ಬೆಂಗಳೂರು,ಜ.27- ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿ ರಾಜ್ಯಪಾಲರು ನಿರ್ಗಮಿಸುವ ವೇಳೆ ಅನುಚಿತವಾಗಿ ವರ್ತಿಸಿ ಅಗೌರವ ತೋರಿಸಿದ ಸದಸ್ಯರ ಅಮಾನತು, ಬಳ್ಳಾರಿ ಗಲಾಟೆ, ಅಬಕಾರಿ ಲಂಚ ಪ್ರಕರಣದಲ್ಲಿ ಸಚಿವರ ರಾಜೀನಾಮೆ, ಕುಸಿದು ಬಿದ್ದಿರುವ ಕಾನೂನು ಸುವ್ಯವಸ್ಥೆ ಸೇರಿದಂತೆ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ ಬಿಜೆಪಿ-ಜೆಡಿಎಸ್ ದೋಸ್ತಿ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸಿದವು.
ವಿಧಾನಸೌಧ-ವಿಕಾಸಸೌಧದ ಮಧ್ಯಭಾಗದಲ್ಲಿರುವ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ .ವಿಜಯೇಂದ್ರ, ವಿಧಾನ ಮಂಡಲದ ಉಭಯ ಸದನಗಳ ಪ್ರತಿಪಕ್ಷದ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಪರಿಷತ್ ಸದಸ್ಯರಾದ ಬೋಜೇಗೌಡ, ಟ.ಎ.ಶರವಣ ಸೇರಿದಂತೆ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಒಂದು ಕಡೆ ಕಾಂಗ್ರೆಸ್, ಕೇಂದ್ರ ಸರ್ಕಾರ ಮನ್ರೇಗಾ ಯೋಜನೆ ತಿದ್ದುಪಡಿ ಮಾಡಿರುವುದನ್ನು ವಿರೋಧಿಸಿ ರಾಜಭವನ ಮುತ್ತಿಗೆ ಹಾಕಲು ಯತ್ನಿಸಿದರೆ, ಇತ್ತ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮುಂದಿಟ್ಟುಕೊಂಡು ದೋಸ್ತಿ ಪಕ್ಷಗಳು ಬೃಹತ್ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಿದವು.
ಪ್ರತಿಭಟನೆಯಲ್ಲಿ ಮಾತನಾಡಿದ ಬಹುತೇಕ ನಾಯಕರು ಸರ್ಕಾರದ ಭ್ರಷ್ಟಾಚಾರ, ಅಬಕಾರಿ ಇಲಾಖೆಯಲ್ಲಿ ಸಚಿವ ಆರ್.ವಿ. ತಿಮಾಪುರ ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣ ಇತ್ತೀಚಿಗೆ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯ ಸರ್ಕಾರಿ ಅಧಿಕಾರಿಗಳ ಮೇಲೆ ಗೂಂಡಾಗಿರಿ ಅಧಿವೇಶನದಲ್ಲಿ ರಾಜ್ಯಪಾಲರ ಜೊತೆ ಅನುಚಿತವಾಗಿ ವರ್ತಿಸಿದ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರನ್ನು ತಕ್ಷಣವೇ ಸದನದಿಂದ ಅನಿರ್ದಿಷ್ಟಗಳ ಕಾಲ ಅಮಾನತು ಪಡಿಸುವಂತೆ ಒತ್ತಾಯ ಮಾಡಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರನ್ನು ಜೀತದಾಳು ರೀತಿ ರೆಡ್ಡಿಯವರು ನಡೆಸಿಕೊಳ್ಳುತ್ತಾರೆ. ಕಾಂಗ್ರೆಸ್ ಪಕ್ಷದವರು ಮಾನ ಮರ್ಯಾದೆ ಬಿಟ್ಟು ಲೋಕಭವನಕ್ಕೆ ಮುತ್ತಿಗೆ ಹಾಕಲು ಮುಂದಾಗಿದ್ದಾರೆ. ಯಾವ ನೈತಿಕತೆ ಮೇಲೆ ಮುತ್ತಿಗೆ ಹಾಕುತ್ತಿದ್ದೀರಿ? ಎಂದು ಪ್ರಶ್ನೆ ಮಾಡಿದರು.
