ಬೆಂಗಳೂರು, ಮಾ.14– ರಾಜ್ಯದಲ್ಲಿ ಯಾವ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ. ಹೊಸ ವಿಶ್ವವಿದ್ಯಾಲಯ ಗಳನ್ನು ಮುಂದುವರೆಸಬೇಕೋ ಬೇಡವೋ ಎಂಬ ಬಗ್ಗೆ ಅಧ್ಯಯನ ನಡೆಸಲು ಸಚಿವ ಸಂಪುಟ ಉಪ ಸಮಿತಿ ರಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ಶಾಸಕರು ನೀಡಿದ್ದ ನಿಲುವಳಿ ಸೂಚನೆಯ ಕುರಿತು ವಿಧಾನಸಭೆಯ ಪ್ರಶ್ನೋತ್ತರದ ಕಲಾಪದ ಬಳಿಕ ಪ್ರಸ್ತಾಪಿಸಿದಾಗ, ಇದು ಬಜೆಟ್ ಅಧಿವೇಶನ. ಈ ಹಂತದಲ್ಲಿ ಪ್ರತಿ ದಿನ ಒಂದೊಂದು ನಿಲುವಳಿ ಸೂಚನೆ ಹಿಡಿದು ಬಂದರೆ ಕಲಾಪ ಹೇಗೆ ನಡೆಸುವುದು. ಬಜೆಟ್ ಮೇಲೆ ಚರ್ಚೆ ಮಾಡುವಾಗಲೇ ಎಲ್ಲಾ ವಿಚಾರಗಳನ್ನು ಪ್ರಸ್ತಾಪಿಸಬಹುದಲ್ಲವೇ ಎಂದು ಸಭಾಧ್ಯಕ್ಷರು ಹೇಳಿದರು.
ಇದು ತುರ್ತು ವಿಚಾರ ಅಲ್ಲ. ಆದರೂ ನಿಲುವಳಿ ಸೂಚನೆಯ ಅಡಿ ಚರ್ಚೆಗೆ ಅವಕಾಶ ಇಲ್ಲ. ಬಜೆಟ್ ಮೇಲೆ ಮಾತನಾಡುವಾಗ ಪ್ರಸ್ತಾಪಿಸಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೆಪಿಎಸ್ಸಿ ವಿಚಾರ ಚರ್ಚೆಗೆ ಅವಕಾಶ ನೀಡಿದಂತೆ ವಿಶ್ವವಿದ್ಯಾಲಯಗಳ ವಿಚಾರ ಪ್ರಸ್ತಾಪಕ್ಕೂ ಸಮಯ ಕೊಡಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಲಹೆ ನೀಡಿದರು. ಸಾರ್ವಜನಿಕ ವಿಚಾರವಾಗಿ ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿಕೊಟ್ಟರು. ಅದಕ್ಕೆ ಸಭಾಧ್ಯಕ್ಷರು ಸಹಮತ ವ್ಯಕ್ತ ಪಡಿಸಿದರು.
ಆದರೂ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಪ್ರತಿಯೊಬ್ಬರ ಜೀವನದಲ್ಲೂ ಶಿಕ್ಷಣ ಅತ್ಯಂತ ಮಹತ್ವದ್ದು, ವಿಶ್ವವಿದ್ಯಾಲಯಗಳನ್ನು ಮುಚ್ಚುವ ಮೂಲಕ ಆತಂಕ ನಿರ್ಮಾಣ ಮಾಡಲಾಗುತ್ತಿದೆ ಎಂದು ದೂರಿದರು.
ಆಗ ಮುಖ್ಯಮಂತ್ರಿಯವರು ವಿಶ್ವವಿದ್ಯಾಲಯಗಳನ್ನು ಮುಚ್ಚುವುದಿಲ್ಲ ಎಂದು ಸ್ಪಷ್ಟ ನೀಡಿದರು. ಆರ್ಥಿಕ ಕಾರಣಗಳಿಗಾಗಿ ಸರ್ಕಾರ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದೆ ಎಂದು ಅಶ್ವಥನಾರಾಯಣ ಟೀಕಿಸಿದಾಗ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ವಿರೋಧ ವ್ಯಕ್ತಪಡಿಸಿದರು. ನಿಯಮ 69ರಡಿ ಚರ್ಚೆಗೆ ಅವಕಾಶ ಮಾಡಿಕೊಟ್ಟಾಗಿಯೂ ಈಗ ಪ್ರಸ್ತಾಪ ಮಾಡುತ್ತಿರುವುದೇಕೆ ಎಂದು ಸಭಾಧ್ಯಕ್ಷರು ಪ್ರಶ್ನಿಸಿದರು.
ಅಶ್ವಥ ನಾರಾಯಣ, ದಂತ ವೈದ್ಯರು ಅವರಿಗೆ ಹಲ್ಲು ಕೀಳುವುದಷ್ಟೆ ಗೊತ್ತು ಜೋಡಿಸುವುದು ಗೊತ್ತಿಲ್ಲ. ಇಲ್ಲಿ ಚರ್ಚೆಯಾಗುವ ಮುನ್ನವೇ ವಿಶ್ವವಿದ್ಯಾಲಯಗಳನ್ನು ಮುಚ್ಚಿ ಬಿಟ್ಟರೆ ಎಂಬ ಆತಂಕ ಅವರನ್ನು ಕಾಡುತ್ತಿದೆ ಎಂದರು.
ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿಯವರು, ವಿಶ್ವವಿದ್ಯಾಲಯಗಳನ್ನು ಮುಂದುವರೆಸಬೇಕೆ, ಬೇಡವೇ ಎಂಬ ಬಗ್ಗೆ ಅಧ್ಯಯನ ನಡೆಸಲು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಚಿವ ಸಂಪುಟ ಉಪಸಮಿತಿ ರಚಿಸಿಲಾಗಿದೆ. ಅವರು ಇನ್ನೂ ವರದಿ ನೀಡಿಲ್ಲ. ಈ ಹಂತದಲ್ಲಿ ಚರ್ಚೆ ಮಾಡುವುದು ಅವಧಿ ಪೂರ್ವವಾಗುತ್ತದೆ ಎಂದರು.
ಆರ್.ಅಶೋಕ್, ಈ ವಿಷಯವಾಗಿ ಉಪಮುಖ್ಯಮಂತ್ರಿಯವರು, ಉನ್ನತ ಶಿಕ್ಷಣ ಸಚಿವರು ಹಾಗೂ ಮುಖ್ಯಮಂತ್ರಿಯವರು ಬೇರೆ ಬೇರೆ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ನಮಗೆ ಆತಂಕ ಮೂಡಿಸಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಶ್ವವಿದ್ಯಾಲಯ ಮುಚ್ಚಲು ತೀರ್ಮಾನಿಸಲಾಗಿದೆ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಬಾಗಿಲು ಹಾಕುತ್ತೇವೆ ಬೀಗ ಹಾಕಲ್ಲ ಎಂಬರ್ಥದಲ್ಲಿ ಮುಖ್ಯಮಂತ್ರಿ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.
ವಿಶ್ವವಿದ್ಯಾಲಯಗಳ ವಿಚಾರ ಇತ್ತೀಚಿನದಲ್ಲ. ಸಚಿವ ಸಂಪುಟ ಉಪಸಮಿತಿ ವರದಿ ನೀಡಲಿ, ಅದನ್ನು ಸಚಿವ ಸಂಪುಟ ಸಭೆಯಲ್ಲಿಟ್ಟು ಸೂಕ್ತ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಮುಖ್ಯಮಂತ್ರಿಸ್ಪಷ್ಟನೆ ನೀಡಿದರು.