ಬೆಂಗಳೂರು,ಜ.19- ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗಿರಿನಗರ ಪೊಲೀಸ್ ಠಾಣೆ ಸಬ್ಇನ್ಸ್ಪೆಕ್ಟರ್ ಮಂಜುನಾಥ್ ಅವರು ಇದೀಗ ರಾಮಮಂದಿರದ ಚಿತ್ರ ಬಿಡಿಸಿ ಗಮನ ಸೆಳೆದಿದ್ದಾರೆ. ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿರುವ ಮಂಜುನಾಥ್ ಅವರು ಹವ್ಯಾಸವಾಗಿ ರೂಢಿಸಿಕೊಂಡು ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
![](https://eesanje.com/wp-content/uploads/2024/01/WhatsApp-Image-2024-01-19-at-12.27.38_51448012-1024x803.jpg)
ಮಡಿಕೇರಿ ಜಿಲ್ಲೆ ಕುಶಾಲನಗರ ತಾಲೂಕಿನ ವಾರನೂರು ನಿವಾಸಿಯಾಗಿರುವ ಮಂಜುನಾಥ್ ಅವರು ಎಂಎಸ್ಸಿ ಪದವೀಧರರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡಿ, 2012 ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿದ್ದಾರೆ.
ಮಂಜುನಾಥ್ ಅವರು ಇದುವರೆಗೂ ಒಂದು ಸಾವಿರಕ್ಕೂ ಹೆಚ್ಚು ದೇವರ ಚಿತ್ರಗಳು, ಪ್ರಕೃತಿ ಸೌಂದರ್ಯದ ಸೊಬಗಿನ ಚಿತ್ರಗಳು ಹಾಗೂ ಪ್ರಮುಖ ವ್ಯಕ್ತಿಗಳ ಚಿತ್ರಗಳನ್ನು ಬಿಡಿಸುವ ಮೂಲಕ ಪ್ರಶಂಸೆ ಗಳಿಸಿದ್ದಾರೆ.
ನಿಯಮ ಉಲ್ಲಂಘನೆ : ನ್ಯಾಯ ಯಾತ್ರೆ ವಿರುದ್ಧ ದೂರು
ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ ವಾಗುತ್ತಿದ್ದು, ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಕಣ್ತುಂಬಿಕೊಳ್ಳಲು ಜಗತ್ತೇ ಕಾಯುತ್ತಿದೆ. ಈ ಸಂದರ್ಭದಲ್ಲಿ ಮಂಜುನಾಥ್ ಅವರು ಶ್ರೀರಾಮಮಂದಿರದ ಚಿತ್ರವನ್ನು ತಮ್ಮ ಕುಂಚದಲ್ಲಿ ಅರಳಿಸಿದ್ದಾರೆ.
![](https://eesanje.com/wp-content/uploads/2024/01/WhatsApp-Image-2024-01-19-at-12.27.38_e14fdcb8-764x1024.jpg)
ಮಂಜುನಾಥ್ ಅವರು ಚಿತ್ರ ಬಿಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಜನತೆ ಅವರಿಗೆ ಸೆಲ್ಯೂಟ್ ಹೊಡೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದೇಶದ ಅಸಂಖ್ಯಾತ ಭಕ್ತರು ಕಲೆ, ಸಾಹಿತ್ಯ, ಸಂಗೀತ ಹೀಗೆ ವಿವಿಧ ರೀತಿಯಲ್ಲಿ ರಾಮನಿಗೆ ಭಕ್ತಿ ಸಮರ್ಪಿಸುತ್ತಿದ್ದಾರೆ.