ಕುಣಿಗಲ್,ಫೆ.17- ಮಧ್ಯರಾತ್ರಿ ಊಟಕ್ಕೆ ಹಣ ಕೇಳುವ ನೆಪದಲ್ಲಿ ಬಂದ ಇಬ್ಬರು ಮಹಿಳೆಯರು ಚಾಲಕನನ್ನು ಪುಸಲಾಯಿಸಿ ವಾಹನದಿಂದ ಕೆಳಗೆ ಇಳಿಸುತ್ತಿದ್ದಂತೆ ಇನ್ನಿಬ್ಬರು ವ್ಯಕ್ತಿಗಳು ಚಾಲಕನ ಮೇಲೆ ಹಲ್ಲೆ ನಡೆಸಿ ಕ್ಯಾಂಟರ್ ಕಳುವು ಮಾಡಿಕೊಂಡು ಹೋಗಿರುವ ಘಟನೆ ಪಟ್ಟಣದ ಚಿಕ್ಕಕೆರೆ ಸಮೀಪ ನಡೆದಿದೆ.
ಹಲ್ಲೆಗೊಳಗಾದ ಚಾಲಕನನ್ನು ಹನುಮಂತ ಎಂದು ಗುರುತಿಸಲಾಗಿದ್ದು ಈತ ಪಟ್ಟಣದ ಗುಜಾರಿ ಮೊಹಲ್ಲಾದ ಮಹಮದ್ ಅಬ್ರರ್ ಎಂಬುವರ ಕ್ಯಾಂಟರ್ ವಾಹನದ ಚಾಲಕನಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.
ಮೊನ್ನೆ ರಾತ್ರಿ ಮಾಲೀಕ ಮನೆಗೆ ತೆರಳಿದ್ದು ಚಾಲಕ ಹನುಮಂತ ಕ್ಯಾಂಟರ್ ವಾಹನದಲ್ಲೇ ಮಲಗಿದ್ದರು. ಮಧ್ಯರಾತ್ರಿ ಇಬ್ಬರು ಮಹಿಳೆಯರು ಚಾಲಕನನ್ನು ಎಬ್ಬಿಸಿ ತೀವ್ರ ಹೊಟ್ಟೆ ಹಸಿಯುತ್ತಿದೆ ಊಟ ಮಾಡಲು ಹಣ ನೀಡುವಂತೆ ಒತ್ತಾಯಿಸಿದರು.
ಚಾಲಕ ಇಲ್ಲ ಎಂದು ಹೇಳಿದರೂ ಪದೇ ಪದೇ ಒತ್ತಾಯಿಸಿ ಚಾಲಕನನ್ನು ವಾಹನದಿಂದ ಕೆಳಗೆ ಇಳಿಯುವಂತೆ ಮಾಡಿದ್ದಾರೆ. ಚಾಲಕ ಕೆಳಗೆ ಇಳಿಯುತ್ತಲೆ ಇಬ್ಬರು ಪುರುಷರು ಆಗಮಿಸಿ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ.
ಚಾಲಕ ಹಲ್ಲೆಯಿಂದ ಪಾರಾಗಲು ಸಮೀಪದಲ್ಲಿದ್ದ ಮಾಲೀಕರ ಮನೆಗೆ ಒಡಿಹೋಗಿ ವಿಷಯ ತಿಳಿಸಿದ್ದಾರೆ. ಆ ನಂತರ ಮಾಲೀಕರು ಚಾಲಕನ ಜೊತೆ ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ 33ಲಕ್ಷ ರೂ.ಮೌಲ್ಯದ ಕ್ಯಾಂಟರ್ ವಾಹನ ಕಳುವಾಗಿರುವುದು ಕಂಡು ಬಂದಿದೆ.
ಘಟನೆ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ ಸ್ಥಳೀಯ ಸಂಬಂಧಿಕರು ಹಾಗೂ ಸ್ನೇಹಿತರ ನೆರವಿನೊಂದಿಗೆ ರಾತ್ರಿಯಿಡಿ ವಾಹನ ಹುಡುಕಾಟ ನಡೆಸಿದ್ದಾರೆ.
ನಿನ್ನೆ ಬೆಳಗ್ಗೆ ಕಳುವಾದ ವಾಹನ ರಾಷ್ಟ್ರೀಯ ಹೆದ್ದಾರಿ 75ರ ಕುದೂರ್ ಹ್ಯಾಂಡ್ ಪ್ಟೋ್ ಸಮೀಪ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿ ವಾಹನವನ್ನು ವಾಪಸ್ ತಂದಿದ್ದಾರೆ.ವಾಹನದಲ್ಲಿದ್ದ ಕೆಲವು ಅಗತ್ಯ ವಸ್ತುಗಳು ಸೇರಿದಂತೆ ಸಾವಿರಾರು ಮೌಲ್ಯದ ವಸ್ತುಗಳು ಕಳುವಾಗಿದ್ದು ಘಟನೆ ಸಂಬಂಧ ಮಾಲೀಕ ಕುಣಿಗಲ್ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸಿಸಿ ಟಿವಿ ದೃಶ್ಯಾವಳಿಗಳನ್ನು ಆಧರಿಸಿ ನಾಲ್ವರು ದರೋಡೆಕೋರರ ಪತ್ತೆಗೆ ಬಲೆ ಬೀಸಿದ್ದಾರೆ.
