Monday, May 6, 2024
Homeರಾಜ್ಯದೇಶದೆಲ್ಲೆಡೆ ಎಲ್ಲೆಲ್ಲೂ ರಾಮನಾಮ ಜಪ

ದೇಶದೆಲ್ಲೆಡೆ ಎಲ್ಲೆಲ್ಲೂ ರಾಮನಾಮ ಜಪ

ಬೆಂಗಳೂರು,ಜ.21- ನಾಳೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಶ್ರೀಬಾಲರಾಮನ ಪ್ರಾಣ ಪ್ರತಿಷ್ಠಾಪನೆ ಮಹೋತ್ಸವ ಹಿನ್ನಲೆಯಲ್ಲಿ ಸಿಲಿಕಾನ್ ಸಿಟಿ ಕೇಸರಿಮಯವಾಗಿದೆ. ಪ್ರಧಾನಿ ನರೇಂದ್ರಮೋದಿ ಯವರ ನೇತೃತ್ವದಲ್ಲಿ ನಾಳೆ ನಡೆಯಲಿರುವ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಪ್ರಯುಕ್ತ ನಗರದ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆ, ಭಜನೆ, ದೀಪೋತ್ಸವ, ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ಈಗಾಗಲೇ ನಗರದ ಬಹುತೇಕ ರಸ್ತೆ ಹಾಗೂ ವೃತ್ತಗಳಲ್ಲಿ ಫ್ಲೆಕ್ಸ್, ಬ್ಯಾನರ್‍ಗಳು, ತಳಿರು ತೋರಣ ಹಾಗೂ ಮನೆಗಳ ಮೇಲೆ ಶ್ರೀರಾಮನ ಭಾವಚಿತ್ರವುಳ್ಳ ಧ್ವಜವನ್ನು ಹಾರಿಸಲಾಗಿದೆ. ಮನೆ ಮನೆಗಳಲ್ಲೂ ಸಹ ದೀಪವನ್ನು ಬೆಳಗಿಸುವ ಮೂಲಕ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ನಗರದ ಜನತೆ ಸಜ್ಜಾಗಿದ್ದಾರೆ. ದೇವಾಲಯಗಳನ್ನು ಶುಚಿಗೊಳಿಸಿ ವಿವಿಧ ಬಗೆಯ ಹೂವುಗಳಿಂದ ಸಿಂಗರಿಸಿ ಪೂಜೆಗೆ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ನಾಳೆ ಬೆಳಗ್ಗೆಯಿಂದಲೇ ಶ್ರೀರಾಮ ನಾಮ ಜಪ, ಗೋಪೂಜೆ, ಶ್ರೀರಾಮ ಪಾರಾಯಣ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ. ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ನೇರಪ್ರಸಾರವನ್ನು ವೀಕ್ಷಿಸಲು ರಾಜಾಜಿನಗರದ ಬ್ರಿಗೇಡ್ ಗೇಟ್ ಬಳಿಯ ಓರಾಯನ್ ಮಾಲ್‍ನಲ್ಲಿ ವ್ಯವಸ್ಥೆ ಮಾಡಲಾಗಿದೆ.

