Thursday, May 2, 2024
Homeರಾಜ್ಯಸಾರಾಯಿ ನಿಷೇಧದಿಂದ ಸಂಕಷ್ಟಪೀಡಿತ ಕುಟುಂಬಗಳಿಗೆ ನೆರವಿಗೆ ಒತ್ತಾಯ

ಸಾರಾಯಿ ನಿಷೇಧದಿಂದ ಸಂಕಷ್ಟಪೀಡಿತ ಕುಟುಂಬಗಳಿಗೆ ನೆರವಿಗೆ ಒತ್ತಾಯ

ಬೆಂಗಳೂರು ಫೆ.23- ಸಾರಾಯಿ ನಿಷೇಧದಿಂದ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಮಾನವೀಯತೆಯಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಪಕ್ಷಬೇಧ ಮರೆತು ವಿಧಾನಪರಿಷತ್‍ನಲ್ಲಿ ಒತ್ತಾಯಿಸಲಾಯಿತು. ಬಿ.ಕೆ.ಹರಿಪ್ರಸಾದ್ ಅವರು ಪ್ರಶ್ನೋತ್ತರ ಅವಧಿಯಲ್ಲಿ ವಿಷಯ ಪ್ರಸ್ತಾಪಿಸಿ 2006ರಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪನವರು ಏಕಾಏಕಿ ಸಾರಾಯಿ ಮಾರಾಟ ನಿಷೇಧ ಮಾಡಿದ ಪರಿಣಾಮ ಅನೇಕ ಕುಟುಂಬಗಳು ಬೀದಿಗೆ ಬಿದ್ದಿವೆ. ಕೆಲವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ದೂರದೃಷ್ಟ ಇಲ್ಲದೆ ಅವರಿಗೆ ಯಾವುದೇ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ ಉಪಕಸುಬನ್ನು ಏಕಾಏಕಿ ನಿಲ್ಲಿಸಿದ ಪರಿಣಾಮ ಇಂದು ಬೀದಿಗೆ ಬಂದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಅತಿಹೆಚ್ಚು ತೆರಿಗೆ ಕಟ್ಟುವವರು ಮದ್ಯ ಮಾರಾಟ ಮಾಡುವವರು. ಕುಡಿಯುವವರಿಗೆ ಸರ್ಕಾರ ಸವಲತ್ತುಕೊಡುತ್ತದೆ. ಮಾರಾಟ ಮಾಡುವವರಿಗೆ ಕಡೇಪಕ್ಷ ಯಾವ ಸೌಲಭ್ಯಗಳಿಲ್ಲ. ಸಾರಾಯಿ ಮಾರುವವರ ಕುಟುಂಬಗಳ ಪರಿಸ್ಥಿತಿ ಹೇಳತೀರದು. ನಾವು ಎಲ್ಲವನ್ನೂ ಮೌನದಿಂದಲೇ ನೋಡಿಕೊಂಡು ಹೋಗುತ್ತೇವೆ. ಬೇರೆಯವರಾಗಿದ್ದರೆ ರಕ್ತಪಾತವಾಗುತ್ತಿತ್ತು ಎಂದು ಆತಂಕ ವ್ಯಕ್ತಪಡಿಸಿದರು.

