ಬೆಂಗಳೂರು, ಡಿ.2- ಸದ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರೇ ತಿಂಡಿ ತಿನ್ನುತ್ತಿದ್ದಾರೆ. ನಮನ್ನು ಕರೆದರೆ ನಾವೂ ಹೋಗುತ್ತೇವೆ. ಒಳ್ಳೆಯದಾಗುವುದಾದರೆ ಖುದ್ದು ನಾನೇ ಇಬ್ಬರನ್ನೂ ಪ್ರತ್ಯೇಕವಾದ ಉಪಾಹಾರ ಕೂಟಕ್ಕೆ ಆಹ್ವಾನಿಸುವ ಬಗ್ಗೆ ಪರಿಶೀಲಿಸುತ್ತೇನೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಸಿಎಂ ಮತ್ತು ಡಿಸಿಎಂ ಅವರ ಉಪಾಹಾರ ಕೂಟದ ಬಗ್ಗೆ ಕೇಳಿ ಬರುತ್ತಿರುವ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸದಾ ಕಾಲ ಆರಾಮಾಗಿದ್ದಾರೆ. ಈಗ ಸಂತೋಷದ ವಿಚಾರ ಎಂದರೆ ವಾತಾವರಣ ತಿಳಿಯಾಗಿದೆ. ಯಾರೂ ಅಧಿಕಾರ ಹಂಚಿಕೆಯ ಬಗ್ಗೆ ಚರ್ಚೆ ಮಾಡುತ್ತಿಲ್ಲ. ಕೆಲವರು ಅನಗತ್ಯವಾಗಿ ವದಂತಿಗಳನ್ನು ಹರಡಿಸಿದ್ದರು ಎಂದರು.
ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಬೇಕು ಎಂದು ಕೆಲವರು ಬೆಂಬಲಿಗರು ಮುಡಿ ಕೊಡುವುದು ಸೇರಿದಂತೆ ಬೇರೆ ಬೇರೆ ರೀತಿಯ ಚಟುವಟಿಕೆಗಳನ್ನು ನಡೆಸುವುದು ಸಹಜ. ಒಬ್ಬೊಬ್ಬರ ಆಕಾಂಕ್ಷೆಗಳು ಒಂದೊಂದು ರೀತಿಯಲ್ಲಿರುತ್ತವೆ ಎಂದರು.
ವರದಿ ಸಲ್ಲಿಕೆ:
2024ರ ಬೆಳಗಾವಿಯ ಸುವರ್ಣಸೌಧದದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನದ ವೇಳೆ ನಡೆದ ಗಲಭೆಯ ಕುರಿತು ವಿಚಾರಣೆಗೆ ರಚಿಸಲಾಗಿದ್ದ ನಿವೃತ್ತ ನ್ಯಾಯಾಧೀಶರಾದ ಎಚ್.ಆರ್. ಬನ್ನಿಕಟ್ಟಿ ಅವರ ನೇತೃತ್ವದ ಏಕ ಸದಸ್ಯ ಆಯೋಗ ತನ್ನ ವರದಿಯನ್ನು ಗೃಹ ಸಚಿವರಿಗೆ ಸಲ್ಲಿಸಿದೆ. ಮುಖ್ಯಮಂತ್ರಿ ಅವರ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
