ಬೆಂಗಳೂರು, ಏ.27- ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್ ಆರೋಗ್ಯದಲ್ಲಿ ಕಳವಳ ಇದೆ. ಕಳೆದ ನಾಲ್ಕು ವಾರಗಳಿಂದಲೂ ಕಂಡು ಬರುತ್ತಿರುವ ವಿಚಾರಗಳು ಗಂಭೀರ ಪರಿಸ್ಥಿತಿಯನ್ನು ಸೂಚಿಸುತ್ತವೆ ಎಂದು ವೈದ್ಯರೂ ಆಗಿರುವ ಕುಣಿಗಲ್ ಶಾಸಕ ಹೆಚ್.ಡಿ.ರಂಗನಾಥ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವರ ಆರೋಗ್ಯ ಪರಿಸ್ಥಿತಿ ಕುರಿತು ಸಾರ್ವಜನಿಕ ಮಾಹಿತಿ ನೀಡುವುದು ಕುಟುಂಬ ಹಾಗೂ ಚಿಕಿತ್ಸೆ ನೀಡುತ್ತಿರುವ ಆಸ್ಪತ್ರೆಯ ವೈದ್ಯರ ಜವಾಬ್ದಾರಿಯಾಗಿದೆ. ಸರ್ಕಾರ ಮೂರನೇ ಹಂತದಲ್ಲಿದ್ದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರ ಆರೋಪದಂತೆ ಏನನ್ನೂ ಮುಚ್ಚಿಟ್ಟಿಲ್ಲ ಎಂದರು.
ಸುಧಾಕರ್ ಅವರಿಗೆ ಪೊಲೀಯೋದಿಂದ ಎಡಗಾಲು ಸಮಸ್ಯೆ ಇತ್ತು. ಬಲಗಾಲ ಮೇಲೆ ಒತ್ತಡ ಉಂಟಾಗಿ ಮೊಣಕಾಲು ನೋವು ಹೆಚ್ಚಾಗಿತ್ತು. ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಎರಡು ಮೂರು ಕಡೆ ಶಿಫಾರಸುಗಳು ಬಂದಿದ್ದವು. ನನ್ನನ್ನು ಭೇಟಿ ಮಾಡಿ ಸಲಹೆ ಕೇಳಿದ್ದರು. ಸ್ವಲ್ಪ ದಿನ ಕಾಯುವಂತೆ ಹೇಳಿದ್ದೆ.
ಈ ನಡುವೆ ಮಣಿಪಾಲ್ ಆಸ್ಪತ್ರೆಗೆ ಹೋಗಿ ಮಂಡಿ ಬದಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆರಂಭದಲ್ಲಿ ಎರಡು ದಿನ ಚೆನ್ನಾಗಿದ್ದರು. ಇದ್ದಕ್ಕಿದ್ದಂತೆ ಆಕ್ಸಿಜನ್ ಸ್ಯಾಚ್ಯುರೇಷನ್ ಕಡಿಮೆಯಾಗಿತ್ತು.
ಕೃತಕ ಆಮ್ಲಜನಕ ನೀಡಲಾಗಿತ್ತು. ಆರು ಗಂಟೆಯಾದರೂ ಸಾಮಾನ್ಯ ಸ್ಥಿತಿಗೆ ಬರದ ಹಿನ್ನೆಲೆಯಲ್ಲಿ ವೆಂಟಿಲೆಟರ್ ಗೆ ಹಾಕಿಲಾಗಿತ್ತು. ಅಲ್ಲಿಯೂ ಸಾಮರ್ಥ್ಯದಷ್ಟು ಆಮ್ಲಜನಕ ಸೇವನೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಶ್ವಾಸಕೋಶ ಮತ್ತು ಹೃದಯಕ್ಕೆ ಬೆಂಬಲವಾಗುವ ಎಕ್ವೋ ಎಂಬ ಕೃತಕ ಯಂತ್ರ ಹಾಕಲಾಗಿದೆ.
ನಾಲ್ಕು ವಾರವಾದರೂ ಚೇತರಿಕೆ ಕಂಡು ಬಂದಿಲ್ಲ ಎಂದರು.
ರೆಸ್ಪಿರೇಟರಿ ಡಿಸ್ಟ್ರೇಸ್ ಸಿಂಟ್ರೋಮ್ (ಆರ್ಡಿಎಸ್) ಸೋಂಕಿನಿಂದ ಶ್ವಾಸಕೋಶ ಹಾನಿಯಾಗಿದೆ. ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳುತ್ತಿಲ್ಲ. ಸ್ಥಿತಿ ಗಂಭೀರವಾಗಿದೆ. ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಬೇಕಾದರೆ ಕುಟುಂಬದ ಅನುಮತಿ ಪಡೆಯಬೇಕಿದೆ ಎಂದರು.
ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯವರು ಹಲವು ಬಾರಿ ವೈದ್ಯರ ಜೊತೆ ಚರ್ಚೆ ನಡೆಸಿದ್ದಾರೆ. ಶ್ವಾಸಕೋಶ ಕಸಿ ಶಸ್ತ್ರಚಿಕಿತ್ಸೆಯ ಬಗ್ಗೆಯೂ ಚರ್ಚೆಗಳಾಗಿವೆ. ಈಗಾಗಲೇ ಗರಿಷ್ಠ ಹಂತ ದಾಟಿರುವುದರಿಂದ ಶಾಸ್ವಕೋಶ ಕಸಿ ಅಷ್ಟು ಅನುಕೂಲವಲ್ಲ ಎಂಬ ಸಲಹೆಗಳು ಕೇಳಿ ಬಂದಿವೆ.
ಸರ್ಕಾರ ಸಚಿವರನ್ನು ಎಲೆಕ್ಟ್ರಾನಿಕ್ ಸಿಟಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಎಲ್ಲಾ ರೀತಿಯ ತಯಾರಿಗಳನ್ನು ನಡೆಸಿದೆ. ಯಾವುದನ್ನೂ ಮರೆ ಮಾಚುತ್ತಿಲ್ಲ. ಪ್ರಮಾಣಿತ ಕ್ರಮಗಳ ಅನುಸಾರವೇ ಎಲ್ಲವನ್ನು ಪಾಲನೆ ಮಾಡಲಾಗುತ್ತಿದೆ ಎಂದು ಹೇಳಿದರು.
