ಬೆಂಗಳೂರು,ಫೆ.18- ಪತ್ನಿ ಮೇಲೆ ಅನುಮಾನಗೊಂಡ ಪತಿ ಮಧ್ಯರಾತ್ರಿ ಮಚ್ಚಿನಿಂದ ಪತ್ನಿಯ ಕತ್ತು ಕತ್ತರಿಸಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ಗೋವಿಂದರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಡಲಪಾಳ್ಯದ ಸಂಜೀವಿನಿ ನಗರ ನಿವಾಸಿ ದೇವಮ್ಮ (58) ಪತಿಯಿಂದಲೇ ಕೊಲೆಯಾದ ಪತ್ನಿ.ಆರೋಪಿ ಕುಮಾರ್ ಹಾಗೂ ದೇವಮ ದಂಪತಿಗೆ ಮೂವರು ಮಕ್ಕಳು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಗನಿಗೆ ಮದುವೆಯಾಗಿದೆ. ಸಂಜೀವಿನಿ ನಗರದಲ್ಲಿ ದಂಪತಿ ನೆಲೆಸಿದ್ದು, ಇವರ ಮನೆ ಸಮೀಪದಲ್ಲೇ ಮಗ ಬೇರೆ ವಾಸವಾಗಿದ್ದಾನೆ.
ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದು, ದೇವಮ ರೈಲ್ವೆ ನಿಲ್ದಾಣದಲ್ಲಿ ಸ್ವಚ್ಚತಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. ಈ ನಡುವೆ ಪತ್ನಿ ಮೇಲೆ ಕುಮಾರ್ಗೆ ಅನುಮಾನ. ಆಗಾಗ್ಗೆ ದಂಪತಿ ನಡುವೆ ಇದೇ ವಿಚಾರಕ್ಕೆ ಜಗಳ ನಡೆಯುತ್ತಿತ್ತು.
ರಾತ್ರಿ ಊಟ ಮಾಡಿ ದೇವಮ ಮಲಗಿದ್ದಾರೆ. ಅದೇ ಸಮಯಕ್ಕಾಗಿ ಕಾದಿದ್ದ ಕುಮಾರ್ ಮಧ್ಯರಾತ್ರಿ 12.30 ರ ಸುಮಾರಿನಲ್ಲಿ ಮಚ್ಚಿನಿಂದ ಕತ್ತು ಕತ್ತರಿಸಿ ಭೀಕರವಾಗಿ ಪತ್ನಿಯನ್ನು ಕೊಲೆ ಮಾಡಿ ನಂತರ ಮಗನಿಗೆ ಫೋನ್ ಮಾಡಿ ನಿನ್ನ ತಾಯಿಯನ್ನು ಕೊಲೆ ಮಾಡಿದೆ ಎಂದು ತಿಳಿಸಿದ್ದಾನೆ.
ಅಪ್ಪನ ಮಾತಿನಿಂದ ಗಾಬರಿಗೊಂಡ ಮಗ ಬಂದು ನೋಡುವಷ್ಟರಲ್ಲಿ ರಕ್ತದ ಮಡುವಿನಲ್ಲಿ ತಾಯಿ ಮೃತಪಟ್ಟಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ ಕುಮಾರ್ನನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.
