Friday, May 3, 2024
Homeರಾಜ್ಯಬಿಜೆಪಿಯಿಂದ ಸುಮಲತಾ ಅಂಬರೀಶ್ ಬೀದಿಪಾಲು ; ಲಕ್ಷ್ಮಣ್

ಬಿಜೆಪಿಯಿಂದ ಸುಮಲತಾ ಅಂಬರೀಶ್ ಬೀದಿಪಾಲು ; ಲಕ್ಷ್ಮಣ್

ಬೆಂಗಳೂರು,ಫೆ.25- ಬಿಜೆಪಿಯವರು ಮಂಡ್ಯ ಸಂಸದೆ ಸುಮಲತಾ ಅಂಬರೀಶ್‍ರ ರಾಜಕೀಯ ಭವಿಷ್ಯವನ್ನು ಸಂಪೂರ್ಣವಾಗಿ ಹಾಳು ಮಾಡಿ ಬೀದಿಪಾಲು ಮಾಡಿದ್ದಾರೆ ಎಂದು ಕಾಂಗ್ರೆಸ್ ವಕ್ತಾರ ಎಂ.ಲಕ್ಷ್ಮಣ್ ದೂರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿ ನರೇಂದ್ರ ಮೋದಿ ಮುಂದಿನ ಹತ್ತು ವರ್ಷವೂ ಪ್ರಧಾನಿಯಾಗಿರಬೇಕು ಎಂದು ಭಾಷಣ ಮಾಡಿಕೊಂಡು ಬರುತ್ತಿದ್ದರು. ಈಗ ಅವರನ್ನೇ ಬಿಜೆಪಿ ಕೈಬಿಡುವ ಸ್ಥಿತಿ ಇದೆ. ಜೆಡಿಎಸ್-ಬಿಜೆಪಿ ಮೈತ್ರಿಯಲ್ಲಿ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾದರೆ, ಸುಮಲತಾಗೆ ಕ್ಷೇತ್ರ ಇಲ್ಲವಾಗುತ್ತದೆ. ಅವರಿಗೆ ಬೇರೆ ಯಾವ ಪಕ್ಷವೂ ಟಿಕೆಟ್ ಕೊಡುವ ಲಕ್ಷಣಗಳಿಲ್ಲ ಎಂದರು.

ಕಾಂಗ್ರೆಸ್‍ಗೆ ಬರುತ್ತಾರೆಂಬ ವದಂತಿಗಳು ಕೇಳಿಬರುತ್ತಿವೆ. ಮಂಡ್ಯ ಕ್ಷೇತ್ರಕ್ಕೆ ನಮ್ಮ ಅಭ್ಯರ್ಥಿ ಈಗಾಗಲೇ ಕೆಲಸ ಮಾಡುತ್ತಿದ್ದಾರೆ. ಅಧಿಕೃತ ಘೋಷಣೆಯೊಂದೇ ಬಾಕಿ. ಈ ಹಂತದಲ್ಲಿ ಸುಮಲತಾ ಅವರನ್ನು ಕರೆತಂದು ಟಿಕೆಟ್ ನೀಡುವ ಸಾಧ್ಯತೆ ನಮ್ಮಲ್ಲಿಲ್ಲ ಎಂದು ಹೇಳಿದರು.

