ಬೆಂಗಳೂರು,ಜ.29- ಕಳೆದ 2025 ರ ಜನವರಿ ತಿಂಗಳಲ್ಲಿ ರಾಜ್ಯಸರ್ಕಾರದಿಂದ ಪಡಿತರ ಚೀಟಿದಾರರಿಗೆ ಹಣ ಜಮಾ ಮಾಡಿಲ್ಲ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್.ಮುನಿಯಪ್ಪ ವಿಧಾನಸಭೆಗೆ ಇಂದು ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ಮಹೇಶ್ ಟೆಂಗಿನಕಾಯಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಆ ತಿಂಗಳಿನಲ್ಲಿ ರಾಜ್ಯಸರ್ಕಾರದ ಅಕ್ಕಿಯನ್ನೂ ನೀಡಿಲ್ಲ. ಹಣಕಾಸು ಇಲಾಖೆಯಿಂದ ನಮ ಇಲಾಖೆ ಆ ತಿಂಗಳ ಹಣವನ್ನೂ ಪಡೆದಿಲ್ಲ ಎಂದು ಹೇಳಿದರು.ಕೇಂದ್ರ ಸರ್ಕಾರದ ಆದೇಶವನ್ನು ಪಾಲನೆ ಮಾಡಿದ್ದರಿಂದ ಈ ರೀತಿ ಆಗಿದೆ ಎಂದು ಸ್ಪಷ್ಟನೆ ನೀಡಿದರು.
ನಮ ಸರ್ಕಾರ ಅಧಿಕಾರಕ್ಕೆ ಬಂದಾಗ ಮುಕ್ತ ಮಾರುಕಟ್ಟೆಯಲ್ಲಿ ಅಕ್ಕಿ ಕೊಡುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಸಾಕಷ್ಟು ದಾಸ್ತಾನು ಇತ್ತು. ಕೇಂದ್ರ ಸರ್ಕಾರ ಪ್ರತಿ ಫಲಾನುಭವಿಗೆ 5 ಕೆಜಿ ಅಕ್ಕಿ ನೀಡುತ್ತಿತ್ತು. ಜೊತೆಗೆ ರಾಜ್ಯಸರ್ಕಾರವೂ 5 ಕೆಜಿ ಅಕ್ಕಿ ಕೊಡುವುದಾಗಿ ಭರವಸೆ ನೀಡಿತ್ತು. ಆದರೆ 2-3 ತಿಂಗಳು ಕಳೆದರೂ ಕೇಂದ್ರ ಸರ್ಕಾರ ಅಕ್ಕಿ ಕೊಡಲಿಲ್ಲ.
ಹೀಗಾಗಿ ಪ್ರತಿ ಫಲಾನುಭವಿಗೆ ಮಾಸಿಕ 170 ರೂ.ಗಳಂತೆ 2023 ರ ಜುಲೈನಿಂದ 2024-25 ರವರೆಗೆ ಡಿಬಿಟಿ ಮೂಲಕ ನೇರವಾಗಿ ಹಣವನ್ನು ಫಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿತ್ತು ಎಂದರು.
2025ರ ಜ. 17 ರಂದು ಕೇಂದ್ರ ಸರ್ಕಾರ ಅಕ್ಕಿ ಕೊಡುವುದಾಗಿ ಹೇಳಿತ್ತು. ಕೇಂದ್ರ ಸರ್ಕಾರದಿಂದ ಪತ್ರ ವ್ಯವಹಾರ ಮಾಡುವಷ್ಟರಲ್ಲಿ ಫೆಬ್ರವರಿ ತಿಂಗಳು ಬಂದುಬಿಟ್ಟಿತ್ತು. ಹೀಗಾಗಿ ಮಾರ್ಚ್ನಲ್ಲಿ 15 ಕೆಜಿ ಅಕ್ಕಿ ಕೊಟ್ಟಿದ್ದೇವೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಮಹೇಶ್ ಟೆಂಗಿನಕಾಯಿ, 2025 ರ ಜನವರಿ ತಿಂಗಳ ಹಣವನ್ನು ಫಲಾನುಭವಿಗಳಿಗೆ ನೀಡಿಲ್ಲ. 657 ಕೋಟಿ ರೂ. ಏನಾಯಿತು?, ಏಕೆ ಕೊಡಲಿಲ್ಲ? ಎಂದು ಪ್ರಶ್ನಿಸಿದರು.ಆ ತಿಂಗಳ ಹಣವನ್ನೇ ರಾಜ್ಯಸರ್ಕಾರ ಬಳಕೆ ಮಾಡಿಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು.
