Wednesday, May 1, 2024
Homeರಾಜ್ಯರಾಜ್ಯದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಆಸಿಡ್ ಮಾರಾಟ ನಿಷೇಧ

ರಾಜ್ಯದಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ಆಸಿಡ್ ಮಾರಾಟ ನಿಷೇಧ

ಬೆಂಗಳೂರು,ಮಾ.7-ಆಸಿಡ್ ದಾಳಿ ಪ್ರಕರಣವನ್ನು ಹತ್ತಿಕ್ಕುವ ಸಲುವಾಗಿ ರಾಜ್ಯದಲ್ಲಿ ಆಸಿಡ್ ಮುಕ್ತ ಮಾರಾಟವನ್ನು ನಿಷೇಧಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಪೊಲೀಸ್ ಮಹಾ ನಿರ್ದೇಶಕರು ಒಂದೆರೆಡು ದಿನದೊಳಗಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಇಲಾಖೆಗೆ ಪತ್ರ ಬರೆಯಲಿದ್ದು, ಆಸಿಡ್ ಮುಕ್ತ ಮಾರಾಟವನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದಾರೆ. ಆ ಇಲಾಖೆ ಈ ಕುರಿತಂತೆ ಆದೇಶ ಹೊರಡಿಸಬೇಕಿದೆ ಎಂದರು.

ಆಸಿಡ್ ಸುಲಭವಾಗಿ ಕೈಗೆ ಸಿಗಬಾರದು. ಹಾಗಾಗಿ ರಾಸಾಯನಿಕಗಳನ್ನು ಅಧಿಕೃತವಾಗಿ ಮಾರಾಟ ಮಾಡುವವರ ಮೂಲಕವಷ್ಟೇ ಆಸಿಡ್ ಖರೀದಿ ಮತ್ತು ಮಾರಾಟ ವಹಿವಾಟು ನಡೆಯಬೇಕು. ಈ ನಿಟ್ಟಿನಲ್ಲಿ ಕಡಿವಾಣವು ಅಗತ್ಯವಿದೆ ಎಂದು ತಿಳಿಸಿದರು.

ಶೀಘ್ರ ಬಂಧನ :
ಬೆಂಗಳೂರು ಸ್ಪೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶೀಘ್ರವೇ ಆರೋಪಿಯನ್ನು ಬಂಧಿಸಲಾಗುತ್ತದೆ. ಕಳೆದ ಎರಡು ಮೂರು ದಿನಗಳ ತನಿಖೆಯಲ್ಲಿ ಮಹತ್ವದ ಮಾಹಿತಿಗಳು ದೊರೆತಿವೆ. ಆರೋಪಿ ಬಸ್‍ನಲ್ಲಿ ಸಂಚರಿಸಿರುವುದು ಎಲ್ಲರಿಗೂ ಗೊತ್ತಿದೆ. ಪದೇ ಪದೇ ಬಟ್ಟೆ ಬದಲಾಯಿಸಿದ್ದಾನೆ. ಎಲ್ಲಿಂದ ಎಲ್ಲಿಗೆ ಪ್ರಯಾಣಿಸಿದ್ದಾನೆ ಎಂಬ ಸುಳಿವು ದೊರೆತಿದೆ. ತನಿಖೆಯ ಹಿತದೃಷ್ಟಿಯಿಂದ ಹೆಚ್ಚಿನ ಮಾಹಿತಿಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.

ಈವರೆಗೂ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಬಂಧಿಸಿಲ್ಲ. ಈ ಬಗ್ಗೆ ತಪ್ಪು ಮಾಹಿತಿ ಇದೆ. ಮುಖ್ಯಮಂತ್ರಿಯವರೂ ಕೂಡ ಅಸ್ಪಷ್ಟ ಮಾಹಿತಿಯಿಂದ ಐದು ಮಂದಿ ಆರೋಪಿಗಳ ಬಂಧನವಾಗಿದೆ ಎಂದು ಹೇಳಿಬಿಟ್ಟಿದ್ದಾರೆ. ಆದರೆ ಯಾರನ್ನೂ ಬಂಧಿಸಿಲ್ಲ ಎಂದರು. ಶಂಕಿತರನ್ನು ಕರೆದು ವಿಚಾರಣೆ ನಡೆಸಿ ಕಳುಹಿಸಲಾಗಿದೆ. ಮಾಹಿತಿ ಕಲೆ ಹಾಕುವ ಸಲುವಾಗಿ ಕರೆತಂದವರನ್ನು ಬಂಧಿಸಿಲ್ಲ.

ರಾಷ್ಟ್ರೀಯ ತನಿಖಾ ದಳ ನಿನ್ನೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಶಂಕಿತನ ಭಾವಚಿತ್ರವನ್ನು ಬಹಿರಂಗಪಡಿಸಿ ಆರೋಪಿಯ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಿದೆ. ತನಿಖೆ ಮಹತ್ವದ ಹಂತದಲ್ಲಿದ್ದು, ಶೀಘ್ರವಾಗಿಯೇ ಆರೋಪಿಯನ್ನು ಸೆರೆ ಹಿಡಿಯಲಾಗುವುದು ಎಂದರು.

RELATED ARTICLES

Latest News