Sunday, September 29, 2024
Homeರಾಜಕೀಯ | Politicsನೈತಿಕತೆ ಇದ್ದರೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಮೊದಲು ಪಕ್ಷದಿಂದ ಹೊರಹಾಕಿ : ಪ್ರಿಯಾಂಕ್ ಖರ್ಗೆ

ನೈತಿಕತೆ ಇದ್ದರೆ ಯಡಿಯೂರಪ್ಪ ಮತ್ತು ವಿಜಯೇಂದ್ರರನ್ನು ಮೊದಲು ಪಕ್ಷದಿಂದ ಹೊರಹಾಕಿ : ಪ್ರಿಯಾಂಕ್ ಖರ್ಗೆ

Priyank Kharge

ಬೆಂಗಳೂರು,ಸೆ.29- ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಬಿಜೆಪಿಯವರಿಗೆ ನೈತಿಕತೆ ಇದ್ದರೆ ಮೊದಲು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ತಮ್ಮ ಪಕ್ಷದಿಂದ ಮೊದಲು ಹೊರಹಾಕಲಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ಆದಾಯ ತೆರಿಗೆ, ಜಾರಿ ನಿರ್ದೇಶನಾಲಯ ಹಾಗೂ ರಾಜ್ಯಪಾಲರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾವು ಇದಕ್ಕೆ ಹೆದರುವುದಿಲ್ಲ ಎಂದರು.

ಕರಡಿಗೆ ಎಷ್ಟು ಕೂದಲುಗಳಿವೆಯೋ ಅಷ್ಟು ಆರೋಪಗಳು ಬಿಜೆಪಿಯವರ ಮೇಲಿದೆ. ಬಿ.ವೈ.ವಿಜಯೇಂದ್ರ ಸೆಲ್ ಕಂಪನಿಗಳ ಮೂಲಕ ಮನಿಲ್ಯಾಂಡ್ರಿಂಗ್ ಮಾಡುತ್ತಿದ್ದಾರೆ. ಹಲವು ಬಾರಿ ಮಲೇಷಿಯಾ ಸೇರಿದಂತೆ ವಿದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ಎಷ್ಟು ಬಾರಿ ವಿದೇಶಕ್ಕೆ ಭೇಟಿ ನೀಡಿದ್ದಾರೆ ಎಂಬ ಬಗ್ಗೆ ಪಾಸ್ಪೋರ್ಟ್ ತೋರಿಸಲಿ. ನಾವು ನಮ ಪಾಸ್ಪೋರ್ಟ್ ತೋರಿಸುತ್ತೇವೆ ಎಂದು ಸೆಡ್ಡು ಹೊಡೆದರು.

ಪ್ರಹ್ಲಾದ್ ಜೋಷಿ ಕೇಂದ್ರ ಸಚಿವರಾಗಿ ರಾಜ್ಯಕ್ಕೆ ಯಾವುದೇ ಯೋಜನೆಯನ್ನು ತಂದಿಲ್ಲ. ಆದರೆ ರಾಜಕೀಯವಾಗಿ ಕ್ಷುಲ್ಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸೋನಿಯಾಗಾಂಧಿ, ರಾಹುಲ್ಗಾಂಧಿ ಮನಿಲ್ಯಾಂಡ್ರಿಂಗ್ ಮಾಡಿದ್ದಾರೆ ಎಂದು ಜೋಷಿ ಹೇಳಿರುವುದು ಹಾಸ್ಯಾಸ್ಪದ. 10 ವರ್ಷ ಕೇಂದ್ರದಲ್ಲಿ ಆಡಳಿತ ಮಾಡಿರುವ ಜೋಷಿಯವರು ಚಾಂದಿನಿ ಚೌಕ್ನಲ್ಲಿ ಪಾನಿಪುರಿ ತಿನ್ನುತ್ತಿದ್ದಾರೆಯೇ?, ಒಂದು ವೇಳೆ ಸೋನಿಯಾಗಾಂಧಿ, ರಾಹುಲ್ಗಾಂಧಿ ತಪ್ಪು ಮಾಡಿದ್ದರೆ ಏಕೆ ಜೈಲಿಗೆ ಹಾಕಿಲ್ಲ ಎಂದು ಪ್ರಶ್ನಿಸಿದರು.

ಜೋಷಿಯವರ ಹೇಳಿಕೆಯನ್ನು ಗಮನಿಸಿದರೆ ಕೇಂದ್ರ ಗೃಹಸಚಿವ ಅಮಿತ್ ಷಾ ಅಸಮರ್ಥರು. ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಅವರಿಂದಾಗುತ್ತಿಲ್ಲ ಎಂಬ ಅರ್ಥ ಬರುವಂತಿದೆ ಎಂದು ಹೇಳಿದರು.

