ಚಿಕ್ಕಬಳ್ಳಾಪುರ, ಏ.16- ಭಾರತ ರತ್ನ ಸರ್. ಎಂ. ವಿಶ್ವೇಶ್ವರಯ್ಯ ಅವರ ತವರು ತಾಲ್ಲೂಕಿನ ಮುದ್ದೇನಹಳ್ಳಿಯ ಗ್ರಂಥಾಲಯದ ಗೋಡೆಯ ಮೇಲೆ ಘೋಷ ವಾಕ್ಯವೊಂದು ಬರೆದಿದ್ದು ಚರ್ಚೆಗೆ ಗ್ರಾಸವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಘೋಷ ವಾಕ್ಯ ಕಾಣಿಸದಂತೆ ಇದೀಗ ಗ್ರಂಥಾಲಯದ ಗೋಡೆಮೇಲಿನ ಬರಹ ಅಳಿಸಲಾಗಿದೆ.
![](https://eesanje.com/wp-content/uploads/2024/04/WhatsApp-Image-2024-04-15-at-10.24.05_076b34e2.jpg)
ಒಂದು ಮಂದಿರ ಕಟ್ಟಿಸಿದೆ ಸಾವಿರ ಬಿಕ್ಷುಕರು ಹುಟ್ಟಿಕೊಳ್ಳುತ್ತಾರೆ, ಒಂದು ಗ್ರಂಥಾಲಯ ಕಟ್ಟಿಸಿದರೆ ಲಕ್ಷಾಂತರ ವಿದ್ವಾಂಸರು ಹುಟ್ಟಿಕೊಳ್ಳುತ್ತಾರೆ ಎಂಬ ಬರಹವು ಸರ್.ಎಂ. ವಿಶ್ವೇಶ್ವರಯ್ಯ ಅವರ ಮನೆಯ ಮುಂಭಾಗದಲ್ಲಿನ ಡಿಜಿಟಲ್ ಗ್ರಂಥಾಲಯದ ಮೇಲೆ ಬರೆಯಲಾಗಿತ್ತು. ಗ್ರಂಥಾಲಯಕ್ಕೆ ಬಂದಿದ್ದ ಓದುಗರೊಬ್ಬರು ಈ ಬರಹವನ್ನು ದೇವಾಲಯ ಕಟ್ಟಿದರೆ ಬಿಕ್ಷುಕರು ಹುಟ್ಟುಕೊಳ್ಳುತ್ತಾರೆ ಎಂಬ ಬರಹ ಎಷ್ಟರಮಟ್ಟಿಗೆ ಸರಿ.
ಹಿಂದುಗಳ ಧಾರ್ಮಿಕ ಭಾವನೆಗಳಿಗೆ ಇದು ಧಕ್ಕೆ ಅಲ್ಲವೇ? ಎಂಬುದಾಗಿ ಬರೆದು ಸಾಮಾಜಿಕ ಜಾಲತಾಣದ ಮೂಲಕ ಅರಿಬಿಟ್ಟಿದ್ದು, ಬಹುತೇಕರು ಈ ಬರಹದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಸಂಬಂಧಿಸಿದ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಕಾರ್ಯವೈಖರಿ ಬಗ್ಗೆ ಟೀಕೆಗಳು ಗುರಿಯಾದವು.
![](https://eesanje.com/wp-content/uploads/2024/04/WhatsApp-Image-2024-04-16-at-11.53.49_10f8e0a9-1024x579.jpg)
ಎಚ್ಚೆತ್ತುಕೊಂಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಈ ಬರಹವನ್ನು ಅಳಿಸಿ ಹಾಕಿ, ಹಿಂದೂಗಳ ಧಾರ್ಮಿಕ ಭಾವನೆ ಆಕ್ರೋಶಕ್ಕೆ ತಣ್ಣಗಾಗಿಸಿದ್ದರು. ಆದರೂ ಸಾಮಾಜಿಕ ಜಾಲತಾಣದಲ್ಲಿ ಈ ಪೋಸ್ಟ್ ಹರಿದಾಡುತ್ತಿದ್ದು, ಇಂತಹ ಕಾರ್ಯಕ್ಕೆ ಇತರೆ ಕಡೆಗಳಿಂದ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗುತ್ತಲೇ ಇದೆ.
![](https://eesanje.com/wp-content/uploads/2024/04/WhatsApp-Image-2024-04-16-at-11.53.48_bce9f570-1024x576.jpg)
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲ್ಲಿನ ಗ್ರಂಥಾಲಯ ಮೇಲ್ವಿಚಾರಕ ಅಶ್ವಥ್, ಇತ್ತೀಚೆಗಷ್ಟೇ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಿದ್ದು, ದ್ವಾರದ ಮೇಲೆ ಈ ಬರಹವನ್ನು ಬರೆಯಲಾಗಿದ್ದು, ಈ ಬರಹವನ್ನು ಡಾ.ಬಿ.ಆರ್. ಅಂಬೇಡ್ಕರ್ ಅವರ ವಾಕ್ಯ ಎಂದು ಆರ್ಟಿಸ್ಟ್ ಈ ವಾಕ್ಯವನ್ನು ಬಿಡಿಸಿದ್ದರು. ನಾವು ಇಂಥದೇ ಬರಹ ಬರೆಯಬೇಕು ಎಂದು ಆರ್ಟಿಸ್ಟಿಗೆ ನೀಡಿಲ್ಲ. ಬರಹಕ್ಕೆ ವಿವಾದ ಸೃಷ್ಟಿಯಾಗುತ್ತಿದ್ದಂತೆ ನಾವು ಮೇಲಧಿಕಾರಿಗಳ ಸೂಚನೆ ಮೇರೆಗೆ ಬರಹವನ್ನು ಅಳಿಸಲಾಗಿದೆ ಎಂದರು.