Saturday, July 27, 2024
Homeರಾಜ್ಯಉತ್ತರಕಾಂಡ್‌ನ ಚಾರಣ ದುರಂತ : 13 ಕನ್ನಡಿಗರ ರಕ್ಷಣೆ, ವಿಶೇಷ ವಿಮಾನದಲ್ಲಿ 9 ಜನರ ಶವ...

ಉತ್ತರಕಾಂಡ್‌ನ ಚಾರಣ ದುರಂತ : 13 ಕನ್ನಡಿಗರ ರಕ್ಷಣೆ, ವಿಶೇಷ ವಿಮಾನದಲ್ಲಿ 9 ಜನರ ಶವ ಬೆಂಗಳೂರಿಗೆ

ಬೆಂಗಳೂರು, ಜೂ.6– ಉತ್ತರಕಾಂಡ್‌ನ ಚಾರಣಕ್ಕೆ ತೆರಳಿದ್ದ 22 ಕನ್ನಡಿಗರ ಪೈಕಿ 13 ಜನರನ್ನು ರಕ್ಷಿಸಲಾಗಿದ್ದು, ಮೃತಪಟ್ಟ 9 ಜನರ ಶವಗಳನ್ನು ವಿಶೇಷ ವಿಮಾನದಲ್ಲಿ ಬೆಂಗಳೂರಿಗೆ ತರಲಾಗಿದೆ.

ಸಂತ್ರಸ್ತರ ರಕ್ಷಣೆಗಾಗಿ ಉತ್ತರಾಕಾಂಡ್‌ಗೆ ತೆರಳಿರುವ ಕಂದಾಯ ಸಚಿವ ಕೃಷ್ಣಾಭೈರೇಗೌಡ ಅವರ ಮಾಹಿತಿ ಪ್ರಕಾರ, ನಿನ್ನೆ ನಡೆದ ಕಾರ್ಯಾಚರಣೆಯಲ್ಲಿ ಸೌಮ್ಯಾ ಕೆನಾಲೆ , ಸತಿ ಡೋಲಾಸ್‌‍, ಶೀನಾ ಲಕ್ಷಿ, ಎಸ್‌‍. ಶಿವ ಜ್ಯೋತಿ, ಅನಿಲ್‌ ಜಮತಿಗೆ ಅರುಣಾಚಲ ಭಟ್‌, ಭರತ್‌ ಬೊಮನ ಗೌಡರ್‌, ಮಧು ಕಿರಣ್‌ ರೆಡ್ಡಿ, ಜೈಪ್ರಕಾಶ್‌ ಬಿ.ಎಸ್‌‍. ಅವರನ್ನು ರಕ್ಷಿಸಲಾಗಿತ್ತು.

ಇಂದು ಬೆಳಿಗ್ಗೆ ಎಸ್‌‍ ಸುಧಾಕರ್‌,ವಿನಯ್‌ ಎಂ.ಕೆ, ವಿವೇಕ್‌ ಶ್ರೀಧರ್‌, ನವೀನ್‌.ಎ, ರಿತಿಕಾ ಜಿಂದಾಲ್‌ ಸೇರಿ 5 ಮಂದಿಯನ್ನು ರಕ್ಷಿಸಿ ಉತ್ತರಕಾಶಿಯಿಂದ ಡೆಹ್ರಾಡೂನ್‌ಗೆ ವಿಮಾನದ ಮೂಲಕ ಕಳುಹಿಸಲಾಗಿದೆ. ವಿಪತ್ತಿನಿಂದ ಪಾರಾದವರಿಗೆ ಡೆಹ್ರಾಡೂನ್‌ನಲ್ಲಿ ಅಗತ್ಯ ಊಟೋಪಚಾರ ಹಾಗೂ ವಸತಿ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಕರ್ನಾಟಕ ಹಾಗೂ ಉತ್ತರಕಾಂಡ್‌ನ ಸರ್ಕಾರಗಳ ತ್ವರಿತ ಪ್ರತಿಕ್ರಿಯೆಗೆ ಪ್ರಾಣಾಪಾಯದಿಂದ ಪಾರಾಗಿ ಬಂದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಚಾರಣದ ನಡುವೆ ಹವಾಮಾನ ವೈಪರೀತ್ಯ, ವಿಪರೀತ ಮಳೆ, ಹಿಮಪಾತದಿಂದಾಗಿ ದಿಕ್ಕುತಪ್ಪಿ ಮೃತಪಟ್ಟಿರುವ 9 ಜನರ ಪೈಕಿ ಸಿಂಧು ವಕೆಲಂ,ಆಶಾ ಸುಧಾಕರ್‌, ಸುಜಾತಾ ಮುಂಗುರವಾಡಿ, ವಿನಾಯಕ್‌ ಮುಂಗುರವಾಡಿ, ಚಿತ್ರಾ ಪ್ರಣೀತ್‌ ಅವರ ಶವಗಳನ್ನು ನಿನ್ನೆ ಪತ್ತೆ ಹಚ್ಚಿ ಕಣಿವೆಯಿಂದ ಮೇಲಕ್ಕೆ ತಂದು ಉತ್ತರಕಾಶಿಗೆ ರವಾನಿಸಲಾಗಿತ್ತು.

