Thursday, May 2, 2024
Homeರಾಜ್ಯರೈತರ ನೊಂದಣಿಯಲ್ಲಿ ಅವ್ಯವಹಾರ : ಒಂದು ವಾರ ಕೊಬ್ಬರಿ ಖರೀದಿ ಸ್ಥಗಿತ

ರೈತರ ನೊಂದಣಿಯಲ್ಲಿ ಅವ್ಯವಹಾರ : ಒಂದು ವಾರ ಕೊಬ್ಬರಿ ಖರೀದಿ ಸ್ಥಗಿತ

ಬೆಂಗಳೂರು,ಫೆ.14- ಕೊಬ್ಬರಿ ಖರೀದಿಗೆ ರೈತರ ನೊಂದಣಿಯಲ್ಲಿ ಅವ್ಯವಹಾರಗಳಾಗಿರುವುದರಿಂದ ತಾತ್ಕಾಲಿಕ ವಾಗಿ ಒಂದು ವಾರ ಕಾಲ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ಜೆಡಿಎಸ್‍ನ ಎಚ್.ಡಿ.ರೇವಣ್ಣ ಸೇರಿದಂತೆ ಪಕ್ಷಾತೀತ ವಾಗಿ ಬಹುತೇಕ ಶಾಸಕರು ಪ್ರಸ್ತಾಪಿಸಿದ ಸಾರ್ವಜನಿಕ ಮಹತ್ವದ ವಿಚಾರ ಕುರಿತು ಇಂದು ಉತ್ತರ ನೀಡಿದ ಸಚಿವರು, ರೈತರ ನೋಂದಣಿ ಪ್ರಕ್ರಿಯೆಯಲ್ಲಿ ಮೇಲ್ನೋಟಕ್ಕೆ ಲೋಪಗಳು ಕಂಡುಬರುತ್ತಿವೆ.

ಇಲಾಖೆಯಿಂದ ಖರೀದಿಸಲಾಗಿದ್ದ ಕಂಪ್ಯೂಟರ್ ಬದಲಿಗೆ ಅಧಿಕಾರಿಗಳು ಮತ್ತು ಹೊರ ಗುತ್ತಿಗೆ ಸಿಬ್ಬಂದಿಗಳು ತಾವೇ ಬೇರೆ ಕಂಪ್ಯೂಟರ್ ಖರೀದಿಸಿ ಅದನ್ನು ರೈತರ ಮನೆ ಬಾಗಿಲಿಗೆ ತೆಗೆದುಕೊಂಡು ಹೋಗಿ ನೋಂದಣಿ ಮಾಡಿಸಿದ್ದಾರೆ. ಹಾಸನ ಜಿಲ್ಲೆಯಲ್ಲಿ ಇದು ವ್ಯಾಪಕ ವಾಗಿ ಕಂಡುಬರುತ್ತಿದೆ. ಬೇರೆ ಜಿಲ್ಲೆಯಿಂದ 3500 ರೈತರನ್ನು ಹಾಸನದಲ್ಲಿ ನೋಂದಾವಣಿ ಮಾಡಲಾಗಿದೆ. ಹೀಗಾಗಿ ಖರೀದಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ 9 ಮಂದಿ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ. ಕ್ರಿಮಿನಲ್ ಮೊಕದ್ದಮೆ ಕೂಡ ದಾಖಲಿಸಲಾಗುತ್ತಿದೆ. ನೋಂದಣಿ ಪ್ರಕ್ರಿಯೆ ಪರಿಷ್ಕರಣೆಗೊಳ ಪಡಿಸ ಲಾಗುತ್ತಿದ್ದು, ಆವರೆಗೆ ತಾತ್ಕಾಲಿಕ ವಾಗಿ ಖರೀದಿ ಪ್ರಕ್ರಿಯೆಯನ್ನು ಸ್ಥಗಿತ ಗೊಳಿಸಲಾಗುತ್ತಿದೆ ಎಂದು ಹೇಳಿದರು.

ಈ ಮೊದಲು ಕೇಂದ್ರ ಸರ್ಕಾರ 7 ತಿಂಗಳ ಅವಧಿವರೆಗೂ ಕೊಬ್ಬರಿ ಖರೀದಿಗೆ ಅವಕಾಶ ನೀಡಿತ್ತು. ಪ್ರಸ್ತುತ 3 ತಿಂಗಳಿನಂತೆ ಎರಡು ಅವಧಿಗೆ ಖರೀದಿಗೆ ಅವಕಾಶ ನೀಡಲಾಗಿದೆ. ಕಳೆದ ಬಾರಿ ಖರೀದಿಯಲ್ಲಿ ನಫೆಡ್ 200 ಕೋಟಿ ರೂ. ನಷ್ಟ ಅನುಭವಿಸಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.

