ಬೆಂಗಳೂರು, ಮೇ 5- ಶೃಂಗೇರಿ ಕ್ಷೇತ್ರದ ಅಂಚೆ ಪತ್ರಗಳ ಮರು ಎಣಿಕೆಯಲ್ಲಿ ಮತ ಗಳ್ಳತನವಷ್ಟೆ ಅಲ್ಲ, ಮತಗಳ ಡಕಾಯಿತಿ ನಡೆದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ.
ಗೃಹ ಕಚೇರಿ ಕೃಷ್ಣದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 2023ರ ಚುನಾವಣೆಯಲ್ಲಿ ಮತ ಯಂತ್ರಗಳ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ 58602 ಮತಗಳು, ಅಂಚೆ ಮೂಲಕ 569 ಮತಗಳು ಬಂದಿದ್ದವು.
ಎದುರಾಳಿ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ಗೆ ಮತ ಯಂತ್ರಗಳ ಮೂಲಕ 58,278, ಅಂಚೆ ಮೂಲಕ 692 ಮತಗಳು ಬಂದಿದ್ದವು. 201 ಮತಗಳಿಂದ ರಾಜೇಗೌಡ ಗೆದ್ದಿದ್ದರು. ಮಾನ್ಯವಾದ ಅಂಚೆ ಮತಪತ್ರಗಳ ಬಗ್ಗೆ ಚುನಾವಣಾಧಿಕಾರಿ, ಸಹಾಯಕ ಚುನಾವಣಾಧಿಕಾರಿ, ಏಜೆಂಟ್ ಗಳು ದೃಢೀಕರಿಸಿ ಸಹಿ ಮಾಡಿ, ಘೋಷಣೆ ಮಾಡಿದ್ದರು.
ಬಿಜೆಪಿ ಅಭ್ಯರ್ಥಿ ಚುನಾವಣಾ ಅಕ್ರಮವಾಗಿದೆ ಎಂದು ಹೈಕೋರ್ಟ್ನಲ್ಲಿ ದಾವೆ ಹೂಡಿ, ಮರು ಎಣಿಕೆಗೆ ಆಗ್ರಹಿಸಿದ್ದರು. ಅರ್ಜಿ ಪುರಷ್ಕರಿಸಿ ಹೈಕೋರ್ಟ್ 2026 ಮಾರ್ಚ್ 6ರಂದು ನಿರ್ದೇಶನ ನೀಡಿತ್ತು. 279 ಅಂಚೆ ಮತಪತ್ರಗಳು ಕಟ್ಟುನಿಟ್ಟಿನ 15 ಮಾರ್ಗಸೂಚಿಗಳು ಹಾಗೂ 14 ಉಪಮಾರ್ಗಸೂಚಿಗಳ ಮತ್ತು ಚುನಾವಣಾಧಿಕಾರಿಗಳ ಕೈಪಿಡಿ ನಿಯಮಗಳ ಪ್ರಕಾರ ಎಣಿಕೆ ಮಾಡುವಂತೆ ಸೂಚಿಸಿತ್ತು.
ಅಂಚೆ ಮತಪತ್ರಗಳಿಗೆ ಸಾಕಷ್ಟು ಪುರಾವೆ ಇದ್ದಾಗಿಯೂ ಅಮಾನ್ಯಗೊಳಿಸಿದ್ದರೆ, ಅದನ್ನು ಮರು ಎಣಿಕೆ ಮಾಡಬೇಕು. ಲೋಪಗಳು ಕಂಡು ಬಂದಿದ್ದರೆ ಚುನಾವಣಾಧಿಕಾರಿ ಕಡ್ಡಾಯವಾಗಿ ಎಲ್ಲಾ ಅಂಚೆ ಮತಪತ್ರಗಳನ್ನು ಎಣಿಕೆ ಮಾಡಿ, ಇಲ್ಲವಾದರೆ ಫಲಿತಾಂಶವನ್ನು ಯಥಾವತ್ತು ಘೋಷಿಸಬೇಕು ಎಂದು ನಿರ್ದೇಶನ ನೀಡಿತ್ತು. ಅದರಂತೆ ಮರು ಎಣಿಕೆ ನಡೆದಿದೆ.
