Friday, May 3, 2024
Homeಇದೀಗ ಬಂದ ಸುದ್ದಿಬೆಂಗಳೂರು ಬಂದ್ : ತಾರಕಕ್ಕೇರಿದ ಕಾವೇರಿ ಕೂಗು, ರಾಜಭವನ ಮುತ್ತಿಗೆಗೆ ಹೋರಾಟಗಾರರ ಯತ್ನ

ಬೆಂಗಳೂರು ಬಂದ್ : ತಾರಕಕ್ಕೇರಿದ ಕಾವೇರಿ ಕೂಗು, ರಾಜಭವನ ಮುತ್ತಿಗೆಗೆ ಹೋರಾಟಗಾರರ ಯತ್ನ

ಬೆಂಗಳೂರು, ಸೆ.26- ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ವಾಟಾಳ್ ನಾಗ ರಾಜ್ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಒಕ್ಕೂಟ ಇಂದು ರಾಜಭವನ ಮುತ್ತಿಗೆ ಹಾಕಲು ಯತ್ನಿಸಿತು. ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ.ಗೋವಿಂದ್, ಕರವೇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಕನ್ನಡ ಸೇನೆಯ ಕೆ.ಆರ್.ಕುಮಾರ್ ಅನೇಕರು ಭಾಗ ವಹಿಸಿದ್ದರು.

ರಾಜಭವನದತ್ತ ಪ್ರತಿಭಟನಾ ಮೆರವಣಿಗೆ ನಡೆಸುತ್ತಿದ್ದ ನಾಯಕರನ್ನು ಪೊಲೀಸರು ಅರ್ಧದಲ್ಲೇ ತಡೆದು ವಶಕ್ಕೆ ತೆಗೆದುಕೊಂಡರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ವಿವಾದಕ್ಕೆ ಸಂಬಂಧಪಟ್ಟಂತೆ ಕನ್ನಡ ಪರ ಸಂಘಟನೆಗಳ ಒಕ್ಕೂಟ ಸೆ.29 ರಂದು ಕರೆದಿರುವ ಕರ್ನಾಟಕ ಬಂದ್ ನಡೆಯಲಿದೆ. ಈ ನಿಟ್ಟಿನಲ್ಲಿ ಹಲವು ಸುತ್ತಿನ ಚರ್ಚೆಗಳಾಗಿದ್ದು, ರಾಜ್ಯಾದ್ಯಂತ ಸುಮಾರು 2 ಸಾವಿರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಲಿವೆ ಎಂದು ಹೇಳಿದರು.

ಕರ್ನಾಟಕ ಬಂದ್‍ನಲ್ಲಿ ಸಾರಿಗೆ ಸೇರಿದಂತೆ ಎಲ್ಲಾ ಚಟುವಟಿಕೆಗಳೂ ಸ್ಥಗಿತಗೊಳ್ಳಲಿವೆ. ಸುಮಾರು ಒಂದು ಲಕ್ಷ ಜನ ಪ್ರತಿಭಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ. ರಾಜ್ಯಸರ್ಕಾರ ಯಾವುದೇ ಒತ್ತಡ ಹಾಕಿದ್ದರೂ ನಾವು ಹೋರಾಟ ಮಾಡುವುದನ್ನು ಕೈಬಿಡುವುದಿಲ್ಲ. ಈಗಾಗಲೇ ನಿಷೇಧಾಜ್ಞೆ ಜಾರಿಗೊಳಿಸಿ ಪ್ರತಿಭಟನೆ ಹತ್ತಿಕ್ಕಲು ಯತ್ನಿಸುತ್ತಿದೆ. ಇದನ್ನು ಖಂಡಿಸುತ್ತೇವೆ ಎಂದರು.

ನೋವನ್ನು ವ್ಯಕ್ತಪಡಿಸಲು ನಮ್ಮ ಜನ ಬಂದ್ ಮಾಡಿದ್ದಾರೆ : ಎಚ್‍ಡಿಡಿ

ಯಡಿಯೂರಪ್ಪ, ಕುಮಾರಸ್ವಾಮಿ ಅವರು ಬಂದ್‍ಗೆ ಬೆಂಬಲ ಎಂದು ಘೋಷಿಸಿದ್ದಾರೆ. ಸುಮ್ಮನೆ ಏಕೆ ಬೆಂಬಲ ಕೊಡುತ್ತೀರಾ, ಬೀದಿಗೆ ಬಂದು ಪ್ರತಿಭಟನೆ ಮಾಡಿ ಎಂದು ಸವಾಲು ಹಾಕಿದರು. ಹಿಂದಿನ ಅವಧಿಯಲ್ಲಿ ಎಲ್ಲಾ ಸರ್ಕಾರಗಳು ಸಂಘಟನೆಗಳ ಜೊತೆ ಚರ್ಚೆ ಮಾಡಿ ನೀರು ಬಿಡುತ್ತಿದ್ದವು. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗಲೂ ಚರ್ಚೆ ಮಾಡಿಯೇ ನೀರು ಬಿಡಲಾಗಿತ್ತು. ಆಗಲೂ ಹೋರಾಟ ನಡೆದಿತ್ತು. ಆದರೆ ಈಗ ಯಾರನ್ನೂ ಹೇಳದೇ, ಕೇಳದೆ ನೀರು ಹರಿಸಿದ್ದಾರೆ ಎಂದು ಆರೋಪಿಸಿದರು.

