ಅರಕಲಗೂಡು, ಜ.18- ತಾಲೂಕಿನ ಕೊಣನೂರು ತೂಗುಸೇತುವೆ ಬಳಿಯ ಕಾವೇರಿ ನದಿಯಲ್ಲಿ ಎರಡು ನೀರು ನಾಯಿಗಳು ಕಾಣಿಸಿಕೊಂಡಿದ್ದು, ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ನೀರು ನಾಯಿಗಳು ಜೋಡಿಯಾಗಿ ಕಲ್ಲಿನ ಮೇಲೆ ಮಲಗಿ ಬಿಸಿಲು ಕಾಯುತ್ತಿರುವ ದೃಶ್ಯ ಸ್ಥಳೀಯರ ಕಣ್ಣಿಗೆ ಬಿದ್ದಿದ್ದು, ಬೃಹತ್ ಗಾತ್ರದ ಮೀನುಗಳೆಂದು ಜನರು ಭಾವಿಸಿದ್ದರು. ನದಿ ದಡದಲ್ಲಿ ಬಟ್ಟೆ ತೊಳೆಯುವವರು, ಮೀನು ಹಿಡಿಯುವವರಿಗೆ ವಿಷಯ ಮುಟ್ಟಿಸಿದಾಗ ಜೋರಾಗಿ ಜನರು ಕೂಗಿಕೊಂಡ ವೇಳೆ ನೀರಿನಲ್ಲಿ ಮುಳುಗಿ ಸಾಗಿವೆ.
ನದಿಯಲ್ಲಿ ನೀರಿನ ಹರಿವು ಕಡಿಮೆಗೊಂಡ ಹಿನ್ನೆಲೆಯಲ್ಲಿ ನೀರು ನಾಯಿಗಳು ಜನರಿಗೆ ಕಾಣಿಸಿಕೊಂಡಿವೆ. ಆದರೆ ಹಲವು ವರ್ಷಗಳಿಂದ ಕೊಣನೂರು, ರಾಮನಾಥಪುರ ಬಳಿ ಹರಿಯುವ ಕಾವೇರಿ ನದಿಯಲ್ಲಿ ನೀರು ನಾಯಿಗಳು ಕಾಣಿಸಿಕೊಂಡರಲಿಲ್ಲ. ತಾಲೂಕಿಗೆ ಮೀನು ಸರಬರಾಜು ಮಾಡುವ ಜಾಗಗಳು ಕೊಣನೂರು, ರಾಮನಾಥಪುರವಾಗಿದೆ.
ಇಂತಹ ಸ್ಥಳದಲ್ಲಿ ಏಕಾಏಕಿ ನೀರು ನಾಯಿಗಳು ಜಂಟಿಯಾಗಿ ಕಾಣಿಸಿಕೊಂಡು ಮೀನುಗಳನ್ನು ಬೇಟೆಯಾಡುತ್ತಿರುವ ದೃಶ್ಯ ಮೀನುಗಾರರು, ದನಕರುಗಳಿಗೆ ನೀರು ಕುಡಿಸುವ ರೈತರು, ನದಿಯಲ್ಲಿ ಈಜುರುವವರು ಹಾಗೂ ಬಟ್ಟೆ ತೊಳೆಯುವರಲ್ಲಿ ಆತಂಕ, ಭಯವನ್ನುಂಟುಮಡಿದೆ.
ಇತ್ತೀಚೆಗೆ ಕಟ್ಟೇಪುರ ಅಣೆಕಟ್ಟೆ ಹಿನ್ನೀರಿನಲ್ಲಿ ಭಾರೀ ಗಾತ್ರದ ಮೊಸಳೆಯೊಂದು ಕಾಣಿಸಿಕೊಂಡು ಆತಂಕವನ್ನುಂಟುಮಾಡಿತ್ತು. ಈಗ ಎರಡು ನೀರು ನಾಯಿಗಳು ಕಾಣಿಸಿಕೊಂಡಿರುವುದು ಜನರಲ್ಲಿ ಭಯ ಉಂಟುಮಾಡಿದೆ.
