ಶಿವಮೊಗ್ಗ ,ಫೆ.24-ವಿಶೇಷ ತರಗತಿ ಮುಗಿಸಿ ಬರುತ್ತಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿಯನ್ನು ಗುಂಪೊಂದು ಅಡ್ಡಗಟ್ಟಿ ಥಳಿಸಿ ಕೊಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಕಳೆದ ರಾತ್ರಿ ಈ ದುರ್ಘಟನೆ ನಡೆದಿದ್ದು ಸಾಕೇತ್ ಎಂಬ ವಿದ್ಯಾರ್ಥಿಯನ್ನು ಥಳಿಸಿ ಕೊಲೆ ಮಾಡಲಾಗಿದೆ.
ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದ ಸಾಕೇತ್ ನಿನ್ನೆ ಸಂಜೆ ವಿಶೇಷ ತರಗತಿಯಲ್ಲಿ ಪಾಲ್ಗೊಂಡು ಶಾಲೆಯಿಂದ ಹೊರಬರುತ್ತಿದ್ದಂತೆ ಸುಮಾರು 5 ರಿಂದ 6 ಮಂದಿ ಅನ್ಯಕೋಮಿನ ವಿದ್ಯಾರ್ಥಿಗಳ ಗುಂಪು ಆತನ ಮೇಲೆ ಮನ ಬಂದಂತೆ ಥಳಿಸಿ ಕೊಲೆ ಮಾಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯಿಂದ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಸ್ಪಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಮೂಲಗಳ ಪ್ರಕಾರ ಗಿರೀಶ್ ಎಂಬ ಹುಡುಗನ ಜೊತೆ ಅನ್ಯಕೋಮಿನ ಹುಡುಗರು ಜಗಳವಾಡುತ್ತಿದ್ದರು. ಈ ವೇಳೆ ಅವರನ್ನು ಬಿಡಿಸಲು ಹೋದ ಸಾಕೇತ್ ಮೇಲೂ ಹಲ್ಲೆ ನಡೆಸಿದ್ದಾರೆ.
ಆ ಸಂದರ್ಭದಲ್ಲಿ ಕುಸಿದು ಬಿದ್ದ ಸಾಕೇತ್ನನ್ನು ನೋಡಿ ಹಲ್ಲೆ ನಡೆಸಿದ ಅಪ್ರಾಪ್ತ ಬಾಲಕರು ಅಲ್ಲಿಂದ ಪರಾರಿಯಾಗಿದ್ದಾರೆ.ತಕ್ಷಣ ಸಾಕೇತ್ನನ್ನು ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದರಾದರೂ ಚಿಕಿತ್ಸೆ ಫಲಿಸದೇ ಆತ ಕೊನೆ ಉಸಿರೆಳೆದಿದ್ದಾನೆ.ಸುಳೇಬೈಲೂರಿನಲ್ಲಿರುವ ಸಾಕೇತ್ ಅವರ ಪೋಷಕರು ಘಟನೆಯಿಂದ ಆತಂಕಗೊಂಡಿದ್ದು ಇರುವ ಒಬ್ಬ ಮಗನನ್ನೇ ಕಳೆದುಕೊಂಡು ಅವರ ಆಕ್ರಂದನ ಮುಗಿಲುಮುಟ್ಟಿದೆ.
ಕಳೆದ ರಾತ್ರಿ ಕಾರ್ಯಾಚರಣೆ ಕೈಗೊಂಡ ಪೊಲೀಸರು ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆದಿದ್ದಾರೆ.ಹಿಂದೂ ಬಾಲಕನನ್ನು ಕೊಲೆ ಮಾಡಿರುವುದು ಮತ್ತೆ ಶಿವಮೊಗ್ಗದಲ್ಲಿ ಕೋಮು ಭಾವನೆ ಕೆರಳಿಸಿದಂತಾಗಿದೆ.ಹಲವಾರು ಸಂಘಟನೆಗಳು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿವೆ. ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
