ನವದೆಹಲಿ, ನ.28- ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಭೇಟಿ ನೀಡಿ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ದೊರೆತಿರು ವುದು ನನಗೆ ಸಿಕ್ಕ ಪುಣ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಭಾವುಕರಾಗಿದ್ದಾರೆ.
ಗೀತಾ ಪಠಣಕ್ಕಾಗಿ ಸಮಾಜದ ವಿವಿಧ ವರ್ಗಗಳ ಜನರನ್ನು ಒಂದೆಡೆ ಸೇರಿಸುವ ವಿಶೇಷ ಕಾರ್ಯಕ್ರಮ ಇದಾಗಿದೆ. ಉಡುಪಿ ಮಠವು ನಮ್ಮ ಸಾಂಸ್ಕೃತಿಕ ಜೀವನದಲ್ಲಿ ಅತ್ಯಂತ ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀ ಮಧ್ವಾಚಾರ್ಯರಿಂದ ಪ್ರೇರಿತವಾದ ಈ ಮಠವು, ಸಮಾಜ ಸೇವೆಯಲ್ಲಿ ಮುಂಚೂಣಿಯಲ್ಲಿದೆ ಎಂದು ಮೋದಿ ಎಕ್ಸ್ ಮಾಡಿದ್ದಾರೆ.
ಇಂದು ವಿಶೇಷ ವಿಮಾನದಲ್ಲಿ ಬೆಳಗ್ಗೆ ಮಂಗಳೂರಿಗೆ ಬಂದಿಳಿದ ಪ್ರಧಾನಿ ಮೋದಿ, ಸೇನಾ ಹೆಲಿಕಾಫ್ಟರ್ನಲ್ಲಿ ಉಡುಪಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಅವರು ಕಿಕ್ಕಿರಿದು ಸೇರಿದ್ದ ಜನ ಸಮೂಹದ ನಡುವೆ ರಥಬೀದಿಯಲ್ಲಿ ರಸ್ತೆ ಮೂಲಕ ದೇವಾಲಯಕ್ಕೆ ಆಗಮಿಸಿದರು.
ಮೋದಿ ರೋಡ್ ಶೋ ವೇಳೆ ಜನ ಮೋದಿ ಮೋದಿ ಎಂದು ಜೈಕಾರ ಕೂಗಿದರು. ನಂತರ ಅವರು ಸುವರ್ಣ ಕನಕನ ಕಿಂಡಿ ಲೋಕಾರ್ಪಣೆ ಮಾಡಿ ಕಿಂಡಿ ಮೂಲಕ ಶ್ರೀ ಕೃಷ್ಣನ ದರ್ಶನ ಪಡೆದರು. ನಂತರ ಅವರು ಕನಕದಾಸರ ಗುಡಿ ದರ್ಶನ ಮಾಡಿ ಮಠಕ್ಕೆ ಆಗಮಿಸಿ ಮಧ್ವ ಸರೋವರದಲ್ಲಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡರು.
ನಂತರ ಚಿನ್ನದ ತೀರ್ಥ ಮಂಟಪವನ್ನು ಉದ್ಘಾಟಿಸಿ, ಅಷ್ಟಮಠಾಧೀಶರನ್ನು ಭೇಟಿ ಮಾಡಿ ಪ್ರಸಾದ ಸ್ವೀಕರಿಸಿ ಗೀತಾ ಮಂದಿರಕ್ಕೆ ಆಗಮಿಸಿದರು.ಬಿಗಿ ಬಂದೋಬಸ್ತ್; ಪ್ರಧಾನಿ ಮೋದಿ ಭೇಟಿ ಹಿನ್ನೆಲೆಯಲ್ಲಿ ಉಡುಪಿ ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ.
ಎರಡು ಕಿಲೋಮೀಟರ್ವರೆಗೆ ರಸ್ತೆಯಲ್ಲಿ ಬಾಂಬ್ ಸ್ಕ್ವಾಡ್ ಗಸ್ತು ನಿಯೋಜಿಸಲಾಗಿದೆ. ಹೆಲಿಪ್ಯಾಡ್ ವಠಾರ, ಶ್ರೀಕೃಷ್ಣ ಮಠ ವಠಾರ, ಪ್ರವಾಸಿ ಮಂದಿರದ ಸುತ್ತಮುತ್ತ ಅಂಗಡಿ ಮುಂಗಟ್ಟು ಮುಚ್ಚಲು ಸೂಚಿಸಲಾಗಿದೆ. ಅಲ್ಲದೇ ಪ್ರಧಾನಿ ಮೋದಿ ಸಂಚರಿಸುವ ಮಾರ್ಗದ ಅಂಗಡಿ ಮುಂಗಟ್ಟು ಮುಚ್ಚಲು ಸೂಚನೆ ನೀಡಲಾಗಿದೆ. ಸಂಜೆ 6 ಗಂಟೆಯವರೆಗೆ ನಗರದ 5 ಕಿ.ಮೀ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟ ನಿಷೇಧಿಸಲಾಗಿದೆ.
