Friday, May 17, 2024
Homeಬೆಂಗಳೂರುಬೆಂಗಳೂರಲ್ಲಿ ನೀರಿಗೆ ಬರ, ಊರಿನತ್ತ ಹೊರಟ ಜನ

ಬೆಂಗಳೂರಲ್ಲಿ ನೀರಿಗೆ ಬರ, ಊರಿನತ್ತ ಹೊರಟ ಜನ

ಬೆಂಗಳೂರು, ಏ.6- ದಿನದಿಂದ ದಿನಕ್ಕೆ ರಾಜಧಾನಿಯಲ್ಲಿ ಹೆಚ್ಚಿದ ಬಿಸಿಲಿನ ಝಳ… ಕುಡಿಯುವ ನೀರಿಗೆ ಭಾರಿ ತೊಂದರೆ… ಶಾಲೆಗಳಿಗೆ ರಜೆ.. ನೀರು ಹೆಚ್ಚಾಗಿ ಬೇಕು.. ಈ ಸಮಯದಲ್ಲಿ ಅದು ಅಸಾಧ್ಯ. ಹೀಗಿರುವಾಗ ಯುಗಾದಿ ಹಬ್ಬಕ್ಕೆ ಎಣ್ಣೆ ಮಜ್ಜನ ಎಲ್ಲಿಂದ ಸಾಧ್ಯ ಎಂದು ನಗರ ವಾಸಿಗಳು ಊರುಗಳತ್ತ ತೆರಳುತ್ತಿದ್ದಾರೆ.

ಯುಗಾದಿ, ರಂಜಾನ್ ಹಿನ್ನೆಲೆಯಲ್ಲಿ ಸಾಲು ಸಾಲು ರಜೆ ಬಂದಿದ್ದು, ಜನರು ಊರುಗಳತ್ತ ರಾತ್ರಿಯೇ ಬಸ್ ಹತ್ತಿದ್ದಾರೆ. ಈಗಾಗಲೇ ಶಾಲೆಗಳಿಗೆ ರಜೆ ಬಂದಿದ್ದು, ನೀರಿನ ಬಳಕೆ ಹೆಚ್ಚಾಗಿದೆ. ಈ ಬರದಲ್ಲಿ ನೀರನ್ನು ಅಡುಗೆ ಎಣ್ಣೆ ತರ ಬಳಸುವಂತಾಗಿದೆ. ಇದರ ಜತೆಗೆ ಯುಗಾದಿ ಬಂದಿದ್ದು, ಎಣ್ಣೆ ಸ್ನಾನ ಮಾಡುವುದು ನಮ್ಮ ಸಂಪ್ರದಾಯ. ಆದರೆ ಹಚ್ಚಿದ ಎಣ್ಣೆ ತೊಳೆಯಬೇಕಂದ್ರೆ ನೀರು ಹೆಚ್ಚಾಗಿ ಬೇಕು. ಪ್ರಸ್ತುತದಲ್ಲಿ ಅದು ಕಷ್ಟ.

ಊರುಗಳಲ್ಲಿ ಇನ್ನೂ ಅಷ್ಟರ ಮಟ್ಟಿಗೇನೂ ನೀರಿನ ಕೊರತೆ ಎದುರಾಗಿಲ್ಲ. ಅಲ್ಲೆ ಹಬ್ಬ ಮಾಡೋಣ ಎಂದು ಜನರು ತವರಿನತ್ತ ತೆರಳುತ್ತಿದ್ದಾರೆ.ಇಂದು ಶನಿವಾರ, ನಾಳೆ ಭಾನುವಾರ ಮಾಮೂಲಿ ರಜೆ 9ರಂದು ಯುಗಾದಿ. 11ರಂದು ರಂಜಾನ್ ಈ ಮಧ್ಯೆ 8, 12ಹಾಗೂ 13 ರಜೆ ಹಾಕಿಕೊಂಡರೆ ಮತ್ತೆ ಶನಿವಾರ, ಭಾನುವಾರ ಸರದಿ ರಜೆ. ಈ ಹಿನ್ನಲೆಯಲ್ಲಿ ಜನರು ಈಗಾಗಲೇ ಊರುಗಳತ್ತ ಪ್ರಯಾಣ ಬೆಳೆಸಿದ್ದಾರೆ.

ನಗರದಲ್ಲಿ ಮನೆಯಲ್ಲಿದ್ರೆ ಸೆಕೆ, ಹೊರಗೆ ಬಂದ್ರೆ ಬಿಸಿಲು. ಆದ್ರೆ ಹಳ್ಳಿಯಲ್ಲಾದ್ರೆ ಹೊಲ-ಗದ್ದೆ ಅಂತಾ ಓಡಾಡುತ್ತಾ ಇದ್ರೆ ಸೆಕೆಯಿಂದ ಮುಕ್ತಿ ಪಡೆಯಬಹುದು. ನೈಸರ್ಗಿಕ ಗಾಳಿ ಸೇವನೆಗೆ ಹಳ್ಳಿಗಳು ಉತ್ತಮ ಅಲ್ವೆ ಎಂಬುದು ಜನರ ಅಭಿಪ್ರಾಯ.ಈಗಾಗಲೇ ಮುಂಗಡವಾಗಿ ಬಸ್, ಟ್ರೈನ್ಗಳನ್ನು ಬುಕ್ಕಿಂಗ್ ಮಾಡಿಕೊಂಡ ಜನರು ನಿನ್ನೆ ಕೆಲಸ ಮುಗಿಸಿಕೊಂಡು ಊರುಗಳಿಗೆ ತೆರಳುತ್ತಿದ್ದ ದೃಶ್ಯ ನಗರದ ಮೆಜೆಸ್ಟಿಕ್ನ ಕೆಎಸ್ಆರ್ಟಿಸಿ ಬಸ್ ನಿಲ್ದಾಣ, ಸ್ಯಾಟಲೈಟ್, ಶಾಂತಿನಗರ ಸೇರಿದಂತೆ ಪ್ರಮುಖ ಸಾರಿಗೆ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಕಂಡು ಬಂತು.

ಕೆಎಸ್ಆರ್ಟಿಸಿ ವತಿಯಿಂದ ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಸಾವಿರ ವಿಶೇಷ ಬಸ್ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಖಾಸಗಿ ಟ್ರಾವೆಲ್ಸ್ಗಳಲ್ಲೂ ಕೂಡ ಒಂದು ತಿಂಗಳ ಹಿಂದೆಯೇ ಬುಕ್ಕಿಂಗ್ ಮಾಡಲಾಗಿದ್ದು, ಕೆಲ ಬಸ್ ಮಾಲೀಕರು ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದರೂ ಬೇಸಿಗೆಯಲ್ಲಿ ಆರಾಮವಾಗಿ ಊರುಗಳಿಗೆ ತೆರಳಲು ಜನರು ಬುಕ್ಕಿಂಗ್ ಮಾಡಿದ್ದಾರೆ. ಟ್ರೈನ್ಗಳಲ್ಲೂ ಕೂಡ ಮುಂಗಡ ಕಾಯ್ದಿರಿಸಲಾಗಿದ್ದು, ಹುಬ್ಬಳ್ಳಿ, ಧಾರವಾಡ, ಆಂಧ್ರ ಪ್ರದೇಶ, ತಿರುಪತಿ ಸೇರಿದಂತೆ ಮತ್ತಿತರ ದೂರದ ಊರುಗಳಿಗೆ ಪ್ರಯಾಣಿಕರು ತೆರಳುತ್ತಿದ್ದಾರೆ.

RELATED ARTICLES

Latest News