ಬೆಂಗಳೂರು, ಏ.7- ನಗರದಲ್ಲಿ ಹೆಚ್ಚುತ್ತಿರುವ ರಸ್ತೆ ಗುಂಡಿಗಳ ಸಮಸ್ಯೆಗೆ ತಕ್ಷಣ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಜಿಬಿಎ ವ್ಯಾಪ್ತಿಯ ಪ್ರತಿಯೊಂದು ನಗರ ಪಾಲಿಕೆಗೆ ಒಂದೊಂದು ರಸ್ತೆ ಗುಂಡಿ ಮುಚ್ಚುವ ಯಂತ್ರವನ್ನು ಖರೀದಿಸಲು ಜಿಬಿಎ ತೀರ್ಮಾನಿಸಿದೆ.ವಿವಿಧ ಇಲಾಖೆಗಳೊಂದಿಗೆ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದ್ದಾರೆ.
ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವುದು ಹಾಗೂ ವಿವಿಧ ಇಲಾಖೆಗಳು ರಸ್ತೆ ಕತ್ತರಿಸಿ ಪುನಶ್ಚೇತನ ಮಾಡದಿರುವ ಸ್ಥಳಗಳಲ್ಲಿ ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳುವುದು ಅನಿವಾರ್ಯ ಈ ಹಿನ್ನೆಲೆಯಲ್ಲಿ ಐದು ನಗರ ಪಾಲಿಕೆಗಳಿಗೂ ಪ್ರತ್ಯೇಕ ಯಂತ್ರಗಳನ್ನು ಖರೀದಿಸಿ ಡಾಂಬರೀಕರಣ ಕಾರ್ಯವನ್ನು ವೇಗಗೊಳಿಸಲು ಸೂಚಿಸಿದರು.
ರಸ್ತೆ ಕತ್ತರಿಸಲು ಮಾರ್ಕ್ಸ್ ಸಾಫ್ಟ್ ವೇರ್ ಮೂಲಕ ಅನುಮತಿ ಪಡೆದು, ಕಾಮಗಾರಿ ಮುಗಿದ ಬಳಿಕ ರಸ್ತೆ ದುರಸ್ತಿ ಮಾಡದಿದ್ದರೆ ಪಾಲಿಕೆಯೇ ಕೆಲಸ ಮಾಡಿ, ಅದರ ವೆಚ್ಚವನ್ನು ಸಂಬಂಧಪಟ್ಟ ಸಂಸ್ಥೆಗಳಿಂದ ವಸೂಲಿ ಮಾಡಬೇಕೆಂದು ತಿಳಿಸಿದರು.
ಗೇಲ್ ಗ್ಯಾಸ್ ರಸ್ತೆ ಕತ್ತರಿಸಲು ತ್ವರಿತ ಅನುಮತಿ:
ಗೇಲ್ ಗ್ಯಾಸ್ ಸಂಸ್ಥೆಯ ಅರ್ಜಿಗಳಿಗೆ ತಕ್ಷಣ ಅನುಮತಿ ನೀಡಬೇಕು. ಜೊತೆಗೆ ಕಾಮಗಾರಿ ಮುಗಿದ ಬಳಿಕ ರಸ್ತೆ ಪುನಶ್ಚೇತನವನ್ನು ಕಡ್ಡಾಯವಾಗಿ ಸಂಸ್ಥೆಯವರಿಂದಲೇ ಮಾಡಿಸಬೇಕು ಎಂದು ಸೂಚಿಸಿದರು.
ಇಂದಿನದ ಟೋಯಿಂಗ್:ನಗರದ ರಸ್ತೆ ಬದಿಗಳಲ್ಲಿ ನಿಂತಿರುವ ಅನಾಥ ವಾಹನಗಳನ್ನು ತೆರವುಗೊಳಿಸಲು ಇಂದಿನಿಂದಲೇ ಟೋಯಿಂಗ್ ಕಾರ್ಯ ಆರಂಭಿಸಲು ಸೂಚನೆ ನೀಡಲಾಗಿದೆ. ಈಗಾಗಲೇ ಟೋಯಿಂಗ್ ವಾಹನಗಳನ್ನು ಸಂಚಾರಿ ಪೊಲೀಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ.ಇನ್ನು ವೈಟ್ ಟಾಪಿಂಗ್ ಹಾಗೂ ಪ್ರಮುಖ ರಸ್ತೆಗಳಲ್ಲಿ ಪಾರ್ಕಿಂಗ್ ನಿಯಂತ್ರಣವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸೂಚಿಸಿದರು.
ಮುಂಗಾರು ಮಳೆಯ ಹಿನ್ನೆಲೆ ರಾಜಕಾಲುವೆಗಳು ಹಾಗೂ ಶೋಲ್ಡರ್ ಡ್ರೈನ್ಗಳಲ್ಲಿ ಹೂಳೆತ್ತುವ ಕಾರ್ಯವನ್ನು ತ್ವರಿತಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಮಳೆಗಾಲದಲ್ಲಿ ನೀರು ನಿಲ್ಲದಂತೆ ಕ್ರಮ ಕೈಗೊಳ್ಳುವುದು ಮುಖ್ಯ ಹೆಬ್ಬಾಳ ಜಂಕ್ಷನ್ನಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳ ಹಿನ್ನೆಲೆ ಎಲ್ಲಾ ಇಲಾಖೆಗಳು ಜಂಟಿಯಾಗಿ ಪರಿಶೀಲನೆ ನಡೆಸಿ ಸಮಗ್ರ ನಕ್ಷೆ ಸಿದ್ಧಪಡಿಸಬೇಕು ಎಂದು ಸೂಚಿಸಿದರು.
ಕೆ-100 ಜಲಮಾರ್ಗಕ್ಕೆ ಸೇರುತ್ತಿರುವ ಕೊಳಚೆ ನೀರನ್ನು ಸಂಪೂರ್ಣವಾಗಿ ತಡೆಯಲು ಜಲಮಂಡಳಿಗೆ ಕಠಿಣ ಸೂಚನೆ ನೀಡಿದರುಸಭೆಯಲ್ಲಿ ಬಿಡಿಎ ಆಯುಕ್ತ ಮಣಿವಣ್ಣನ್ ಸೇರಿದಂತೆ ನಗರ ಪಾಲಿಕೆಗಳ ಆಯುಕ್ತರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
