Saturday, April 27, 2024
Homeರಾಜಕೀಯಬಿಜೆಪಿ ಭಿನ್ನಮತ ಬೂದಿ ಮುಚ್ಚಿದ ಕೆಂಡ..!

ಬಿಜೆಪಿ ಭಿನ್ನಮತ ಬೂದಿ ಮುಚ್ಚಿದ ಕೆಂಡ..!

ಬೆಂಗಳೂರು,ಮಾ.29- ಮೊದಲ ಹಂತದ ಮತದ ಚುನಾವಣೆಗೆ ನಾಮಪತ್ರ ಸಲ್ಲಿಕೆ ಭರಾಟೆಯಿಂದ ಸಾಗುತ್ತಿರುವ ಬೆನ್ನಲ್ಲೇ 28 ಲೋಕಸಭಾ ಕ್ಷೇತ್ರಗಳಲ್ಲೂ ಗೆದ್ದು ದಾಖಲೆ ಬರೆಯಲು ಮುಂದಾಗಿರುವ ಬಿಜೆಪಿಗೆ ಭಿನ್ನಮತವೇ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಮೇಲ್ನೋಟಕ್ಕೆ ಎಲ್ಲವ ಸರಿ ಹೋಗಿದೆ ಎಂದು ನಾಯಕರು ಮಾಧ್ಯಮಗಳ ಮುಂದೆ ಬಿಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದರಾದರೂ ಆಂತರಿಕವಾಗಿ 8ರಿಂದ 10 ಜಿಲ್ಲೆಗಳಲ್ಲಿ ಈಗಲೂ ಭಿನ್ನಮತ ಬೂದಿಮುಚ್ಚಿದ ಕೆಂಡದಂತಿದೆ.ಯಾವುದೇ ಕ್ಷಣದಲ್ಲಿ ಈ ಭಿನ್ನಮತ ಸ್ಪೋಟಗೊಳ್ಳುವ ಸಾಧ್ಯತೆ ಇದ್ದು, ಅಧಿಕೃತ ಅಭ್ಯರ್ಥಿಗಳಿಗೆ ಒಳಹೊಡೆತದ ಗುಮ್ಮ ಬಿಟ್ಟೂಬಿಡದಂತೆ ಕಾಡುತ್ತಿದೆ.

ಚಿತ್ರದುರ್ಗ, ದಾವಣಗೆರೆ, ಕೊಪ್ಪಳ, ರಾಯಚೂರು, ಬೆಳಗಾವಿ, ಶಿವಮೊಗ್ಗ, ತುಮಕೂರು ಮತ್ತಿತರ ಕಡೆ ಟಿಕೆಟ್ ವಂಚಿತರ ಮುನಿಸು ತಣ್ಣಗಾಗುತ್ತಿಲ್ಲ. ತಮ್ಮ ಆಪ್ತರು ಹಾಗೂ ಕಾರ್ಯಕರ್ತರ ಜೊತೆ ಸಭೆ ನಡೆಸುವ ಮೂಲಕ ಪಕ್ಷದ ಆದೇಶವನ್ನು ಕ್ಕರಿಸುತ್ತಿರುವುದು ವರಿಷ್ಠರ ತಲೆಬಿಸಿ ಮಾಡಿದೆ. ಚಿತ್ರದುರ್ಗದಲ್ಲಿ ತಮ್ಮ ಪುತ್ರನಿಗೆ ಟಿಕೆಟ್ ಸಿಗದಿರುವುದಕ್ಕೆ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಬಹಿರಂಗವಾಗಿಯೇ ಸಮರ ಸಾರಿದ್ದಾರೆ.

ನನಗೆ ಟಿಕೆಟ್ ತಪ್ಪಲು ಯಡಿಯೂರಪ್ಪನವರೇ ಕಾರಣ. ಯಾವುದೇ ಕಾರಣಕ್ಕೂ ನಾನು ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳಗೆ ಬೆಂಬಲ ನೀಡುವುದಿಲ್ಲ ಎಂದು ಘೋಷಣೆ ಮಾಡಿರುವುದು ಬಿಜೆಪಿ ನಾಯಕರ ನಿದ್ದೆಗೆಡುವಂತೆ ಮಾಡಿದೆ.

ಇದೀಗ ಚಂದ್ರಪ್ಪ ಅವರ ಮನವೊಲಿಸಲು ಖುದ್ದು ಮಾಜಿ ಮುಖ್ಯಮಂತ್ರಿ ಅಖಾಡಕ್ಕಿಳಿದಿದ್ದಾರೆ. ದಾವಣಗೆರೆಯಲ್ಲಿ ಟಿಕೆಟ್ ಸಿಗದೆ ಮುನಿಸಿಕೊಂಡಿದ್ದ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಸಮಾಧಾನಪಡಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ದಾವಣಗೆರೆ ಲೋಕಸಭಾ ಚುನಾವಣೆಯ ಸಂಚಾಲಕರನ್ನಾಗಿ ರೇಣುಕಾಚಾರ್ಯ ಅವರನ್ನು ನೇಮಿಸಿ ಭಿನ್ನಮತವನ್ನು ಶಮನಗೊಳಿಸುವ ಪ್ರಯತ್ನ ಮಾಡಲಾಗಿದೆ. ರಾಯಚೂರಿನಲ್ಲಿ ಮಾತ್ರ ಪರಿಸ್ಥಿತಿ ಬೂದಿಮುಚ್ಚಿದ ಕೆಂಡದಂತಿದೆ. ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಮಾಜಿ ಸಂಸದ ಬಿ.ವಿ.ನಾಯಕ್ ಹಾಗೂ ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ತಿಪ್ಪರಾಜ್ ಹವಾಲ್ದಾರ್ ಮುನಿಸಿಕೊಂಡಿದ್ದಾರೆ.

ಉಭಯ ನಾಯಕರನ್ನು ಸಮಾಧಾನಪಡಿಸುವ ಪ್ರಯತ್ನ ವಿಫಲವಾಗಿದೆ. ಹಾಲಿ ಸಂಸದ ಅಮರೇಶ್ ನಾಯಕ್ಗೆ ಟಿಕೆಟ್ ನೀಡಿರುವುದನ್ನು ವಿರೋಧಿಸಿ ಎರಡೂ ಕಡೆಯ ಬೆಂಬಲಿಗರು ಅಧಿಕೃತ ಅಭ್ಯರ್ಥಿಗೆ ಗೋ ಬ್ಯಾಕ್ ಅಭಿಯಾನವನ್ನು ಆರಂಭಿಸಿದ್ದಾರೆ.

ರಾಯಚೂರಿನಲ್ಲೂ ರಾಷ್ಟ್ರೀಯ ನಾಯಕರೇ ಮಧ್ಯಪ್ರವೇಶ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬೆಳಗಾವಿಯಲ್ಲಿ ಮೊದಲ ದಿನ ಯಡಿಯೂರಪ್ಪ ವಿರುದ್ಧ ಒಗ್ಗಟ್ಟು ಪ್ರದರ್ಶಿಸಿದ್ದ ಜಿಲ್ಲಾ ನಾಯಕರು ಇದೀಗ ತಮ್ಮ ವರಸೆ ಬದಲಾಯಿಸಿದ್ದಾರೆ.

RELATED ARTICLES

Latest News