Thursday, May 9, 2024
Homeರಾಜ್ಯನಗರ್ತಪೇಟೆ ಪ್ರಕರಣವನ್ನು ಬಿಜೆಪಿ ದುರುದ್ದೇಶಪೂರ್ವಕವಾಗಿ ವೈಭವೀಕರಿಸುತ್ತಿದೆ : ಕಾಂಗ್ರೆಸ್

ನಗರ್ತಪೇಟೆ ಪ್ರಕರಣವನ್ನು ಬಿಜೆಪಿ ದುರುದ್ದೇಶಪೂರ್ವಕವಾಗಿ ವೈಭವೀಕರಿಸುತ್ತಿದೆ : ಕಾಂಗ್ರೆಸ್

ಬೆಂಗಳೂರು,ಮಾ.20- ಇಲ್ಲಿನ ನಗರ್ತಪೇಟೆಯ ಗಲಭೆ ಪ್ರಕರಣವನ್ನು ಬಿಜೆಪಿ ದುರುದ್ದೇಶಪೂರ್ವಕವಾಗಿ ವೈಭವೀಕರಿಸುತ್ತಿದೆ. ರಾಜಕೀಯ ಲಾಭಕ್ಕಾಗಿ ಕೋಮು ಸಂಘರ್ಷ ಪ್ರಚೋದಿಸಲಾಗುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸುತ್ತಿದೆ. ಚುನಾವಣೆ ಸಂದರ್ಭದಲ್ಲಿ ರಾಜಕೀಯ ಕಾರಣಕ್ಕಾಗಿ ಬಿಜೆಪಿಯ ಎಲ್ಲಾ ನಾಯಕರೂ ನಗರ್ತಪೇಟೆಗೆ ಭೇಟಿ ನೀಡಿ ಪ್ರತಿಭಟನೆ ನಡೆಸಿದ್ದಾರೆ.

ಅದೇ ಬಿಜೆಪಿ ನಾಯಕರು ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದರೂ ಬಾಯಿ ಬಿಡುತ್ತಿಲ್ಲ. ಕೇಂದ್ರದಿಂದ ಅನುದಾನ ಬಂದಿಲ್ಲ ಎಂಬುದನ್ನು ತಿಳಿಸುತ್ತಿಲ್ಲ. ರಾಜ್ಯಸರ್ಕಾರ ತನ್ನ ಇತಿಮಿತಿಯಲ್ಲಿ ಬರ ನಿರ್ವಹಣೆ ಮಾಡುತ್ತಿದೆ. ಆದರೆ ಸರ್ಕಾರವನ್ನು ಹೊಣೆ ಮಾಡುತ್ತಿರುವ ಬಿಜೆಪಿಯವರು ಜನರ ಹಿತವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂದು ಕಾಂಗ್ರೆಸ್‍ನ ಹಲವು ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‍ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ನಗರ್ತಪೇಟೆಯ ಗಲಭೆಯನ್ನು ಆಧಾರವಾಗಿಟ್ಟುಕೊಂಡು ಪ್ರತಿಭಟನೆಗೆ ಪ್ರಚೋದನೆ ನಡೆಸಿದ ಸಂಸದ ತೇಜಸ್ವಿಸೂರ್ಯ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಎಳೆ ಕೂಸಿನಂತಹ ಸಂಸದ ಕೋವಿಡ್ ಬಂದಾಗ ಫುಟ್ಬಾಲ್ ಆಡಲು ಹೋಗಿದ್ದರು, ನೆರೆ ಬಂದಾಗ ದೋಸೆ ತಿನ್ನೋಕೆ ಹೋಗಿದ್ದರು, ಕನ್ನಡಿಗರಿಗೆ ಅನ್ಯಾಯವಾದಾಗ ಎಮರ್ಜೆನ್ಸಿ ಎಕ್ಸಿಟ್‍ನಲ್ಲಿ ವಿಮಾನದಿಂದ ಹಾರಲು ಹೋಗಿದ್ದರು ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ಕನ್ನಡಿಗ ಯುವಕರು ಉದ್ಯೋಗ ಕೇಳುತ್ತಿದ್ದಾಗ ನಾಪತ್ತೆಯಾಗಿದ್ದ ತೇಜಸ್ವಿ ಸೂರ್ಯ ಈಗ ಬೀದಿ ಜಗಳದ ವಿಷಯಕ್ಕೆ ಮಾತ್ರ ಓಡೋಡಿ ಬಂದಿದ್ದಾರೆ, ಸಂಸದನಾಗಿ ತನ್ನ ಹೊಣೆಗಾರಿಕೆ ಮರೆತು ಮಕ್ಕಳಾಟ ಆಡುವವರನ್ನು ಈ ಬಾರಿ ಜನತೆ ತಿರಸ್ಕರಿಸಿ ಮನೆಗೆ ಕಳುಹಿಸುವುದು ನಿಶ್ಚಿತ ಎಂದು ತಿರುಗೇಟು ನೀಡಿದೆ.

RELATED ARTICLES

Latest News