Friday, May 10, 2024
Homeರಾಜ್ಯವಿಜಯೇಂದ್ರ ಆಯ್ಕೆ : ಹಿರಿಯರ ಅಪಸ್ವರಕ್ಕೆ ಹೈಕಮಾಂಡ್ ಅಂಕುಶ

ವಿಜಯೇಂದ್ರ ಆಯ್ಕೆ : ಹಿರಿಯರ ಅಪಸ್ವರಕ್ಕೆ ಹೈಕಮಾಂಡ್ ಅಂಕುಶ

ಬೆಂಗಳೂರು,ನ.13- ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ನೇಮಕವಾಗಿರುವ ಬಿ.ವೈ.ವಿಜಯೇಂದ್ರ ಕುರಿತು ಯಾರೂ ಕೂಡ ಅಪಸ್ವರ ಎತ್ತಬಾರದೆಂದು ಕೇಂದ್ರ ಬಿಜೆಪಿ ನಾಯಕರು ಸ್ಥಳೀಯ ನಾಯಕರಿಗೆ ಕಟ್ಟಪ್ಪಣೆ ವಿಧಿಸಿದ್ದಾರೆ. ವಿಜಯೇಂದ್ರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷರಾದ ನಂತರ ಈ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಕೆಲ ಹಿರಿಯರು ಬಹಿರಂಗವಾಗಿ ಮಾತನಾಡದಿದ್ದರೂ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು.

ಕೆಲವರಂತೂ ಕನಿಷ್ಟ ಪಕ್ಷ ವಿಜಯೇಂದ್ರಗೆ ಶುಭಾಷಯವನ್ನು ಹೇಳದೆ ಅಂತರ ಕಾಪಾಡಿಕೊಂಡಿದ್ದರು. ಇದು ಮತ್ತೊಂದು ರೀತಯ ಭಿನ್ನಮತಕ್ಕೆ ದಾರಿ ಕಲ್ಪಿಸಲಿದೆ ಎಂಬುದನ್ನು ಅರಿತಿರುವ ಕೇಂದ್ರ ವರಿಷ್ಠರು ಪಕ್ಷದ ತೀರ್ಮಾನವನ್ನು ಯಾರೊಬ್ಬರೂ ಪ್ರಶ್ನಿಸುವಂತಿಲ್ಲ ಎಂದು ಸ್ಪಷ್ಟ ಮಾತುಗಳಲ್ಲಿ ಸೂಚಿಸಿದರು.

ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಆಲೋಚಿಸಿ ಅಂತಿಮ ನಿರ್ಧಾರಕ್ಕೆ ಬರಲಾಗುತ್ತದೆ. ಅದೇ ರೀತಿ ಕರ್ನಾಟಕ ಬಿಜೆಪಿ ಘಟಕಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ಮುನ್ನ ನಾವು ಎಲ್ಲ ಸಾಧಕಬಾಧಕಗಳನ್ನು ಚರ್ಚಿಸಿದ್ದೇವೆ. ವಿಜಯೇಂದ್ರ ನೇಮಕವಾದ ನಂತರ ವಿರೋಧ ವ್ಯಕ್ತಪಡಿಸುತ್ತಿರುವ ಔಚಿತ್ಯವಾದರೂ ಏನೆಂದು ಪ್ರಶ್ನಿಸಿದ್ದಾರೆ.

ದೆಹಲಿ ಮಟ್ಟದಲ್ಲಿ ಪ್ರಭಾವಿಯಾಗಿರುವ ರಾಜ್ಯವನ್ನು ಪ್ರತಿನಿಧಿಸುವ ಪ್ರಮುಖರೊಬ್ಬರು ಕೆಲ ಹಿರಿಯರ ಜೊತೆ ದೂರವಾಣಿ ಮುಖೇನ ಚರ್ಚಿಸಿ ಹೈಕಮಾಂಡ್ ತೀರ್ಮಾನಕ್ಕೆ ವಿರೋಧ ಬೇಡ ಎಲ್ಲರೂ ಸಹಕಾರ ಕೊಡಬೇಕೆಂದು ಸೂಚಿಸಿದ್ದಾರೆ.