2023ರಲ್ಲಿ ಅಂಚೆ ಮೂಲಕ ಚಲಾವಣೆಯಾಗಿದ್ದ ಮತಗಳ ಪೈಕಿ ಟಿ.ಡಿ.ರಾಜೇಗೌಡರಿಗೆ 569 ದೊರೆತ್ತಿದ್ದವು. ಮರು ಎಣಿಕೆಯಲ್ಲಿ 314 ಮಾತ್ರ ಮಾನ್ಯವಾಗುತ್ತವೆ. 255 ಮತಗಳು ಕಡಿಮೆಯಾಗಿವೆ. ಇವು ಏಕೆ ಅಮಾನ್ಯವಾದವು ಎಂದು ಪ್ರಶ್ನಿಸಿದರು.
ಜೀವರಾಜ್ ಗೆ 692 ಅಂಚೆ ಮತಗಳು ದೊರೆತ್ತಿದ್ದರು. ಮರು ಎಣಿಕೆಯಲ್ಲಿ 690 ಸಿಕ್ಕಿವೆ. ಎರಡು ಕಡಿಮೆಯಾಗಿವೆ. ರಾಜೇಗೌಡರಿಗೆ 255 ಕಡಿಮೆಯಾಗಿವೆ. ಇದನ್ನು ನೋಡಿದಾಗ ಬಿಜೆಪಿಯವರು ಕ್ರಿಮಿನಲ್ ಸಂಚು ಮಾಡಿ, ಮತಗಳ್ಳತನ ಮಾಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.
ರಾಜೇಗೌಡರಿಗೆ ಬಿದ್ದಿ 255 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ.
ಒಂದು ಮಾರ್ಕ್ ಜೊತೆ ಮತ್ತೊಂದು ಮಾರ್ಕ್ ಇದ್ದರೆ ಅತಂಹ ಅಂಚೆ ಮತ ಪತ್ರವನ್ನು ಅಮಾನ್ಯಗೊಳಿಸಲಾಗುತ್ತದೆ. ಹಿಂದಿನ ಚುನಾವಣಾಧಿಕಾರಿ ಮಾನ್ಯ ಮಾಡಿದ್ದ ಮತಪತ್ರಗಳನ್ನು ಈಗ ಅಮಾನ್ಯ ಮಾಡಿದ್ದಾರೆ. ಇದು ಮತಗಳ್ಳತನ ಮಾತ್ರವಲ್ಲ, ಮತ ಡಕಾಯಿತು ಎಂದು ಆಕ್ರೋಶ ವ್ಯಕ್ತ ಪಡಿಸಿದರು.
201 ಮತಗಳಿಂದ ಸೋಲು ಕಂಡಿದ್ದ ಜೀವರಾಜ್ ಗೆ 52 ಮತಗಳು ಬಂದಿವೆ, ಈಗ ಗೆದ್ದಿದ್ದಾರೆ. ಈ ಬಗ್ಗೆ ತಾವು ಅಧಿಕಾರಿಗಳ ಹಾಗೂ ಚುನಾವಣಾ ತಜ್ಞರ ಜೊತೆ ಚರ್ಚೆ ಮಾಡಿದ್ದೇನೆ. ಹಿಂದೆ ಮತ ಎಣಿಕೆಯಾದಗ ಬಿಜೆಪಿ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಡಬ್ಬಲ್ ಇಂಜಿನ್ ಸರ್ಕಾರ ತಮ ಸಿಬ್ಬಂದಿಗಳ ಮೂಲಕ ಮತಗಳನ್ನು ತಿದ್ದಿಸಿರುವುದು ಖಚಿತವಾಗಿದೆ. ಇದು ಕ್ರಿಮಿನಲ್ ಸಂಚು ಮತ್ತು ಮತಚೋರಿಯಾಗಿದೆ ಎಂದು ಆರೋಪಿಸಿದರು.
ರಾಜೇಗೌಡರಿಗೆ 3ನೇ ಸುತ್ತಿನಲ್ಲಿ ಲಭಿಸಿದ್ದ 170 ಅಂಚೆ ಮತಗಳು ಅಮಾನ್ಯವಾಗಿವೆ. 2023ರ ಎಣಿಕೆಯಲ್ಲಿ ಇವು ಮಾನ್ಯವಾಗಿದ್ದವು. ಹಣ್ಣು ತಿಂದವನ್ನು ತಪ್ಪಿಸಿಕೊಂಡು, ಸಿಪ್ಪೆ ತಿಂದವನು ಸಿಕ್ಕಿ ಹಾಕಿಕೊಂಡ ಎಂದು ನಮ ಕಡೆ ಗಾದೆ ಇದೆ. ಅದರಂತೆ ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಹೊರೆಸಿದಂತೆ ಬಿಜೆಪಿಯವರು ಮಾಡಿದ್ದಾರೆ. ಇದನ್ನು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ, ಶೋಭಾ ಕರಂದ್ಲಾಜೆ, ರಾಜ್ಯ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಮರ್ಥಿಸಿಕೊಂಡಿದ್ದಾರೆ.