ರಾಜ್ಯಸರ್ಕಾರ ಪ್ರತಿಭಟನೆಯನ್ನು ಹತ್ತಿಕ್ಕಲು ನಿಷೇಧಾಜ್ಞೆ ಹೇರಿರುವುದು, ವ್ಯಾಪಕ ಬಂದೊಬಸ್ತ್ ಅನ್ನು ನೋಡಿ ತಮಿಳುನಾಡಿನ ಮುಖ್ಯಮಂತ್ರಿ ಸ್ಟಾಲಿನ್ ನಗುತ್ತಿದ್ದಾರೆ. ಕರ್ನಾಟಕ ಸರ್ಕಾರ ಪೊಲೀಸರನ್ನು ಬಳಸಿಕೊಂಡು ಪ್ರತಿಭಟನೆಯನ್ನು ಹತ್ತಿಕ್ಕಿ ನಮಗೆ ನೀರು ಬಿಡುತ್ತಿದ್ದಾರೆ, ಶಹಬ್ಬಾಸ್ ಎಂದು ಸ್ಟಾಲಿನ್ ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಕರ್ನಾಟಕ ಸರ್ಕಾರ ಮತ್ತು ತಮಿಳುನಾಡಿಗೆ ಅದೇನು ನಂಟಸ್ತನ ಇದೆಯೋ ಗೊತ್ತಿಲ್ಲ, ರಾಜ್ಯವನ್ನು ಅವರಿಗೆ ಒಪ್ಪಿಸಿಬಿಟ್ಟಂತೆ ಕಾಣುತ್ತಿದೆ. ನಮ್ಮವರು ಸ್ಟಾಲಿನ್ ಹೇಳಿದಂತೆ ಕೇಳುತ್ತಿದ್ದಾರೆ. ಒಂದು ತಿಂಗಳಿನಿಂದಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ಸಂಸದರು ಕಾವೇರಿ ವಿಷಯದಲ್ಲಿ ಸಂಸತ್‍ನಲ್ಲಿ ಧ್ವನಿಯೆತ್ತುತ್ತಿಲ್ಲ. ಉಳಿದ ವಿಷಯಗಳಲ್ಲಿ ನಾಜೂಕಾಗಿ ಮಾತನಾಡುತ್ತಾರೆ. ಮಾತನಾಡುವ ಮೊದಲು ತುಟಿಗೆ ಲಿಫ್ಟಿಕ್ ಹಚ್ಚಿಕೊಳ್ಳುತ್ತಾರೆ. ಈ ಮೊದಲು ಹೆಣ್ಣು ಮಕ್ಕಳು ಹಾಕಿಕೊಳ್ಳುತ್ತಿದ್ದರು. ಈಗ ಅದನ್ನು ನಮ್ಮ ಸಂಸದರೂ ಹಚ್ಚಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಸಂಸದರು ಹುಡುಗಾಟ ಆಡುತ್ತಿದ್ದಾರೆಯೇ, ಲಿಫ್ಟಿಕ್ ಹಾಕಿಕೊಂಡು ಸಂಸತ್‍ಗೆ ಹೋಗುತ್ತಿದ್ದಾರೆ. ಇವರಿಗೆ ಯೋಗ್ಯತೆ ಇದೆಯೇ, ಮೊದಲು ಸಂಸತ್ ಸ್ಥಾನಕ್ಕೆ ರಾಜಿನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ವೈಫಲ್ಯಗಳನ್ನು ಮುಚ್ಚಿಕೊಳ್ಳಲು ಸರ್ಕಾರ ಪ್ರತಿಭಟನೆ ಹತ್ತಿಕ್ಕುತ್ತಿದೆ : ಕುರುಬೂರು ಶಾಂತಕುಮಾರ್

ಕರ್ನಾಟಕ ಬಂದ್‍ನಿಂದ ತಮಿಳುನಾಡಿಗೆ ತಕ್ಕ ಉತ್ತರ ನೀಡುತ್ತೇವೆ. ಕನ್ನಡ ಚಿತ್ರರಂಗ ಸೇರಿದಂತೆ ಎಲ್ಲವೂ ಸ್ತಬ್ಧಗೊಳ್ಳುತ್ತವೆ. ಬೆಂಗಳೂರು ಬಂದ್ ಮಾಡುವವರಿಗೆ ಒಟ್ಟಾಗಿ ಹೋರಾಟ ಮಾಡುವಂತೆ ಸಲಹೆ ನೀಡಿದ್ದೆ. ಆದರೆ ಅವರು ಪ್ರತಿಷ್ಠೆಗೆ ಅಂಟಿಕೊಂಡು ಬೆಂಗಳೂರು ಬಂದ್ ಮಾಡಿದ್ದಾರೆ ಎಂದು ಆಕ್ಷೇಪಿಸಿದರು.

ಚಳುವಳಿ ಮಾಡುವ ಸ್ವಾತಂತ್ರ್ಯ ಎಲ್ಲರಿಗೂ ಇದೆ. ಈಗ ಹೋರಾಟ ಮಾಡುತ್ತಿರುವ ಯಾರೂ ಹುಟ್ಟೇ ಇರಲಿಲ್ಲ, ಆಗಿನಿಂದಲೂ ಇಲ್ಲಿಯವರೆಗೂ 12 ಸಾವಿರ ಹೋರಾಟಗಳನ್ನು ಮಾಡಿದ್ದೇನೆ. ಇಂದು ನಡೆಸಿರುವ ಬೆಂಗಳೂರು ಬಂದ್‍ನಲ್ಲಿ ಹೋರಾಟಗಾರರನ್ನು ಸಿಕ್ಕಸಿಕ್ಕಲ್ಲಿ ಬಂಸಲಾಗುತ್ತಿದೆ. ಏಕೆ, ಅವರೇನು ಕಳ್ಳರೇ. 50 ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಇದು ಪೊಲೀಸ್ ರಾಜ್ಯವೇ ಎಂದು ಪ್ರಶ್ನಿಸಿದರು.

RELATED ARTICLES

Latest News