Sunday, April 28, 2024
Homeರಾಜಕೀಯಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತೊಗೆಯಬೇಕು : ಅನಂತಕುಮಾರ್ ಹೆಗಡೆ

ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಬುಡ ಸಮೇತ ಕಿತ್ತೊಗೆಯಬೇಕು : ಅನಂತಕುಮಾರ್ ಹೆಗಡೆ

ಕಾರವಾರ,ಮಾ.12- ದೇಶದ ವ್ಯಕ್ತಿತ್ವವನ್ನು ಕುಲಗೆಡಿಸಿದ ಕಾಂಗ್ರೆಸ್ ಪಕ್ಷವನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬುಡ ಸಮೇತ ಕರ್ನಾಟಕದ ಜನ ಕಿತ್ತೆಸೆಯಲು ದೃಢ ಸಂಕಲ್ಪ ಮಾಡಬೇಕು ಎಂದು ಸಂಸದ ಅನಂತಕುಮಾರ್ ಹೆಗಡೆ ಬೆಂಕಿ ಉಗುಳಿದ್ದಾರೆ.

ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದಿಂದ ದೇಶಕ್ಕೆ ಎಂದಿಗೂ ಕೂಡ ಒಳ್ಳೆಯದಾಗಿಲ್ಲ. ಧರ್ಮ ಮತ್ತು ಜಾತಿಗಳ ನಡುವೆ ಬೆಂಕಿ ಹಚ್ಚಿ ತನ್ನ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದೇ ಈ ಪಕ್ಷದ ಸಾಧನೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ಇದನ್ನು ಬುಡಸಮೇತ ಕಿತ್ತೆಸೆಯಿರಿ ಎಂದರು.

ನಿಯತ್ತು, ನಂಬಿಕೆ, ವಿಶ್ವಾಸದ್ರೋಹ ಇಲ್ಲದ ಯಾವುದಾದರೂ ರಾಜಕೀಯ ಪಕ್ಷವಿದ್ದರೆ ಅದು ಕಾಂಗ್ರೆಸ್. ಎಲ್ಲವೂ ನಮ್ಮ ಪಕ್ಷದಿಂದಲೇ ಆಗಿರುವುದು ಎಂದು ಹೇಳುವ ಈ ಪಕ್ಷದ ನಾಯಕರಿಗೆ ದೇಶದ ಬಗ್ಗೆ ಕಿಂಚಿತ್ತೂ ಗೌರವವಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ವಿರುದ್ಧ ಕ್ರಾಂತಿ ಮಾಡಬೇಕಾದ ಅನಿವಾರ್ಯತೆ ಈಗ ನಮ್ಮ ಮುಂದಿದೆ.

ಬದಲಾವಣೆಯಾಗಬೇಕಾದರೆ ಜಗತ್ತಿನಲ್ಲಿ ಕ್ರಾಂತಿಯಾಗಲೇಬೇಕು. ಈ ಚುನಾವಣೆಯಲ್ಲಿ ನಾವು ದೃಢ ಸಂಕಲ್ಪ ಮಾಡದಿದ್ದರೆ ಮುಂದಿನ ಜನಕ್ಕೂ ಉಳಿಗಾಲ ಇಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಆಮೇಲೆ ಸರ್ಕಾರದ ಬೊಕ್ಕಸ ಖಾಲಿಯಾಗಿದ್ದು, ದಿವಾಳಿ ಹಂತಕ್ಕೂ ಬಂದು ನಿಂತಿದೆ. ಲೋಕಸಭಾ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರದಲ್ಲಿ ಉಳಿಯುತ್ತದೆ ಎಂಬುದಕ್ಕೆ ಗ್ಯಾರಂಟಿ ಏನು ಎಂದು ಪ್ರಶ್ನಿಸಿದರು.

ನನಗೆ ಟಿಕೆಟ್ ಸಿಗುತ್ತದೆಯೋ , ಬಿಡುತ್ತದೆಯೋ ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ನಾನು ಸತ್ಯ ಹೇಳಿದರೆ ಅನಂತಕುಮಾರ್ ಹೆಗಡ ವಿವಾದ ಸೃಷ್ಟಿಸುತ್ತಾರೆ ಎಂದು ಕೆಲವರು ಬೊಬ್ಬೆ ಹಾಕುತ್ತಾರೆ. ಸತ್ಯಕ್ಕೂ ಮತ್ತು ಸುಳ್ಳಿಗೂ ವ್ಯತ್ಯಾಸ ಗೊತ್ತಿಲ್ಲದವರು ಈ ರೀತಿ ಮಾತನಾಡುತ್ತಾರೆ ಎಂದು ತಮ್ಮ ವಿರೋಧಿಗಳ ವಿರುದ್ಧವೂ ಕೆಂಡ ಕಾರಿದರು.

RELATED ARTICLES

Latest News