ಚಿಕ್ಕಮಗಳೂರು, ಏ.23- ಮನೆಯ ಮುಂದೆ ದಾಸ್ತಾನು ಮಾಡಲಾಗಿದ್ದ ಕಾಳುಮೆಣಸನ್ನು ಕಳವು ಮಾಡಿದ್ದ ಐದು ಮಂದಿಯನ್ನು ಮೂಡಿಗೆರೆ ಠಾಣಾ ಪೊಲೀಸರು ಬಂಧಿಸಿ 1.03 ಲಕ್ಷ ಮೌಲ್ಯದ 145 ಕೆಜಿ ಕಾಳುಮೆಣಸು ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ.
ಹಾಸನ ಜಿಲ್ಲೆಯ ಬೈಲಹಳ್ಳಿ ಗ್ರಾಮದ ದರ್ಶನ್ (21), ಚಿಕ್ಕಮಗಳೂರು ಜಿಲ್ಲೆಯ ಕುಂದೂರಿನ ಗಿರೀಶ (27), ರಮೇಶ (20), ಅಕ್ಷಯ(27) ಹಾಗೂ ಪ್ರಶಾಂತ ಬಂಧಿತ ಆರೋಪಿಗಳು.
ಮೂಡಿಗೆರೆ ತಾಲ್ಲೂಕಿನ ಮಾಕೋನಹಳ್ಳಿ ಗ್ರಾಮದ ಕೃಷಿಕ ರಾಮಚಂದ್ರಪ್ಪ ಎಂಬುವವರು ಮನೆಯ ಮುಂದಿನ ಜಗಲಿಯ ಮೇಲೆ 145 ಕೆಜಿ ಕಾಳುಮೆಣಸನ್ನು ಒಣಗಿಸಿ ಮೂಟೆಯಲ್ಲಿ ಕಟ್ಟಿ ದಾಸ್ತಾನು ಮಾಡಿದ್ದರು. ಕೆಲಸದ ನಿಮಿತ್ತ ದಂಪತಿ ಮೂಡಿಗೆರೆ ಪಟ್ಟಣಕ್ಕೆ ತೆರಳಿ ವಾಪಸ್ ಮನೆಗೆ ಬಂದಾಗ ಕಾಳುಮೆಣಸು ಮೂಟೆಗಳು ಕಳುವಾಗಿರುವುದು ಬೆಳಕಿಗೆ ಬಂದಿದೆ. ಕೂಡಲೇ ಮೂಡಿಗೆರೆ ಠಾಣೆಗೆ ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿಕ್ರಂ ಆಮಟೆ, ಎಎಸ್ಪಿ ಜಯಕುಮಾರ್, ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ರಾಜಶೇಖರ್, ಶ್ರೀನಾಥರೆಡ್ಡಿ, ವೈಭವ್, ಸಜ್ಜನ್, ವಿನಯ್, ಮೆಹಬೂಬ್, ನಯಾಜ್ ಅವರುಗಳನ್ನೊಳಗೊಂಡ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ ಕದ್ದ ಮಾಲನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.