ಬೆಂಗಳೂರು,ಏ.7-ಮಹಿಳೆ ಜೊತೆ ಸಂಬಂಧವಿಟ್ಟುಕೊಳ್ಳಲು ಆಕೆಯ ಪತಿಯನ್ನೇ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಹೆಬ್ಬಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.ಒಡಿಶಾ ಮೂಲದ ಬುಸುದೇವ್ ಮಲ್ಲಿಕ್ (30) ಬಂಧಿತ ಆರೋಪಿ. ಈತ ಅನೇಕಲ್ ತಾಲ್ಲೂಕಿನ ಯಾರಂಡನಹಳ್ಳಿಯ ಬೇಕರಿಯೊಂದರ ಸಮೀಪ ಬಾಡಿಗೆ ಮನೆ ಮಾಡಿಕೊಂಡು ವಾಸವಿದ್ದನು. ತನ್ನ ಊರಿನ ಸುನೀಲ್ ನಾಯಕ್ ಎಂಬಾತನ ಪತ್ನಿ ಪುಷ್ಪಾ ಮೇಲೆ ಆರೋಪಿ ಬುಸುದೇವ್ ಕಣ್ಣಾಕಿದ್ದು, ಆಕೆಯೊಂದಿಗೆ ಸಂಬಂಧ ಬೆಳೆಸುವ ದುರಾಲೋಚನೆ ಮಾಡಿದ್ದಾನೆ.
ಹೇಗಾದರೂ ಮಾಡಿ ಸುನೀಲ್ನಾಯಕ್ನನ್ನು ಕೊಲೆ ಮಾಡಿದರೆ ಆತನ ಪತ್ನಿಯೊಂದಿಗೆ ಸಂಬಂಧವಿಟ್ಟು ಕೊಳ್ಳಬಹುದೆಂದು ಕೆಟ್ಟ ಯೋಚನೆ ಮಾಡಿದ್ದಾನೆ.ಅದರಂತೆ ಸುನೀಲ್ನಾಯಕ್ನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಚೆನ್ನಾಗಿ ಮದ್ಯ ಕುಡಿಸಿ ನಂತರ ಚಾಕುವಿನಿಂದ ಕತ್ತು ಕೊಯ್ದು ಕೊಲೆ ಮಾಡಿ ಶವವನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕಟ್ಟಿ ಅದನ್ನು ಬೊಮಸಂದ್ರ ಇಂಡಸ್ಟ್ರೀಯಲ್ ಪ್ರದೇಶದ ಬಾರ್ವೊಂದರ ಪಕ್ಕದಲ್ಲಿ ಬಿಸಾಡಿ ಹೋಗಿದ್ದನು.
ಅನುಮಾನಾಸ್ಪದವಾಗಿ ಬಿದ್ದಿದ್ದ ಪ್ಲಾಸ್ಟಿಕ್ ಚೀಲ ಗಮನಿಸಿ ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದರು.ಸ್ಥಳಕ್ಕೆ ಆಗಮಿಸಿ ಪ್ಲಾಸ್ಟಿಕ್ ಚೀಲವನ್ನು ತೆಗೆದು ನೋಡಿದಾಗ ಅದರಲ್ಲಿ ವ್ಯಕ್ತಿಯ ಶವ ಇರುವುದು ಕಂಡು ಬಂದಿದೆ.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗಾಗಿ ತನಿಖೆ ಕೈಗೊಂಡ ಇನ್್ಸಪೆಕ್ಟರ್ ಸೋಮಶೇಖರ್ ಅವರನ್ನೊಳಗೊಂಡ ತಂಡ ಹಲವು ಮಾಹಿತಿಗಳನ್ನು ಕಲೆಹಾಕಿ ಕೊನೆಗೂ ಖತರ್ನಾಕ್ ಆರೋಪಿಯನ್ನು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