ಬಿಜೆಪಿಯವರು ಅಯೋಧ್ಯೆ-ಮೈಸೂರು ನಡುವಿನ ರೈಲಿಗೆ ಬೆಂಕಿ ಹಚ್ಚುವುದಾಗಿ ಅಲ್ಪಸಂಖ್ಯಾತ ಯುವಕರು ಬೆದರಿಕೆ ಹಾಕಿದ್ದಾರೆ ಎಂದು ಬಾಯಿ ಬಡಿದುಕೊಳ್ಳುತ್ತಿರುವುದು ಕಂಡುಬರುತ್ತಿದೆ. ಆ ರೀತಿ ಬೆದರಿಕೆ ಹಾಕಿರುವ ಯಾರೂ ಈವರೆಗೆ ಸಿಕ್ಕಿಬಿದ್ದಿಲ್ಲ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಬಿಜೆಪಿ ಟೀಕೆ ಮಾಡುತ್ತಿದೆ. ರೈಲು ಹಾಗೂ ಅದರ ಹಳಿಗಳ ಮೇಲೆ ನಡೆಯುವ ಯಾವುದೇ ಕೃತ್ಯಗಳಿಗೆ ರೈಲ್ವೆ ಪೊಲೀಸರೇ ಹೊಣೆಗಾರರು. ರೈಲ್ವೆ ಇಲಾಖೆ ಸಂಪೂರ್ಣ ಕೇಂದ್ರ ಸರ್ಕಾರದ ಅೀಧಿನದಲ್ಲಿದೆ. ಅಲ್ಲಿ ನಡೆದ ಕೃತ್ಯಕ್ಕೆ ರಾಜ್ಯಸರ್ಕಾರವನ್ನು ದೂಷಿಸುವುದು ರಾಜಕೀಯ ಷಡ್ಯಂತ್ರ ಎಂದರು.

ನ್ಯೂಯಾರ್ಕ್‍ನಲ್ಲಿ ಭಾರತೀಯ ಪ್ರಜೆ ಸಾವು

ಬಿಜೆಪಿಯವರು ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸಲು ಸತತ ಪ್ರಯತ್ನ ಮಾಡುತ್ತಿದ್ದಾರೆ. ಮಂಗಳೂರಿನ ಜೆರೇಸಾ ಶಾಲೆಯ ವಿಚಾರವನ್ನು ಮುಂದಿಟ್ಟುಕೊಂಡು ಗಲಭೆ ಎಬ್ಬಿಸಿದ್ದಾರೆ. ನಿನ್ನೆ ಹುಣಸೂರಿನಲ್ಲಿ ಈಡಿಗ ಸಮುದಾಯದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಕೋಮು ಬಣ್ಣ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸಂಸದ ಪ್ರತಾಪ್ ಸಿಂಹ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪಿರಿಯಾಪಟ್ಟಣದ ದರ್ಗಾವೊಂದರಲ್ಲಿ ದೇವರ ಮೂರ್ತಿಯಿಟ್ಟು ಗಲಭೆ ಸೃಷ್ಟಿಸುವ ಯತ್ನ ನಡೆಯುತ್ತಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರ ಸರ್ಕಾರ 1.9 ಲಕ್ಷ ಕೋಟಿ ರೂ. ಸಾಲ ಮಾಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಅರವಿಂದ್ ಬೆಲ್ಲದ್ ಆರೋಪ ಮಾಡಿದ್ದಾರೆ. ಸುಳ್ಳು ಹೇಳಲು ಒಂದು ಮಿತಿಯಿಲ್ಲ. ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು 4 ಲಕ್ಷ ಕೋಟಿ ರೂ. ಸಾಲ ಮಾಡಿವೆ. ಸಿದ್ದರಾಮಯ್ಯ ಕಳೆದ 9 ತಿಂಗಳ ತಮ್ಮ ಅಧಿಕಾರವಯಲ್ಲಿ 1 ರೂ. ಕೂಡ ಸಾಲ ಮಾಡಿಲ್ಲ. 2024-25ನೇ ಸಾಲಿನ ಬಜೆಟ್‍ನಲ್ಲಿ 1.05 ಲಕ್ಷ ಕೋಟಿ ರೂ. ಸಾಲ ಮಾಡುವ ಅವಕಾಶವನ್ನು ಸೃಷ್ಟಿಸಿಕೊಂಡಿದ್ದಾರೆ ಎಂದು ಹೇಳಿದರು.

RELATED ARTICLES

Latest News