Saturday, May 4, 2024
Homeರಾಜ್ಯಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಏನನ್ನು ನಿರೀಕ್ಷಿಸಬಹುದು..?

ಸಿಎಂ ಸಿದ್ದರಾಮಯ್ಯ ಅವರ ಬಜೆಟ್‌ನಲ್ಲಿ ಏನನ್ನು ನಿರೀಕ್ಷಿಸಬಹುದು..?

ಬೆಂಗಳೂರು, ಫೆ.15- ಮುಖ್ಯ ಮಂತ್ರಿ ಸಿದ್ದರಾಮಯ್ಯ ನಾಳೆ ತಮ್ಮ 15ನೇ ಬಜೆಟ್ ಮಂಡಿಸುತ್ತಿದ್ದು, ಕೃಷಿ, ಕಂದಾಯ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಮತ್ತು ಮಹಿಳಾ- ಮಕ್ಕಳ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಈ ಹಿಂದಿನ ಬಜೆಟ್‍ಗಿಂತಲೂ ಶೇ. 15ಕ್ಕಿಂತಲೂ ಹೆಚ್ಚಿನದಾಗಿ ಆಯವ್ಯಯ ಗಾತ್ರ ಹಿಗ್ಗುವ ಸಾಧ್ಯತೆಯಿದ್ದು, ಕೃಷಿಕರ ಶ್ರೇಯೋಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಪಂಚಖಾತ್ರಿ ಯೋಜನೆಗಳಿಗೆ ವೆಚ್ಚವನ್ನು ಬಜೆಟ್‍ನಲ್ಲಿ ಕರಾರುವಕ್ಕಾಗಿ ಮೀಸಲಿರಿಸಲಾಗುತ್ತಿದೆ.

ಲೋಕ ಸಭಾ ಚುನಾವಣೆ ನಂತರ ಪಂಚಖಾತ್ರಿಗಳು ಸ್ಥಗಿತಗೊಳ್ಳಲಿವೆ ಎಂಬ ಬಿಜೆಪಿಯ ಅಪಪ್ರಚಾರಕ್ಕೆ ಬಜೆಟ್‍ನಲ್ಲಿ ಅನುದಾನ ಮೀಸಲಿಡುವ ಮೂಲಕ ಸಿಎಂ ಪ್ರತ್ಯುತ್ತರಿಸಲಿದ್ದಾರೆ. ಬರ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವುದು, ಸಂಪನ್ಮೂಲ ಕ್ರೂಢೀಕರಣಕ್ಕೆ ಒತ್ತು ನೀಡುವ ಸಾಧ್ಯತೆಯಿದೆ.

ಪ್ರಮುಖವಾಗಿ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಮಧ್ಯಂತರ ಶಿಫಾರಸ್ಸಿನ ಅನ್ವಯ ಶೇ. 7ರಿಂದ 8ರಷ್ಟು ವೇತನ ಪರಿಷ್ಕರಣೆ ಸಾಧ್ಯತೆಗಳಿವೆ. ಈ ಹಿಂದೆ ಮಧ್ಯಂತರ ವರದಿ ಆಧರಿಸಿ ಬಸವರಾಜ ಬೊಮ್ಮಾಯಿ ಸರ್ಕಾರಿ ಶೇ. 17ರಷ್ಟು ವೇತನ ಹೆಚ್ಚಳ ಮಾಡಿತ್ತು. ವೇತನ ಪರಿಷ್ಕರಣೆಗೆ ರಾಜ್ಯ ಸರ್ಕಾರಿ ನೌಕರರು ಬೇಡಿಕೆ ಮಂಡಿಸಿದ್ದರು. ಈಗ ಶೇ. 10ರಷ್ಟು ಮಧ್ಯಂತರ ಬೇಡಿಕೆ ಇಟ್ಟಿದ್ದಾರೆ. ಅದರಲ್ಲಿ ಶೇ. 7ರಿಂದ 8ರಷ್ಟು ಪರಿಗಣಿಸುವ ಸಾಧ್ಯತೆ ಇದೆ.

