ನಿನ್ನೆ ಸಂಜೆ ಸಿಂಗಾಪುರದಿಂದ ಢಾಕಾಗೆ ತರಲಾಯಿತು. ಅವರ ನಿಧನಕ್ಕೆ ಮೊಹಮ್ಮದ್ ಯೂನಸ್ ನೇತೃತ್ವದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ಇಂದು ರಾಷ್ಟ್ರೀಯ ಶೋಕಾಚರಣೆ ದಿನವನ್ನು ಘೋಷಿಸಿದೆ. ಇಂದು ಸಂಜೆ ವೇಳೆಗೆ ಹದಿ ಅಂತ್ಯಕ್ರಿಯೆ ನೆರವೇರಲಿದೆ.
