ಬೆಂಗಳೂರು,ಫೆ.10- ಶಕ್ತಿಸೌಧ ವಿಧಾನಸೌಧದಲ್ಲೇ ಸಚಿವರೊಬ್ಬರ ಕಚೇರಿಯ ಪಡಸಾಲೆಯಲ್ಲಿ ಆಭರಣವಿದ್ದ ಬ್ಯಾಗ್ ಕಳ್ಳತನ ಮಾಡಿಕೊಂಡು ಹೋಗಿದ್ದ ಡಿ ಗ್ರೂಪ್ ನೌಕರನನ್ನು ವಿಧಾನ ಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ಕಚೇರಿಗೆ ನವೀನ್ ಎಂಬವರು ಕೆಲಸದ ನಿಮಿತ್ತ ಬಂದಿದ್ದಾಗ ಪಡಸಾಲೆಯಲ್ಲಿ ತಾವು ತಂದಿದ್ದ 300 ಗ್ರಾಂ ಚಿನ್ನಾಭರಣ ಹಾಗೂ 1.50 ಲಕ್ಷ ಹಣವಿದ್ದ ಬ್ಯಾಗ್ಇಟ್ಟಿದ್ದರು.ತಮ ಕೆಲಸ ಮುಗಿದ ನಂತರ ನವೀನ್ ಅವರು ಬ್ಯಾಗ್ ತೆಗೆದುಕೊಳ್ಳದೇ ಮರೆತು ಬಿಟ್ಟು ಹೋಗಿದ್ದಾರೆ.
ನಂತರ ಬ್ಯಾಗ್ ನೆನಪಾಗಿದೆ. ಮಾರನೇ ದಿನ ಅವರು ವಿಧಾನಸೌಧಕ್ಕೆ ಬಂದು ಬ್ಯಾಗ್ ಇಟ್ಟಿದ್ದ ಸ್ಥಳದಲ್ಲಿ ನೋಡಿದಾಗ ಬ್ಯಾಗ್ ಇರಲಿಲ್ಲ. ಇದರಿಂದ ಗಾಬರಿಗೊಂಡ ನವೀನ್ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ವಿಧಾನಸೌಧ ಪಡಸಾಲೆಯಲ್ಲಿ ಕಳ್ಳತನ ನಡೆದಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಭದ್ರತಾ ಸಿಬ್ಬಂದಿ ಸಿಸಿ ಟಿವಿ ಪರಿಶೀಲನೆ ನಡೆಸಿದಾಗ, ವಿಧಾನಸೌಧದ ಆಡಳಿತ ಮತ್ತು ಭದ್ರತಾ ಸಿಬ್ಬಂದಿ ಸುಧಾರಣೆ ಇಲಾಖೆಯ (ಡಿಪಿಎಆರ್) ಡಿ ಗ್ರೂಪ್ ನೌಕರ ಆ ಬ್ಯಾಗ್ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ.
ತಕ್ಷಣ ಪೊಲೀಸರು ಆ ನೌಕರನನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ವಿಧಾನಸೌಧ ಸಂಪೂರ್ಣವಾಗಿ ಪೊಲೀಸರು ಹಾಗೂ ಸಿಸಿ ಟಿವಿ ಕಣ್ಗಾವಲಿನಲ್ಲಿ ಇದೆ ಎಂಬುವುದು ತಿಳಿದಿದ್ದರೂ ಸಹ ಈ ನೌಕರ ಬ್ಯಾಗ್ನ್ನು ತೆಗೆದಿಟ್ಟು ಪ್ರಮಾಣಿಕತೆ ಮೆರೆಯದಿರುವುದು ಭದ್ರತೆಯನ್ನು ಪ್ರಶ್ನಿಸುವಂತಾಗಿದೆ.