ತಮಿಳುನಾಡಿನಲ್ಲೂ ಸಾರಾಯಿ ನಿಷೇಧ ಮಾಡಲಾಯಿತು. ಆದರೆ ಅವರು ಒಂದು ವರ್ಷ ಅವಕಾಶ ಕಲ್ಪಿಸಿ ಈ ಉಪಕಸುಬು ಮಾಡುತ್ತಿದ್ದ ಕುಟುಂಬಗಳಿಗೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಿದ್ದರು. ನಮ್ಮಲ್ಲಿ ಇದೇ ವ್ಯವಸ್ಥೆ ಏಕಿಲ್ಲ ಎಂದು ಪ್ರಶ್ನಿಸಿದರು. ಪ್ರಸಕ್ತ ವರ್ಷ 36 ಸಾವಿರ ಕೋಟಿ ಆದಾಯವನ್ನು ರಾಜ್ಯ ಬೊಕ್ಕಸಕ್ಕೆ ನೀಡಿದ್ದಾರೆ. ಎಂದೂ ಕೂಡ ಇವರು ಬೀದಿಗೆ ಬಂದವರಲ್ಲ. ಪ್ರತಿಭಟನೆಯನ್ನೂ ಕೂಡ ನಡೆಸುವವರಲ್ಲ. ಕುಡಿಯುವವರಿಗೆ ಸವಲತ್ತು ಕೊಡುವ ಸರ್ಕಾರ ಕಡೇಪಕ್ಷ ಮಾರಾಟ ಮಾಡುವವರಿಗೂ ಪುನರ್ವಸತಿ ರೂಪಿಸಬೇಕು ಎಂದರು.

ಎಂಎಸ್‍ಐಎಲ್ ಮಳಿಗೆಗಳಲ್ಲಿ ಸಾರಾಯಿ ಮಾರಾಟ ನಿಷೇಧದಿಂದ ಸಂಕಷ್ಟಕ್ಕೊಳಗಾಗಿರುವ ಕುಟುಂಬದವರಿಗೆ ಸರ್ಕಾರ ಉದ್ಯೋಗವನ್ನಾದರೂ ನೀಡಲಿ ಎಂದು ಮನವಿ ಮಾಡಿದರು. 1946ರಿಂದ ಈವರೆಗೂ ತೆರಿಗೆ ಕಟ್ಟದವರಿಂದ ವಸೂಲಿ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಯಾರು ಬದುಕಿದ್ದಾರೋ, ಸತ್ತಿದ್ದಾರೋ ಎಂಬುದು ಗೊತ್ತಿಲ್ಲ. ಕನಿಷ್ಠಪಕ್ಷ ಅಸಲು ಮತ್ತು ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಲಿ ಎಂದು ಒತ್ತಾಯಿಸಿದರು.

ರೌಡಿಗಳ ಅಟ್ಟಹಾಸ ಅಡಗಿಸಲು ಇಲಾಖೆ ಸಮರ್ಥವಾಗಿದೆ: ಗೃಹ ಸಚಿವ ಪರಮೇಶ್ವರ್

ಇದಕ್ಕೆ ಉತ್ತರಿಸಿದ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ, ಸಾರಾಯಿ ಮಾರಾಟ ನಿಷೇಧದಿಂದ ಸಂಕಷ್ಟಕ್ಕೊಳಗಾದವರಿಗೆ ಸುವರ್ಣ ಕಾಯಕ ಯೋಜನೆಯನ್ನು ಜಾರಿ ಮಾಡಲಾಯಿತು. ಇದರಡಿ ಉದ್ಯೋಗ ತರಬೇತಿ ಸೇರಿದಂತೆ ವಿವಿಧ ರೀತಿಯ ತರಬೇತಿಗಳನ್ನು ನೀಡುತ್ತಿದ್ದರೂ ಅನೇಕರು ಇದರ ಲಾಭ ಪಡೆಯಲು ಮುಂದೆ ಬರಲಿಲ್ಲ. ಬಂದವರಲ್ಲಿ ಕೆಲವರಿಗೆ ವಯಸ್ಸೇ ಮುಗಿದು ಹೋಯಿತು ಎಂದರು.

