Friday, May 10, 2024
Homeರಾಜ್ಯಐಟಿ ದಾಳಿ ರಾಜಕೀಯ ಪ್ರೇರಿತ : ಡಿಸಿಎಂ ಡಿಕೆಶಿ

ಐಟಿ ದಾಳಿ ರಾಜಕೀಯ ಪ್ರೇರಿತ : ಡಿಸಿಎಂ ಡಿಕೆಶಿ

ಬೆಂಗಳೂರು, ಅ.13- ರಾಜಕಾರಣ ಇಲ್ಲದೆ ಆದಾಯ ತೆರಿಗೆಯವರು ದಾಳಿ ಮಾಡುವುದೇ ಇಲ್ಲ. ನಮಗೆ ಆ ಬಗ್ಗೆ ಸ್ಪಷ್ಟ ತಿಳುವಳಿಕೆ ಇದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ನಗರದಲ್ಲಿಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಾಯ ತೆರಿಗೆ ದಾಳಿಯಲ್ಲಿ ರಾಜಕೀಯ ಇದ್ದೇ ಇದೆ. ಚತ್ತಿಸ್‍ಗಡ ಸೇರಿದಂತೆ ಎಲ್ಲಾ ರಾಜ್ಯಗಳಲ್ಲೂ ಈ ರೀತಿಯ ದಾಳಿಗಳಾಗುತ್ತಿವೆ. ರಾಜಕೀಯ ಇಲ್ಲದೆ ಇದ್ದರೆ ಆದಾಯ ತೆರಿಗೆ ಅಧಿಕಾರಿಗಳು ಬರುವುದೇ ಇಲ್ಲ. ಇದರ ಬಗ್ಗೆ ನಮಗೆ ಗೋತ್ತಿದೆ ಎಂದರು.

ಪಂಚರಾಜ್ಯಗಳ ಚುನಾವಣೆಗೆ ರಾಜ್ಯದಿಂದ ಹಣ ಕಳುಹಿಸಲಾಗುತ್ತಿತ್ತು ಎಂದು ಬಿಜೆಪಿ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್ ಆರೋಪಕ್ಕೆ ಉತ್ತರ ನೀಡಲು ಡಿ.ಕೆ.ಶಿವಕುಮಾರ್ ನಿರಾಕರಿಸಿದರು. ಕೆಲವು ರಾಜಕೀಯ ಇದ್ದಿದ್ದೆ, ಇವರಿಗೆಲ್ಲಾ ಉತ್ತರ ಕೊಡುವ ಅಗತ್ಯ ಇಲ್ಲ. ರಸ್ತೆಯಲ್ಲಿ, ಬೀದಿಗೆ ಮಾತನಾಡುವವರಿಗೆಲ್ಲಾ ಪ್ರತಿಕ್ರಿಯಿಸಲ್ಲ ಎಂದರು. ಬಿಬಿಎಂಪಿಯಲ್ಲಿ ಬಿಡುಗಡೆ ಮಾಡಿದ್ದ ಗುತ್ತಿಗೆ ಬಿಲ್‍ನ ಬಾಕಿಯಲ್ಲಿ ಕಮಿಷನ್ ಪಡೆದು ತಮಿಳುನಾಡಿಗೆ ಕಳುಹಿಸಲಾಗುತ್ತಿತ್ತು ಎಂಬ ಆರೋಪದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಕಲೆಕ್ಷನ್ ಜಾತ್ರೆ ನಡೆಸುತ್ತಿದೆ : ಯತ್ನಾಳ್

ರಾಜ್ಯದಲ್ಲಿನ ವಿದ್ಯುತ್ ಕೊರತೆ ಬಗ್ಗೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಜೆ ಸಭೆ ನಡೆಸಲಿದ್ದಾರೆ. ಯಾರ್ಯಾರ ಕಾಲದಲ್ಲಿ ಎಷ್ಟೆಷ್ಟು ವಿದ್ಯುತ್ ಉತ್ಪಾದನೆಯಾಗುತ್ತಿತ್ತು. ತಾವು ಇಂಧನ ಸಚಿವರಾಗಿದ್ದಾಗ ಎಷ್ಟು ವಿದ್ಯುತ್ ಹೆಚ್ಚುವರಿಯಾಗಿತ್ತು ಎಂಬ ಮಾಹಿತಿ ಇದೆ. ಮುಖ್ಯಮಂತ್ರಿಯವರ ನೇತೃತ್ವದ ಸಭೆ ಮುಗಿಯಲಿ, ನಂತರ ನಾನು ಮಾತನಾಡುತ್ತೇನೆ ಎಂದರು.

ಬಾಕಿ ಬಿಲ್ ಬಿಡುಗಡೆಗೆ ಸಂಬಂಸಿದಂತೆ ಗುತ್ತಿಗೆದಾರರ ಸಂಘದ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ವಿಚಾರಣೆ ಬಾಕಿ ಇದ್ದಾಗಲೂ ಬಹುತೇಕ ಶೇ.65-70ರಷ್ಟು ಬಾಕಿ ಬಿಲ್‍ಗಳನ್ನು ಬಿಡುಗಡೆ ಮಾಡಿದ್ದೇವೆ. ವಿಚಾರಣಾ ವರದಿ ಬರದೆ ಇದ್ದರೂ ಗುತ್ತಿಗೆದಾರರು, ಅದರ ಸಂಘದ ಅಧ್ಯಕ್ಷ ಕೆಂಪಣ್ಣ ಹೇಳಿದರು ಎಂಬ ಕಾರಣಕ್ಕೆ ಆದ್ಯತೆ ಮೇರೆಗೆ ಹಣ ನೀಡಿದ್ದೇವೆ. ಕೆಂಪಣ್ಣ ಅವರು ಆತಂಕ ಪಡುವ ಅಗತ್ಯ ಇಲ್ಲ. ಯಾವುದಾದರೂ ಬಾಕಿ ಇದ್ದರೆ ಅದನ್ನು ಪರಿಶೀಲಿಸಿ ನ್ಯಾಯ ಒದಗಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.

RELATED ARTICLES

Latest News