2023ರ ಎಣಿಕೆಯಲ್ಲಿ ನಮ ಪಕ್ಷದಿಂದ ಸುಧೀರ್ ಕುಮಾರ್ ಮುರೋಳ್ಳಿ ಮತ ಎಣಿಕೆ ಏಜೆಂಟ್ ಆಗಿ ಸಹಿ ಹಾಕಿದ್ದಾರೆ. ಬಿಜೆಪಿ ಏಜೆಂಟ್, ಜೆಡಿಎಸ್ ಅಭ್ಯರ್ಥಿ ಸುಧಾಕರ್ ಶೆಟ್ಟಿ ಸಹಿ ಹಾಕಿದ್ದರು. ಆ ವೇಳೆ ಬಿಜೆಪಿ, ಜೆಡಿಎಸ್ ಮತ್ತು ಪಕ್ಷೇತರರು ಸೇರಿ ಯಾರು ಆಕ್ಷೇಪಣೆ ಸಲ್ಲಿಸಲಿಲ್ಲ ಎಂದರು.
ಚುನಾವಣೆಯಲ್ಲಿ ಒಟ್ಟು 12 ಜನ ಅಭ್ಯರ್ಥಿಓಗಳಾಗಿದ್ದರು. ರಾಜೇಗೌಡ ಮತ್ತು ಜೀವರಾಜ್ ಪ್ರಮುಖ ಅಭ್ಯರ್ಥಿಗಳಿದ್ದರು. ಜೆಡಿಎಸ್ ಅಭ್ಯರ್ಥಿ ಹಾಗೂ 9 ಪಕ್ಷೇತರರು ಕಣದಲ್ಲಿದ್ದರು.
ಮತಪತ್ರಗಳು ತಿದ್ದುಪಡಿಯಾಗಿರುವ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿ, ನಿರ್ಧಾರ ತೆಗೆದುಕೊಳ್ಳುವಂತೆ ಮನವಿ ಮಾಡಬೇಕಿತ್ತು. ಆದರೆ ನೇರವಾಗಿ ಫಲಿತಾಂಶ ಪ್ರಕಟಿಸಲಾಗಿದೆ. ಇದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಹಿಂದೆ ಬಿಜೆಪಿಯವರು ಚಿಲುಮೆ ಸಂಸ್ಥೆ ಮೂಲಕ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡಲು ಯತ್ನಿಸಿದ್ದರು. ಆಳಂದದಲ್ಲಿ ನೈಜ್ಯ ಮತದಾರರನ್ನು ತೆಗೆದು ಹಾಕಿದ್ದರು. ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಇಂತಹ ಅಕ್ರಮ ಮಾಡುವಲ್ಲಿ ಸಿದ್ಧ ಹಸ್ತರು ಎಂದು ವಾಗ್ದಾಳಿ ನಡೆಸಿದರು.
ಟಿ.ಡಿ.ರಾಜೇಗೌಡ ಅಕ್ರಮದ ಬಗ್ಗೆ ದೂರು ನೀಡಿದ್ದಾರೆ. ಅದಕ್ಕೆ ಜೀವರಾಜ್ ಹೈಕೋರ್ಟ್ಗೆ ಹೋಗಿ ತಡೆಯಾಜ್ಞೆ ನೀಡಿದೆ. ನಮ ಪ್ರಕಾರ ಕ್ರಿಮಿನಲ್ ಸಂಚು ನಡೆದಿದೆ. ನಿಷ್ಪಕ್ಷಪಾತ ತನಿಖೆಯಾಗಬೇಕು. ನೀಡಿರುವ ದೂರಿನಂತೆ ಪೊಲೀಸರು ತಪ್ಪು ಮಾಡಿದ ಚುನಾವಣಾಧಿಕಾರಿಗಳನ್ನು ವಿಚಾರಣೆಗೆ ಒಳಪಡಿಸಲು ಅವಕಾಶ ಇದೆ ಎಂದರು. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿ, ಇಂತಹ ಕ್ರಿಮಿನಲ್ ಚಟುವಟಿಕೆ ದೇಶದ ಎಲ್ಲಿಯೂ ನಡೆದಿಲ್ಲ. ಸತ್ಯಾಂಶ ಹೊರ ಬರಲು ತನಿಖೆ ನಡೆಯಬೇಕು ಎಂದರು.