ಮುಂದುವರೆದ ಕಾರ್ಯಾಚರಣೆಯಲ್ಲಿ ಇಂದು ಬೆಳಿಗ್ಗೆ ಪದನಾಭ ಕೆ.ಪಿ., ವೆಂಕಟೇಶ್‌ ಪ್ರಸಾದ್‌.ಕೆ, ಅನಿತಾ ರಂಗಪ್ಪ, ಪದಿನಿ ಹೆಗ್ಡೆ ಅವರ ಶವಗಳನ್ನು ಬೇಸ್‌‍ಕ್ಯಾಂಪ್‌ಗೆ ತಂದು ಅಲ್ಲಿಂದ ವಿಮಾನದ ಮೂಲಕ ಉತ್ತರಕಾಶಿಗೆ ತರಲಾಗುತ್ತಿದೆ.ಅಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಡೆಹ್ರಾಡೂನ್‌ನಲ್ಲಿ ಎಂಬಾಮಿಂಗ್‌ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ ರವಾನಿಸಲಾಗಿದೆ.

ಸಚಿವರ ಚುರುಕು ಕಾರ್ಯಾಚರಣೆ:
ಇಂದು ಬೆಳಿಗ್ಗೆ ಸಚಿವ ಕೃಷ್ಣಭೈರೇಗೌಡ ಅವರು ಉತ್ತರಕಾಂಡ್‌ನ ಮುಖ್ಯ ಕಾರ್ಯದರ್ಶಿ ರಾಧಾರತೌರಿ ಹಾಗೂ ವಿಪತ್ತು ನಿರ್ವಹಣಾ ಪ್ರಾಧಿಕಾರದ ಕಾರ್ಯದರ್ಶಿ ಡಾ.ರಂಜಿತ್‌ ಸಿನ್ಹಾ, ಬಿಎಸ್‌‍ಎಫ್‌ನ ಡಿಐಜಿ ರಾಜಕುಮಾರ್‌ ನೇಗಿ ಅವರೊಂದಿಗೆ ಸಮಾಲೋಚನೆ ನಡೆಸಿದ್ದು, ಪಾರ್ಥೀವ ಶರೀರಗಳನ್ನು ಸ್ಥಳಾಂತರಿಸಲು ಸಹಕರಿಸುವಂತೆ ಮನವಿ ಮಾಡಿದರು. ಅದಕ್ಕೆ ಸ್ಥಳೀಯಾಧಿಕಾರಿಗಳು ಸಹಮತಿ ಸೂಚಿಸಿದ್ದು, ವಿಶೇಷ ವಿಮಾನದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.ಡೆಹ್ರಾಡೂನ್‌ನಿಂದ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಪಾರ್ಥೀವ ಶರೀರಗಳನ್ನು ಸಾಗಿಸಲಾಯಿತು.

ಮನಕಲಕಿದ ವೈರಲ್‌ ವಿಡಿಯೋ :
ಈ ನಡುವೆ ವಿಪತ್ತಿಗೆ ಸಿಲುಕುವ ಮುನ್ನ ಚಾರಣಿಗರು ತಮ ಕ್ಯಾಂಪ್‌ನಲ್ಲಿ ಸಂತಸದಿಂದಿರುವುದು, ಗ್ರೂಪ್‌ ಫೋಟೊಗೆ ಫೋಸ್‌‍ ಕೊಟ್ಟಿರುವುದು ಮತ್ತು ಸೇನೆಯ ಯೋಧರೊಂದಿಗೆ ಸಮಯ ಕಳೆದಿರುವುದು, ಯೋಧರು ಚಾರಣಿಗರಿಗೆ ಬಿಸ್ಕೆಟ್‌ ನೀಡಿ ಉಪಚರಿಸಿರುವುದೂ ಸೇರಿದಂತೆ ಹಲವು ದೃಶ್ಯಗಳ ವಿಡಿಯೋ ವೈರಲ್‌ ಆಗಿದ್ದು, ಕರಳು ಕಿವುಚುವಂತಿದೆ.ನಗರದ ಎಚ್‌ಎಸ್‌‍ಆರ್‌ ಲೇ ಔಟ್‌, ಗಿರಿನಗರ, ಪ್ರಿಸ್ಟೇಜ್‌ ಸಿಟಿ, ಎಸ್‌‍ಆರ್‌ಕೆ ನಗರ ಮುಂತಾದ ಪ್ರದೇಶಗಳಿಂದ 22 ಮಂದಿ ಉತ್ತರಕಾಂಡ್‌ನ ಚಾರಣಕ್ಕೆ ತೆರಳಿದ್ದರು.

RELATED ARTICLES

Latest News