ಮುನಿರತ್ನ ಅತ್ಯಾಚಾರ, ಹನಿಟ್ರ್ಯಾಪ್, ಜಾತಿನಿಂದನೆ ಸೇರಿದಂತೆ ಹಲವು ಆರೋಪಗಳಿಗೆ ಗುರಿಯಾಗಿದ್ದಾರೆ. ಬಿಜೆಪಿಯ ನಾಯಕರು ಅವರ ಬಗ್ಗೆ ಬಾಯಿ ಬಿಟ್ಟಿಲ್ಲ. ಛಲವಾದಿ ನಾರಾಯಣ ಸ್ವಾಮಿ, ನಿವೇಶನ ಹಗರಣದಲ್ಲಿದ್ದಾರೆ. ಯಡಿಯೂರಪ್ಪ ವಿರುದ್ಧ ಫೋಕ್ಸೊ ಪ್ರಕರಣದ ದಾಖಲಾಗಿದೆ. ಹಿಂದೂ ಧರ್ಮದ ರಕ್ಷಕರೆಂದು ಹೇಳಿಕೊಳ್ಳುವವರ ವಿರುದ್ಧ ಇರುವ ಪ್ರಕರಣಗಳನ್ನು ನೋಡಿದರೆ ನಾಚಿಕೆಯಾಗುತ್ತಿದೆ. ಮುನಿರತ್ನ ವಿರುದ್ಧ ಮಾತನಾಡಲು ಹೆದರುತ್ತಿರುವುದನ್ನು ನೋಡಿದರೆ ಬಿಜೆಪಿ ನಾಯಕರ ಸಿಡಿಗಳಿವೆಯೇ ಎಂಬ ಅನುಮಾನ ಕಾಡುತ್ತಿದೆ ಎಂದರು.

ಎಡಿಜಿಪಿ ಚಂದ್ರಶೇಖರ್ ಹಾಗೂ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನಡುವಿನ ಟೀಕೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದರು. ಆಗ ಅವರ ಕೈಕೆಳಗೆ ಇದೇ ಚಂದ್ರಶೇಖರ್ ಕೆಲಸ ಮಾಡಿದ್ದಾರೆ. ಈಗ ಕೆಟ್ಟವರಾಗಿರುವ ಅಧಿಕಾರಿ ಆಗ ಒಳ್ಳೆಯವರಾಗಿದ್ದರೇ?, ಕಾನೂನು ಪಾಲನೆ ಮಾಡಿದವರು ಇವರ ಕಣ್ಣಿಗೆ ಕೆಟ್ಟವರಾಗಿ ಕಾಣುತ್ತಾರೆಯೇ?, ಚಂದ್ರಶೇಖರ್ ಅವರು ಬರ್ನಾಡ್ ಷಾ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ. ಈ ಪ್ರಕರಣದಲ್ಲಿ ಪತ್ರ ಬರೆದವನೂ ನಾನಲ್ಲ, ಸ್ವೀಕಾರ ಮಾಡಿದವನೂ ನಾನಲ್ಲ. ಚಂದ್ರಶೇಖರ್ ಅವರು ತಮ ಅಧಿಕಾರಿಗಳಿಗೆ ನೈತಿಕ ಧೈರ್ಯ ತುಂಬುವ ಸಲುವಾಗಿ ಈ ರೀತಿ ಪತ್ರ ಬರೆದಿರಬಹುದು ಎಂದು ಹೇಳಿದರು.

ಗಣಿಗಾರಿಕೆಗೆ ಅರಣ್ಯ ಭೂಮಿ ಹಂಚಿಕೆಗೆ ತಾವು ಸಹಿ ಹಾಕಿಲ್ಲ ಎಂದು ಮೊದಲು ಹೇಳಿದ್ದರು. ಅನಂತರ ಸಹಿ ಹಾಕಿದ್ದೇನೆ, ಡಿ ನೋಟಿಫಿಕೇಷನ್ ಮಾಡಿಲ್ಲ ಎಂದರು. ಕೊಲೆ ಮಾಡಿಲ್ಲ, ಕೊಲೆ ಯತ್ನ ಮಾಡಿದ್ದೇನೆ ಎಂದು ಹೇಳಿದಂತಿದೆ ಅವರ ಹೇಳಿಕೆ ಎಂದು ಲೇವಡಿ ಮಾಡಿದರು.

ರಾಜ್ಯ ಬಿಜೆಪಿಯವರು ಸಂಕಷ್ಟದಲ್ಲಿದ್ದಾರೆ. ನಾಯಕತ್ವದ ಪರ ಹಲವು ಹಗರಣಗಳು ಅವರನ್ನು ಕಾಡುತ್ತಿವೆ. ಎಲೆಕ್ಟ್ರೋಲ್ ಬಾಂಡ್ ಹಗರಣದಲ್ಲಿ ಬಿಜೆಪಿಯವರು ಇಕ್ಕಟ್ಟಿಗೆ ಸಿಲುಕಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

RELATED ARTICLES

Latest News