ಇಂದು ಬೆಳಗ್ಗೆ ಮೈಸೂರು ಬ್ಯಾಂಕ್ ವೃತ್ತದಲ್ಲಿರುವ ಯಲಹಂಕ ಹೆಬ್ಬಾಗಿಲು ಶ್ರೀ ಆಂಜನೇಯಸ್ವಾಮಿ ದೇವಾಲಯದ ಸುತ್ತಮುತ್ತ ಕನ್ನಡ ಕಣ್ಮಣಿ ಭಕ್ತ ಮಂಡಳಿ ವತಿಯಿಂದ ಸ್ವಚ್ಚತಾ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು. ದೇವಾಲಯದ ಪ್ರಧಾನ ಅರ್ಚಕರಾದ ಶ್ರೀ ಮುರುಳಿ ಭಟ್ಟರ್, ಶ್ರೀಧರ್ ಭಟ್ಟರ್ ಮಾರ್ಗದರ್ಶನದಲ್ಲಿ ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ನೇತೃತ್ವದಲ್ಲಿ ಸ್ವಚ್ಛತಾ ಕಾರ್ಯ ನಡೆಯಿತು.
ಚಾಮರಾಜಪೇಟೆಯ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದಲ್ಲಿ ಮಧ್ಯಾಹ್ನ 3 ಗಂಟೆಗೆ ಎಂ.ಇ.ಸತ್ಯನಾರಾಯಣ್ ಅವರು ಸಂಯೋಜಿಸಿ ನಿರ್ದೇಶಿಸಿರುವ ರಾಮಾಯಣ ನೃತ್ಯ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ರಾಮೋತ್ಸವ ಶುಭ ಸಂದರ್ಭದಲ್ಲಿ “ಜಾನಕಿ ರಾಮ” ಆಲ್ಬಂ ಸಾಂಗ್ ಬಿಡುಗಡೆ

ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಹಾಗೂ ಮಹಾಲಕ್ಷ್ಮಿ ಎಜುಕೇಷನಲ್ ಸಹಯೋಗದಲ್ಲಿ ಮಹಾಲಕ್ಷ್ಮಿ ಬಡಾವಣೆಯ ರಾಣಿ ಅಬ್ಬಕ್ಕ ಮೈದಾನದಲ್ಲಿ ಸೀತಾ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಲಿದೆ.ನಗರದೆಲ್ಲೆಡೆ ಶ್ರೀರಾಮನಾಮ ಜಪ ಪ್ರಾರಂಭವಾಗಿದ್ದು, ಎಲ್ಲಿ ನೋಡಿದರೂ ಕೇಸರಿ ಬಾವುಟಗಳು, ಫ್ಲೆಕ್ಸ್‍ಗಳು, ಬ್ಯಾನರ್‍ಗಳು, ಎಲ್‍ಇಡಿ ಸ್ಕ್ರೀನ್‍ಗಳು ಹಾಗೂ ದೀಪಾಲಂಕಾರಗಳು ರಾರಾಜಿಸುತ್ತಿವೆ.

ಇನ್ನು ಈ ಸುಂದರ ಕ್ಷಣವನ್ನು ಸಂಭ್ರಮಿಸಲು ಭಕ್ತ ಗಣ ಸಂಭ್ರಮದಿಂದ ಕಾಯುತ್ತಿದ್ದು, ದೇವಾಲಯಗಳಲ್ಲಿ ಪ್ರಸಾದ ವಿತರಣೆಗೂ ಸಹ ಸಕಲ ಸಿದ್ದತೆಗಳನ್ನು ಮಾಡಿಕೊಂಡಿವೆ. ಲಾಡು ವಿತರಣೆ ಕೂಡ ಹಮ್ಮಿಕೊಳ್ಳಲಾಗಿದೆ.ಮಹಾಲಕ್ಷ್ಮಿ ಲೇಔಟ್‍ನಲ್ಲಿರುವ ಹನುಮನ ದೇವಸ್ಥಾನದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಲಿವೆ. ಅದೇ ರೀತಿ ನಗರಾದ್ಯಂತ ಇರುವ ಎಲ್ಲಾ ಶ್ರೀರಾಮ, ಆಂಜನೇಯ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಹೋಮಹವನ, ಅಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮಕ್ಕಳು ರಾಮ,ಲಕ್ಷ್ಮಣ, ಸೀತಾ ವೇಷಭೂಷಣಗಳನ್ನು ತೊಟ್ಟು ಗಮನ ಸೆಳೆಯುತ್ತಿದ್ದಾರೆ. ಬೇಧಭಾವವಿಲ್ಲದೆ ಎಲ್ಲರೂ ಸಹ ಒಟ್ಟಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದ್ದಾರೆ.

RELATED ARTICLES

Latest News