Sunday, May 5, 2024
Homeರಾಜ್ಯಕಾಟನ್‍ಪೇಟೆ ಕಾರಿನಲ್ಲಿ ಸಿಕ್ಕ 2 ಕೋಟಿ ರೂ.ಹಣಕ್ಕೆ ಬಿಜೆಪಿ ಲಿಂಕ್

ಕಾಟನ್‍ಪೇಟೆ ಕಾರಿನಲ್ಲಿ ಸಿಕ್ಕ 2 ಕೋಟಿ ರೂ.ಹಣಕ್ಕೆ ಬಿಜೆಪಿ ಲಿಂಕ್

ಬೆಂಗಳೂರು,ಏ.22- ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ವೇಳೆ ಕಾರಿನಲ್ಲಿ 2 ಕೋಟಿ ರೂಪಾಯಿ ಹಣ ಪತ್ತೆ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣ ಆದಾಯ ತೆರಿಗೆ ಇಲಾಖೆಗೆ ವರ್ಗಾವಣೆಯಾಗಿದ್ದು, ಹಣ ಜಪ್ತಿ ಮಾಡಿಕೊಂಡ ಇಲಾಖೆ ತನಿಖೆ ಚುರುಕುಗೊಳಿಸಿದೆ.

ಕಳೆದ ಶನಿವಾರ ಮಧ್ಯಾಹ್ನ ಕಾಟನ್‍ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ತಪಾಸಣೆ ನಡೆಸುವಾಗ ಕಾರಿನಲ್ಲಿ 2 ಕೋಟಿ ಹಣ ಪತ್ತೆ ಹಿನ್ನೆಲೆ ಚುನಾವಣಾಧಿಕಾರಿ ರವಿ ಅಸೂತಿ ಎಂಬುವರು ನೀಡಿದ ದೂರಿನ ಮೇರೆಗೆ ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಲೊಕೇಶ್ ಅಂಬೆಕಲ್ , ಹಣ ಸಾಗಿಸುತ್ತಿದ್ದ ವೆಂಕಟೇಶ್ ಪ್ರಸಾದ್ ಹಾಗೂ ಗಂಗಾಧರ್ ಎಂಬುವರ ವಿರುದ್ಧ ಎಫ್‍ಐಆರ್ ದಾಖಲಾಗಿದೆ. ಐಟಿ ಅಧಿಕಾರಿಗಳು ಮಾಹಿತಿ ಮೇರೆಗೆ ಹಣ ಜಪ್ತಿ ಮಾಡಿಕೊಂಡಿದ್ದು, ಇಬ್ಬರು ಆರೋಪಿತರನ್ನು ಹೆಚ್ಚಿನ ವಿಚಾರಣೆ ನಡೆಸಲು ನೊಟೀಸ್ ಜಾರಿ ಮಾಡಿದ್ದಾರೆ.

ಕೋದಂಡರಾಮಪುರ ಕೆನೆರಾ ಬ್ಯಾಂಕಿನಲ್ಲಿ ಕಳೆದ ಮಾರ್ಚ್ 27ರಂದು 5 ಕೋಟಿ ರೂಪಾಯಿ ಹಣ ವಿತ್ ಡ್ರಾ ಮಾಡಲಾಗಿದ್ದು, ಈ ಪೈಕಿ 2 ಕೋಟಿ ಹಣವನ್ನು ಮೈಸೂರು – ಕೊಡಗು, ಚಾಮರಾಜನಗರ, ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಗಳ ಬೂತ್ ಕಾರ್ಯಕರ್ತರು ಹಾಗೂ ಬಿಜೆಪಿ ಕಾರ್ಯಕ್ರಮಗಳಿಗೆ ಹಣ ಹಂಚಲು ಹೋಗುತ್ತಿರುವುದಾಗಿ ಆರೋಪಿತರು ಪ್ರಾಥಮಿಕ ತನಿಖೆಯಲ್ಲಿ ಒಪ್ಪಿಕೊಂಡಿದ್ದರು.

ಈ ವೇಳೆ, ಪತ್ತೆಯಾದ ಪತ್ರದಲ್ಲಿ ಮೇಲಿನ ಲೋಕಸಭಾ ಕ್ಷೇತ್ರಗಳ ಬೂತ್ ಮಟ್ಟದ ಕಾರ್ಯಕರ್ತರಿಗೆ ಹಣ ಹಂಚಲು ವೆಂಕಟೇಶ್ ಮೂಲಕ ಹಣ ಸಾಗಿಸುತ್ತಿರುವ ಬಗ್ಗೆ ಉಲ್ಲೇಖವಾಗಿತ್ತು ಎಂದು ಚುನಾವಣಾಧಿಕಾರಿಗಳು ದೂರಿನಲ್ಲಿ ವಿವರಿಸಿದ್ದಾರೆ. ಈ ಸಂಬಂಧ ಪೊಲೀಸರ ಸಮಕ್ಷಮದಲ್ಲಿ ಹಣ ಎಣಿಕೆ ಮಾಡಿ ವಶಕ್ಕೆ ಪಡೆದುಕೊಂಡು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

RELATED ARTICLES

Latest News