ನಾವು ಇಲಾಖೆ ವತಿಯಿಂದ 4 ಮತ್ತು 5ನೇ ಕರ ಯೋಜನೆಯಡಿ ತೆರಿಗೆ ಕಟ್ಟಲು ನಾವು ವಿನಾಯ್ತಿ ಕೊಟ್ಟಿದ್ದೇವು. ಆದರಲ್ಲಿ ಕೆಲವರು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದರೆ ಉಳಿದಕಡೆ ಕೆಲವು ಆಸ್ತಿಯನ್ನು ಹರಾಜು ಹಾಕಲಾಗಿದೆ. ಅಸಲು ಮತ್ತು ಬಡ್ಡಿ ಮನ್ನಾ ಮಾಡಬೇಕೆಂದರೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಬೇಕು ಎಂದರು.

ಆಗ ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಈ ಹಿಂದೆ ಮಾಜಿ ಮುಖ್ಯಮಂತ್ರಿ ವಿರೇಂದ್ರ ಪಾಟೀಲ್ ಅವರು ಕಳ್ಳಭಟ್ಟಿ ಪ್ರಕರಣ ತಡೆಯುವುದಕ್ಕಾಗಿ ಶೇಂದಿ ನಿಷೇಧ ಮಾಡಿದರು. ಯಡಿಯೂರಪ್ಪನವರು ಉಪಮುಖ್ಯಮಂತ್ರಿಯಾಗಿದ್ದಾಗ ಕೆಲವು ಸ್ತ್ರೀ ಸಂಘಟನೆಗಳು ಸಾರಾಯಿಯನ್ನು ಎಲ್ಲೆಂದರಲ್ಲಿ ಗಲ್ಲಿಗಲ್ಲಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಮಕ್ಕಳು ಸಹ ಕುಡಿಯುವ ದುಶ್ಚಟಕ್ಕೆ ಬಿದ್ದಿದ್ದಾರೆ. ಇದನ್ನು ನಿಷೇಧ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದರು. ಈ ಹಿನ್ನಲೆಯಲ್ಲಿ ಸಾರಾಯಿ ನಿಷೇಧ ಮಾಡಲಾಗಿತ್ತು. ಸಾರಾಯಿ ಮಾರಾಟ ಕುಟುಂಬಗಳಿಗೆ ಈಗಿನ ಸರ್ಕಾರ ಎಂಎಸ್‍ಐಎಲ್‍ನಲ್ಲಿ ಉದ್ಯೋಗ ನೀಡಬೇಕೆಂದು ಮನವಿ ಮಾಡಿದರು.

ಅಯೋಧ್ಯೆ ರೈಲಿಗೆ ಬೆಂಕಿ ಬೆದರಿಕೆ: ಪರಿಷತ್‍ನಲ್ಲಿ ಪ್ರತಿಧ್ವನಿ

ಕೆಲವು ಕಡೆ ನೀರಾ ಬಳಕೆ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಯಾಕೆ ಕಲ್ಪಿಸಬಾರದು ಎಂದು ಪ್ರಶ್ನೆ ಮಾಡಿದರು. ನಿಮಗೆ ನೀರಾ ಕುಡಿದು ಅಭ್ಯಾಸವಿದೆಯೇ ಎಂದು ಪ್ರಶ್ನಿಸಿದರು. ನಾನು ನೀರಾ ಕುಡಿಯಬೇಕೆಂದು ಕೆಲವು ಸಂದರ್ಭದಲ್ಲಿ ಪ್ರಯತ್ನಪಟ್ಟೆ ಆದರೆ ಅದು ಕುಡಿದ ನಂತರ ಎಲ್ಲಿ ಕಿಕ್ ಹೊಡೆದು ಅಮಲು ತಂದುಬಿಡುತ್ತದೆಯೋ ಎಂದು ಕುಡಿಯಲಿಲ್ಲ. ನಿಮ್ಮಷ್ಟು ದಷ್ಟಪುಷ್ಟನಾಗಿದ್ದರೆ ಕುಡಿಯುತ್ತಿದ್ದೆ ಎಂದು ಹಾಸ್ಯ ಚಟಾಕಿ ಹಾರಿಸಿದರು.

RELATED ARTICLES

Latest News