ತಮಿಳುನಾಡಿನ 7 ಹಳ್ಳಿಗಳಲ್ಲಿ ಶಬ್ದರಹಿತ ದೀಪಾವಳಿ ಆಚರಣೆ

ಈ ಹಿಂದೆ ಯಡಿಯೂರಪ್ಪ ಮತ್ತು ಅವರ ಕುಟುಂಬದವರಿಂದ ಬಹಿರಂಗವಾಗಿ ಮಾತನಾಡಿದ್ದರಿಂದ ಒಂದು ಸಮುದಾಯ ಮುನಿಸಿಕೊಂಡು ಫಲಿತಾಂಶದಲ್ಲಿ ಏನಾಯಿತು ಎಂಬುದು ಎಲ್ಲರಿಗೂ ಗೊತ್ತಿದೆ.
ಲೋಕಸಭೆ ಚುನಾವಣೆ ನಮ್ಮೆಲ್ಲರಿಗೂ ಬಹುದೊಡ್ಡ ಸವಾಲಾಗಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ ಕನಿಷ್ಟ ಪಕ್ಷ 20 ಸ್ಥಾನಗಳನ್ನಾದರೂ ಗೆಲ್ಲಬೇಕು. ಇದು ಸಾಕಾರವಾಗಬೇಕಾದರೆ ಹಿರಿಯರು, ಕಿರಿಯರು ಸಹಕಾರ ಕೊಡಬೇಕು. ಪಕ್ಷದ ವಿರುದ್ಧ ಒಂದೇ ಒಂದು ಅಪಸ್ವರ ಬೇಡವೆಂದು ಮನವಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೇವಲ ಯಡಿಯೂರಪ್ಪ ಪುತ್ರ ಎಂಬ ಕಾರಣಕ್ಕಾಗಿ ಅಧ್ಯಕ್ಷರನ್ನಾಗಿ ನೇಮಿಸಿಲ್ಲ. ಇಂತಹ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಮುನ್ನ ರಾಷ್ಟ್ರೀಯ ನಾಯಕರು ಎಲ್ಲ ಆಯಾಮಗಳಲ್ಲೂ ಚರ್ಚೆ ಮಾಡಿರುತ್ತಾರೆ. ಅವರ ನಿರ್ಧಾರವು ನಮಗೆ ಒಪ್ಪಿಗೆ ಇದೆಯೋ ಇಲ್ಲವೋ ಎಂಬುದು ಮುಖ್ಯವಲ್ಲ. ಅಂತಿಮವಾಗಿ ರಾಷ್ಟ್ರೀಯ ನಾಯಕರ ನಿರ್ಧಾರವನ್ನು ಗೌರವಿಸುವುದು ಮುಖ್ಯ ಎಂದು ರಾಜ್ಯ ನಾಯಕರಿಗೆ ಹೇಳಿದ್ದಾರೆ.

ಒಂದಿಬ್ಬರು ಬಹಿರಂಗವಾಗಿ ವಿಜಯೇಂದ್ರ ವಿರುದ್ಧ ಹೇಳಿಕೆ ಕೊಟ್ಟರೆ ವಿರೋಧ ಪಕ್ಷಗಳು ಅದನ್ನೇ ಅಸ್ತ್ರ ಮಾಡಿಕೊಳ್ಳಲಿವೆ. ಇದಕ್ಕೆ ಅವಕಾಶ ಕಲ್ಪಿಸಬಾರದೆಂದರೆ ಪಕ್ಷದ ನಿರ್ಧಾರವನ್ನು ಪ್ರಶ್ನಿಸಬಾರದು. ಎಲ್ಲರೂ ಸಹಕಾರ ಕೊಡುವಂತೆ ಸೂಚನೆ ಕೊಟ್ಟಿದ್ದಾರೆ.

ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಮೇಲೆ ಮಾಜಿ ಸಚಿವರಾದ ವಿ.ಸೋಮಣ್ಣ, ಸಿ.ಟಿ.ರವಿ, ಬಸನಗೌಡ ಪಾಟೀಲ್ ಯತ್ನಾಳ್, ಕೆ.ಎಸ್.ಈಶ್ವರಪ್ಪ, ಶಾಸಕ ಅರವಿಂದ್ ಬೆಲ್ಲದ್ ಸೇರಿದಂತೆ ಮತ್ತಿತರರು ಅಪಸ್ವರ ತೆಗೆದಿದ್ದರು.
ಇದೀಗ ವರಿಷ್ಠರೇ ಮಧ್ಯಪ್ರವೇಶಿಸಿ ಭಿನ್ನಮತಕ್ಕೆ ಪೂರ್ಣ ವಿರಾಮ ಹಾಕುವ ಪ್ರಯತ್ನ ಮಾಡಿದ್ದಾರೆ.

RELATED ARTICLES

Latest News