ಬೆಂಗಳೂರು,ಜು.17-ಇಂದಿರಾನಗರದ ಮೆಟ್ರೋ ನಿಲ್ದಾಣದ ಬಳಿ ಅಪರಿಚಿತ ವ್ಯಕ್ತಿಯೊಬ್ಬ ಪ್ರಯಾಣಿಕರ ಮೇಲೆ ಸ್ಪ್ರೇ ಮಾಡಿ ಓಡಿ ಹೋಗಿದ್ದಾನೆ. ಇದರಿಂದ ಕೆಲ ಕಾಲ ಆತಂಕ ಉಂಟಾಗಿತ್ತು. ವೈಟ್ಫೀಲ್ಡ್ ನಿಂದ ಚಲ್ಲಘಟ್ಟ ಪರ್ಪಲ್ ಲೈನ್ ವ್ಯಾಪ್ತಿಗೆ ಬರುವ ಇಂದಿರಾನಗರದ ಮೆಟ್ರೋ ನಿಲ್ದಾಣದ ಹೊರಗಿನ ಆವರಣದ ಬಳಿ ನಿನ್ನೆ ಸಂಜೆ 7.30 ರ ಸುಮಾರಿನಲ್ಲಿ ಮೆಟ್ರೋ ಇಳಿದು ಪ್ರಯಾಣಿಕರು ಹೊರ ಬರುತ್ತಿದ್ದರು.
ಆ ಸಂದರ್ಭದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಏಕಾಏಕಿ ಜನರ ಮೇಲೆ ಸ್ಪ್ರೇ ಮಾಡಿ ಪರಾರಿಯಾಗಿದ್ದಾನೆ. ಸ್ಪ್ರೇ ಯಿಂದಾಗಿ ಕ್ಷಣಾರ್ಧದಲ್ಲಿ ಹೊಗೆ ಆವರಿಸಿಕೊಂಡಿದ್ದರಿಂದ ಉಸಿರಾಡಲು ತೊಂದರೆಯಾಗಿ ಮೂಗು ಮುಚ್ಚಿಕೊಂಡು ಆತಂಕದಿಂದ ಓಡಿದ್ದಾರೆ. ಇದನ್ನು ಗಮನಿಸಿದ ಮೆಟ್ರೋ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಸುತ್ತಮುತ್ತ ಹುಡುಕಾಡಿದರಾದರೂ ಅಪರಿಚಿತ ವ್ಯಕ್ತಿ ಪತ್ತೆಯಾಗಿಲ್ಲ.
ಈ ಬಗ್ಗೆ ಇಂದಿರಾನಗರ ಠಾಣೆ ಪೊಲೀಸರು ಸ್ಪ್ರೇ ಮಾಡಿದ ವ್ಯಕ್ತಿ ಯಾರು, ಯಾತಕ್ಕಾಗಿ ಈ ರೀತಿ ಮಾಡಿದ ಎಂಬುವುದರ ಬಗ್ಗೆ ತನಿಖೆ ಕೈಗೊಂಡಿದ್ದು, ಮೆಟ್ರೋ ನಿಲ್ದಾಣದ ಸಿಸಿ ಕ್ಯಾಮೆರಾ ಹಾಗೂ ಘಟನಾ ಸ್ಥಳದ ಸುತ್ತಮುತ್ತಲಿನ ರಸ್ತೆಗಳಲ್ಲಿ ರುವ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸು ತ್ತಿದ್ದಾರೆ.
