ಮಾಲೆ, ಮಾ.21: ಮಾಲ್ಡೀವ್ಸ್ನ ಫೆಲಿಧೂ ದ್ವೀಪದ ಸಮೀಪ ಸಂಭವಿಸಿದ ಸ್ಪೀಡ್ಬೋಟ್ ಅಪಘಾತದಲ್ಲಿ ರೇಮಂಡ್ ಸಮೂಹದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಗೌತಮ್ ಹರಿ ಸಿಂಘಾನಿಯಾ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಇಬ್ಬರು ಭಾರತೀಯರು ಕಾಣೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಶುಕ್ರವಾರ ಬೆಳಗಿನ ಜಾವ ವಾವು ಅಟೋಲ್ ಸಮೀಪ ಈ ಅಪಘಾತ ಸಂಭವಿಸಿದೆ. ದೋಣಿಯಲ್ಲಿ ಒಟ್ಟು ಏಳು ಮಂದಿ ಇದ್ದರು. ಇವರಲ್ಲಿ ಇಬ್ಬರು ಮಹಿಳೆಯರು (ಬ್ರಿಟಿಷ್ ಮತ್ತು ರಷ್ಯಾ ಪ್ರಜೆಗಳು) ಹಾಗೂ ಐದು ಮಂದಿ ಭಾರತೀಯರು ಇದ್ದರು ಎಂದು ವರದಿ ತಿಳಿಸಿದೆ.
ಪೊಲೀಸರ ಪ್ರಕಾರ, ದೋಣಿ ಪಲ್ಟಿಯಾದಾಗ ಐದು ಮಂದಿ ಸಮುದ್ರಕ್ಕೆ ಬಿದ್ದಿದ್ದಾರೆ. ಇದರಲ್ಲಿ ರಷ್ಯಾ ಮಹಿಳೆ ಹಾಗೂ ನಾಲ್ವರು ಭಾರತೀಯರು ಸೇರಿದ್ದಾರೆ.
60 ವರ್ಷದ ಗೌತಮ್ ಸಿಂಘಾನಿಯಾ ಕೂಡ ಈ ದೋಣಿಯಲ್ಲಿ ಇದ್ದು, ಅವರನ್ನು ರಕ್ಷಿಸಲಾಗಿದೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನಂತರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಕಾಣೆಯಾಗಿರುವ ಇಬ್ಬರು ಭಾರತೀಯ ಪ್ರಜೆಗಳ ಶೋಧ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸ್ಪೀಡ್ಬೋಟ್ ‘ಟಿಟಿ ಅಶೇನಾ’ ಎಂಬ ಯಾಚ್ಟ್ಗೆ ಸೇರಿದದ್ದಾಗಿದೆ ಎಂದು ತಿಳಿದುಬಂದಿದೆ. ಮಾಲ್ಡೀವ್ಸ್ ಕರಾವಳಿ ರಕ್ಷಣಾ ಪಡೆ ಕಾಣೆಯಾದವರಿಗಾಗಿ ಹುಡುಕಾಟ ನಡೆಸುತ್ತಿದೆ.
ಅಪಘಾತದಲ್ಲಿ ಭಾಗಿಯಾಗಿದ್ದ ದೋಣಿ ವೇಗವಾಗಿ ಚಲಿಸಲು ವಿನ್ಯಾಸಗೊಳಿಸಲಾದ ‘ಸಿಗರೇಟ್ ರೇಸಿಂಗ್ ಬೋಟ್’ ಆಗಿತ್ತು ಎಂದು ಮೂಲಗಳು ತಿಳಿಸಿವೆ.
ಮಾಲ್ಡೀವ್ಸ್ ರಾಷ್ಟ್ರೀಯ ರಕ್ಷಣಾ ಪಡೆ (ಎಂಎನ್ಡಿಎಫ್) ಮಾಲೆ ಪ್ರದೇಶದ ಕರಾವಳಿ ರಕ್ಷಣಾ ದಳವು ಹುಡುಕಾಟ ಕಾರ್ಯಾಚರಣೆ ನಡೆಸುತ್ತಿದೆ. ಈ ಘಟನೆ ಕೀಯೋಧೂ ದ್ವೀಪದ ದಕ್ಷಿಣ ಪಶ್ಚಿಮಕ್ಕೆ ಸುಮಾರು ಎರಡು ನಾಟಿಕಲ್ ಮೈಲು ದೂರದಲ್ಲಿ ಸಂಭವಿಸಿದೆ ಎಂದು ಎಂಎನ್ಡಿಎಫ್ ತಿಳಿಸಿದೆ.