ಉಂಡೆ ಕೊಬ್ಬರಿಯನ್ನು ಶೇ.25ರಷ್ಟು ಖರೀದಿಸಲು ಅವಕಾಶವಿದೆ. ಆ ಪ್ರಮಾಣವನ್ನು ಶೇ.50ಕ್ಕೆ ಹೆಚ್ಚಿಸಬೇಕು ಎಂದು ಮನವಿ ಸಲ್ಲಿಸಲಾಗಿದೆ. ಹಾಗೆಯೇ ಹೋಳಾಗಿರುವ ವಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅನುಮತಿ ನೀಡುವಂತೆಯೂ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ರಾಜಸ್ಥಾನದಿಂದ ರಾಜ್ಯಸಭೆಗೆ ಸೋನಿಯಾ ಗಾಂಧಿ ಸ್ಪರ್ಧೆ, ನಾಮಪತ್ರ ಸಲ್ಲಿಕೆ

ನೋಂದಣಿ ಪ್ರಕ್ರಿಯೆಯಲ್ಲಿನ ಲೋಪವನ್ನು ಸರಿಪಡಿಸುವವರೆಗೂ ಸಹಕರಿಸುವಂತೆ ಸಚಿವರು ಮನವಿ ಮಾಡಿದರು. ಮುಂದುವರೆದ ಚರ್ಚೆಯಲ್ಲಿ ಶಾಸಕರಾದ ಸುರೇಶ್ ಗೌಡ, ಜನವರಿಯಿಂದಲೇ ಖರೀದಿ ಆರಂಭವಾಗಬೇಕಿತ್ತು. ಫೆ.1ರಿಂದ ಖರೀದಿಸುವುದಾಗಿ ನಫೇಡ್ ತಿಳಿಸಿತ್ತು. ಅದನ್ನು ನಂಬಿ ರೈತರು ಕೊಬ್ಬರಿಯನ್ನು ಸುಲಿದು ಸಜ್ಜುಗೊಂಡಿಸಿಟ್ಟುಕೊಂಡಿದ್ದಾರೆ. ಈಗ ಮತ್ತೆ ಒಂದು ವಾರ ಮುಂದೂಡಿದರೆ ರೈತರಿಗೆ ನಷ್ಟವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ರೈತರು ಬೆಳೆದ ಪೂರ್ತಿ ಕೊಬ್ಬರಿಯನ್ನು ಖರೀದಿಸುವುದಾಗಿ ಹೇಳಿದ್ದಾರೆ. ಅದರಂತೆ ಸರ್ಕಾರ ನಡೆದು ಕೊಳ್ಳಬೇಕೆಂದು ಒತ್ತಾಯಿಸಿದರು. ತಿಪಟೂರು ಕ್ಷೇತ್ರದ ಷಡಕ್ಷರಿ ಮಾತ ನಾಡಿ, 8 ದಿನದ ವಿಳಂಬದಿಂದ ಹೆಚ್ಚೇನು ಹಾನಿಯಾಗುವುದಿಲ್ಲ. ನೋಂದಣಿ ಪ್ರಕ್ರಿಯೆಯಲ್ಲಿ ವಿಳಬಂವಾಗಿದೆ. ಪರಿಷ್ಕರಣೆ ಬದಲಾಗಿ ರದ್ದು ಮಾಡಿ ಕೊಬ್ಬರಿ ಖರೀದಿ ಮತ್ತು ನೋಂದಣಿ ಯನ್ನು ಏಕಕಾಲಕ್ಕೆ ಆರಂಭಿಸಿ ಎಂದು ಒತ್ತಾಯಿಸಿದರು.

100 ಎಕರೆಯಲ್ಲಿ ಕ್ರೀಡಾ ವಿಶ್ವವಿದ್ಯಾಲಯ : ಕ್ರೀಡಾ ಸಚಿವ ಬಿ.ನಾಗೇಂದ್ರ

ಅರಸೀಕೆರೆ ಕ್ಷೇತ್ರದ ಶಿವಲಿಂಗೇಗೌಡ, ಎಂಟು ದಿನ ವಿಳಂಬ ಮಾಡುವುದು ಅನಗತ್ಯ. ತಡವಾದರೆ ಕೊಬ್ಬರಿ ಗುಣಮಟ್ಟ ಕುಂದುತ್ತದೆ. ಸಚಿವರು ಕೊಬ್ಬರಿ ಬೆಳೆಯುವ ಜಿಲ್ಲೆಗಳ ಶಾಸಕರ ಜೊತೆ ಪ್ರತ್ಯೇಕ ಸಭೆ ನಡೆಸಿದರೆ ಸಮಸ್ಯೆ ಬಗೆಹರಿಸಲು ವಿವರವಾದ ಚರ್ಚೆ ನಡೆಸಬಹುದು ಎಂದರು. ತುರುವೇಕೆರೆಯ ಎಂ.ಟಿ. ಕೃಷ್ಣಪ್ಪ ಮತ್ತು ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಮತ್ತಿತರರು ಚರ್ಚೆಯಲ್ಲಿ ಭಾಗವಹಿಸಿದ್ದರು.

RELATED ARTICLES

Latest News