ಬೆಂಗಳೂರು,ಮೇ 29- ಅತೀ ವೇಗವಾಗಿ ಬಂದ ಮಿನಿ ಬಸ್ವೊಂದು ನಿಯಂತ್ರಣ ತಪ್ಪಿ ಐದು ದ್ವಿಚಕ್ರ ವಾಹನಗಳಿಗೆ ಹಾಗೂ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಬನಶಂಕರಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.
ಬನಶಂಕರಿ 2ನೇ ಹಂತದ ಕದಿರೇನಹಳ್ಳಿ ಪಾರ್ಕ್ ಸಮೀಪದ ನಿವಾಸಿ, ಸ್ಕೂಟರ್ ಸವಾರ ಉದಯಕುಮಾರ್ (63) ಮತ್ತು ಬನಶಂಕರಿ 3ನೇ ಹಂತದ ನಿವಾಸಿ, ಎಲೆಕ್ಟ್ರಿಕ್ ಸ್ಕೂಟರ್ ಸವಾರ ಸೆಲ್ವಕುಮಾರ್ (52) ಮೃತಪಟ್ಟವರು.ಅಪಘಾತದಲ್ಲಿ ಇಬ್ಬರು ಪಾದಚಾರಿಗಳು ಸೇರಿದಂತೆ ಮೂವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾತ್ರಿ 8.20 ರ ಸುಮಾರಿನಲ್ಲಿ ರಿಂಗ್ ರಸ್ತೆ ಕದಿರೇನಹಳ್ಳಿಯ ಎಎಂ ಆಸ್ಪತ್ರೆ ಸಮೀಪ ಅತೀ ವೇಗವಾಗಿ ಬಂದ ಮಿನಿ ಬಸ್ ಇಬ್ಬರು ಪಾದಚಾರಿಗಳು, ಮೂರು ಸ್ಕೂಟರ್ಗಳು ಹಾಗೂ ಎರಡು ಬೈಕ್ಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿ ಇಬ್ಬರು ಸವಾರರು ಮೃತಪಟ್ಟಿದ್ದಾರೆ. ಐದು ವಾಹನಗಳು ಜಖಂಗೊಂಡಿವೆ.
ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಿದ್ದಾರೆ.ಬಸ್ ಬ್ರೇಕ್ ವೈಫಲ್ಯದಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗುತ್ತಿದ್ದು, ಆರ್ಟಿಓ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಬನಶಂಕರಿ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