BIG NEWS : ಚುನಾವಣಾ ಬಾಂಡ್ ವಾಕ್ ಸ್ವಾತಂತ್ರ್ಯದ ಉಲ್ಲಂಘನೆ,. ಸುಪ್ರೀಂ ಮಹತ್ವದ ತೀರ್ಪು

ಒಟ್ಟು ಬೇಡಿಕೆಯನುಸಾರ ಶೇ. 37ರಷ್ಟು ವೇತನ ಹೆಚ್ಚಳ ಮಾಡುವುದು ಕಷ್ಟ ಸಾಧ್ಯವಾಗಿದ್ದು, ಹಂತ- ಹಂತವಾಗಿ ಪರಿಷ್ಕರಣೆ ಮಾಡುವ ಪ್ರಯತ್ನವನ್ನು ಮುಖ್ಯಮಂತ್ರಿ ನಡೆಸುತ್ತಿದ್ದಾರೆಂದು ಹೇಳಲಾಗಿದೆ. ಈ ನಡುವೆ ಜಲಸಂಪನ್ಮೂಲ ಇಲಾಖೆಗೂ ಆದ್ಯತೆ ನೀಡಬೇಕಿದ್ದು, ಕೆರೆಗಳನ್ನು ತುಂಬಿಸಲು 900 ಕೋಟಿ ರೂ.ಗಳ ಯೋಜನೆ ಸಿದ್ದಗೊಂಡಿದೆ.

ಮೇಕೆದಾಟು, ಭದ್ರಾಮೇಲ್ದಂಡೆ, ಕಳಸಬಂಡೂರಿ ಯೋಜನೆಗಳಿಗೆ ಕೇಂದ್ರದ ಪೂರ್ವಾನುಮತಿ ಪಡೆದುಕೊಳ್ಳುವ ಷರತ್ತಿನೊಂದಿಗೆ ಅನುದಾನ ಮೀಸಲಿಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಜೊತೆಯಲ್ಲಿ ಕೆಲವೊಂದು ಏತ ನೀರಾವರಿ ಯೋಜನೆಗಳಿಗೂ ಸಿಎಂ ಆದ್ಯತೆ ನೀಡುತ್ತಿದ್ದಾರೆ.

ಹಿಂದಿನ ಬಜೆಟ್‍ನಲ್ಲಿ ಬಂಡವಾಳ ವೆಚ್ಚವನ್ನು ಮೀಸಲಿಡಲಾಗಿತ್ತು. ಪ್ರಸ್ತುತ ಪಂಚಖಾತ್ರಿಗಳ ಸವಾಲಿನ ನಡುವೆಯೂ ಬಂಡವಾಳವನ್ನು ಶೇ. 10ರಿಂದ 12ರಷ್ಟು ಕ್ರೂಢೀಕರಿಸಲು ಮುಖ್ಯಮಂತ್ರಿ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೆಚ್ಚಿನ ತೆರಿಗೆ ಇಲ್ಲದೆ ಸರ್ವಜನರನ್ನು ಸ್ಪರ್ಶಿಸುವ ಮತ್ತು ಸಮಾಧಾನಗೊಳಿಸುವ ಪ್ರಯತ್ನ ಮಾಡಿದ್ದು, ಇದಕ್ಕಾಗಿ ರಾಜ್ಯದ ಸಂಪನ್ಮೂಲ ಕ್ರೂಢೀಕರಣ ಕೇಂದ್ರದ ಅನುದಾನದ ಜೊತೆಗೆ ಸಾಲದ ಮೊರೆ ಹೋಗುವುದು ಅನಿವಾರ್ಯ ಎಂದು ಮೂಲಗಳು ತಿಳಿಸಿವೆ.

RELATED ARTICLES

Latest News