ರಾಜ್ಯಪಾಲರು ಕಾರ್ಯಂಗದ ಮುಖ್ಯಸ್ಥರು ಅವರು ಹೇಗೆ ನಡೆದುಕೊಳ್ಳಬೇಕು? ಹೇಗೆ ಕಾರ್ಯ ನಿರ್ವಹಿಸಬೇಕು? ಎಂಬುದು ಅವರಿಗೆ ಗೊತ್ತಿದೆ ನೀವು ಹೇಳಿದಂತೆ ಕೇಳಲು ಸಾಧ್ಯವಿಲ್ಲ. ರಾಜ್ಯಪಾಲರು ತಮ ವಿವೇಚನೆ ಬಳಸಿಕೊಂಡು ಸಂವಿಧಾನಬದ್ಧವಾಗಿ ಕರ್ತವ್ಯ ನಿರ್ವಹಿಸುತ್ತಾರೆ. ನಿಮ ತಾಳಕ್ಕೆ ತಕ್ಕಂತೆ ಕುಣಿಯದಿದ್ದರೆ ರಾಜ್ಯಪಾಲರೇ ಸರಿ ಇಲ್ಲ ಎಂದು ಹೇಳುವುದು ಎಷ್ಟರ ಮಟ್ಟಿಗೆ ಸರಿ ? ಎಂದು ತರಾಟೆಗೆ ತೆಗೆದುಕೊಂಡರು.
ಗ್ರಾಮೀಣ ಭಾಗದಲ್ಲಿ ಸರ್ಕಾರವೇ ಜನರಿಗೆ ಹೆಂಡ ಕುಡಿಸುವ ಕೆಲಸವನ್ನು ಮಾಡುತ್ತಿದೆ ಅನೇಕ ಕಡೆ ಮದ್ಯವನ್ನು ಎಗ್ಗಿಲ್ಲದೆ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳಿಗೆ ಟಾರ್ಗೆಟ್ ನೀಡಿರುವುದರಿಂದ ಯಥೇಚ್ಛವಾಗಿ ಅಕ್ರಮವಾಗಿ ಮಾರಾಟಕ್ಕೆ ಅನುವು ಮಾಡಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯನವರಿಗೆ ಇದು ಗೊತ್ತಿಲ್ಲವೇ ? ಎಂದು ಪ್ರಶ್ನಿಸಿದರು.
ಅಬಕಾರಿ ಇಲಾಖೆಯಲ್ಲಿ ಅಧಿಕಾರಿಗಳು ಕೋಟಿ ಕೋಟಿ ಕೊಟ್ಟು ಪೋಸ್ಟಿಂಗ್ ಮಾಡಿಸಿಕೊಳ್ಳಬೇಕಾದ ವಾತಾವರಣವಿದೆ. ಲಂಚವಿಲ್ಲದೆ ಅಲ್ಲಿ ಏನು ನಡೆಯುವುದಿಲ್ಲ. ಎಲ್ಲವೂ ಸಚಿವರ ಮೂಗಿನ ನೇರಕ್ಕೆ ನಡೆಯುತ್ತದೆ. ಸಾರ್ವಜನಿಕ ಜೀವನದಲ್ಲಿರುವ ನಿಮಗೆ ಘನತೆ ಗೌರವ ಇದ್ದಿದ್ದರೆ ಇಷ್ಟೊತ್ತಿಗೆ ನಿಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಗೌರವಿತವಾಗಿ ನಿರ್ಗಮಿಸಬೇಕಿತ್ತು. ಬದಲಿಗೆ ಅವರ ಕಾಲದಲ್ಲಿ ಹಾಗಿತ್ತು, ನಮ ಕಾಲದಲ್ಲಿ ಹೀಗಿದೆ ಎಂದು ಇಲ್ಲದ ಕಾರಣಗಳನ್ನು ಹೇಳುತ್ತಿದ್ದಾರೆ. ಅವರ ರಾಜೀನಾಮೆ ಪಡೆಯುವವರೆಗೂ ನಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.
ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ವೈನ್ ಸ್ಟೋರ್, ಬಾರ್ಗಳಲ್ಲಿ ಮಂತ್ಲಿ ಫಿಕ್್ಸಆಗಿದೆ. ಅಬಕಾರಿ ಇಲಾಖೆಯ ಅಕ್ರಮದಲ್ಲಿ ಸಿಎಂಗೂ ಪಾಲು ಇದೆ. ಇಲ್ಲದಿದ್ದಿದ್ದರೆ ಅವರು ಸಚಿವರ ರಾಜೀನಾಮೆ ಪಡೆಯುತ್ತಿದ್ದರು. ಸಿಎಂಗೆ ಅಬಕಾರಿ ಅಕ್ರಮ ಕಾಣುತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಸಿಎಂ ಧೃತರಾಷ್ಟ್ರನ ಹಾಗೆ ಕಣುಚ್ಚಿ ಕೂತಿದ್ದಾರಾ? ಪಂಚ ರಾಜ್ಯಗಳಿಗೆ ಹಣ ಹೋಗುತ್ತಿದೆ. ಹೀಗಾಗಿ ಸಿಎಂ ತಮಗೆ ಏನೂ ಗೊತ್ತಿಲ್ಲ ಎಂದು ಸುಮನಿದ್ದಾರೆ. ದೊಡ್ಡ ಭ್ರಷ್ಟಾಚಾರ ಆಗುತ್ತಿದೆ, ಮಂತ್ರಿಗಳ ರಾಜೀನಾಮೆ ಆಗಲೇಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರಕ್ಕೆ ಜವಾಬ್ದಾರಿ ಇಲ್ಲ. ಜನರನ್ನು ದಾರಿ ತಪ್ಪಿಸಲು ಈ ಪ್ರತಿಭಟನೆ ನಡೆಸುತ್ತಿದ್ದಾರೆ. ಇದು ಭ್ರಷ್ಟಾಚಾರದ ಸರ್ಕಾರ. ಭ್ರಷ್ಟಾಚಾರ, ಕುರ್ಚಿ ಕಲಹ ವಿಷಯಾಂತರ ಮಾಡಲು ಅವರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಡಳಿತ ಪಕ್ಷವಾಗಿ ಅವರೇ ಪ್ರತಿಭಟನೆ ಮಾಡುವುದು ನಾಚಿಕೆಗೇಡು ಎಂದು ವಾಗ್ದಾಳಿ ನಡೆಸಿದರು.
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶಬಾಬು ಮಾತನಾಡಿ, ಈ ಸರ್ಕಾರ ಎಲ್ಲ ರೀತಿಯಲ್ಲಿ ಭ್ರಷ್ಟ ಹಾಗೂ ಲೂಟಿ ಮಾಡುತ್ತಿದೆ. ಇದೇ ಕರ್ತವ್ಯ ಆಗಿದೆ. ಸಾರ್ವಜನಿಕರಂತೂ ಬೇಸತ್ತು ಹೋಗಿದ್ದಾರೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಜನರ ಬಳಿ ತೆರಿಗೆ ವಸೂಲಿ ಮಾಡಿ ಬೆಲೆ ಏರಿಕೆ ಮಾಡುತ್ತಿದ್ದಾರೆ. 6 ಸಾವಿರ ಕೋಟಿ ಲೂಟಿ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರಿಗೆ ನೈತಿಕತೆ ಇದೆಯೇ? ಲೂಟಿ ಮಾಡಿದ ಸಚಿವರನ್ನು ಇಟ್ಟುಕೊಂಡು ಕೆಲಸ ಮಾಡಿಸುತ್ತಿದ್ದೀರಾ? ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೀರಾ ಎಂದು ಪ್ರಶ್ನಿಸಿದರು.
ಮಾಜಿ ಉಪಮುಖ್ಯಮಂತ್ರಿ ಹಾಗೂ ಶಾಸಕ ಡಾ.ಸಿ.ಎನ್ ಆಶ್ವತ್್ಥ ನಾರಾಯಣ ಮಾತನಾಡಿ, ಕಾಂಗ್ರೆಸ್ನದು ಗೂಂಡಾಗಿರಿ ಸಂಸ್ಕೃತಿ. ಭ್ರಷ್ಟಾಚಾರ ಸರ್ಕಾರದಲ್ಲಿ ಹೆಚ್ಚಾಗಿದೆ. ಅಬಕಾರಿ ಭ್ರಷ್ಟಾಚಾರ ಮಿತಿಮೀರಿದೆ. ಅಬಕಾರಿ ಸಚಿವರ ವಿರುದ್ಧ ಸಾಕ್ಷಿ ಸಿಕ್ಕಿದೆ. ಅವರು ಆರೋಪ ನಿರಾಕರಿಸಿದರೂ ದಾಖಲೆ ಇವೆಯಲ್ಲ.ಸಚಿವರು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಳ್ಳುತ್ತಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಸುರೇಶ್ಕುಮಾರ್, ಜನಾರ್ದನರೆಡ್ಡಿ, ವಿಧಾನಸಭೆಯ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ್, ಎನ್.ರವಿಕುಮಾರ್, ಎಸ್.ರಘು, ಭರತ್ಶೆಟ್ಟಿ, ಅರಗ ಜ್ಞಾನೇಂದ್ರ, ಕೆ.ಗೋಪಾಲಯ್ಯ, ಬಿ.ಪಿ.ಹರೀಶ್, ಮುನಿರಾಜು, ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಹನುಮಂತ್ ನಿರಾಣಿ, ಸಿ.ಟಿ.ರವಿ ಸೇರಿದಂತೆ ಎರಡೂ ಪಕ್ಷಗಳ ಶಾಸಕರು ಹಾಗೂ ವಿಧಾನಪರಿಷತ್ ಸದಸ್ಯರು ಭಾಗವಹಿಸಿದ್ದರು.
