Monday, May 6, 2024
Homeರಾಜ್ಯಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಹಸ್ತಕ್ಷೇಪ ಮಾಡಿಲ್ಲ : ಸತೀಶ್ ಜಾರಕಿಹೊಳಿ

ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಡಿಸಿಎಂ ಹಸ್ತಕ್ಷೇಪ ಮಾಡಿಲ್ಲ : ಸತೀಶ್ ಜಾರಕಿಹೊಳಿ

ಬೆಂಗಳೂರು, ನ.7- ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ತಾವು ಆಕಾಂಕ್ಷಿಯಲ್ಲ. ತಮ್ಮ ಸಾಮಥ್ರ್ಯಕ್ಕೆ ತಕ್ಕಷ್ಟು ಜವಾಬ್ದಾರಿ (ಲೋಡ್ ) ಇದೆ. ಸದ್ಯಕ್ಕೆ ನಾನು ಅಷ್ಟಕ್ಕೇ ಸೀಮಿತವಾಗಿದ್ದೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇಂದು ಬೆಳಗ್ಗೆ ಸತೀಶ್ ಜಾರಕಿಹೊಳಿ ಅವರ ಮನೆಗೆ ದಿಢೀರ್ ಭೇಟಿ ನೀಡಿ ಚರ್ಚೆ ನಡೆಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಉಪಮುಖ್ಯ ಮಂತ್ರಿಗಳು ರಾಜಕೀಯ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ಲೋಕಸಭೆ ಚುನಾವಣೆ, ಕೆಲವು ಜಿಲ್ಲಾಧ್ಯಕ್ಷರ ಬದಲಾವಣೆ ಕುರಿತು ಮಾಲೋಚನೆಗಳಾಗಿವೆ. ಬಂದಷ್ಟೇ ವೇಗವಾಗಿ ವಾಪಸ್ ಹೋಗಿದ್ದಾರೆ. ನಮ್ಮ ಚರ್ಚೆಯ ವೇಳೆ ಬೆಳಗಾವಿ ಜಿಲ್ಲಾ ರಾಜಕಾರಣ ಕುರಿತು ಚರ್ಚೆ ನಡೆದಿಲ್ಲ ಎಂದರು.

ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ಕೆಲ ಸಮಸ್ಯೆಗಳಿವೆ. ಕಾಲಕಾಲಕ್ಕೆ ಅವು ಉದ್ಭವಿಸು ತ್ತವೆ ಮತ್ತು ಬಗೆಹರಿಯುತ್ತದೆ. ಅದನ್ನು ನಾವು ಸ್ಥಳೀಯವಾಗಿಯೇ ಬಗೆಹರಿಸಿಕೊಳ್ಳುತ್ತೇವೆ. ಉಪಮುಖ್ಯಮಂತ್ರಿಯವರು ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿಲ್ಲ. ಈ ಬಗ್ಗೆ ಅವರೊಂದಿಗೆ ಚರ್ಚಿ ಸುವ ಅಗತ್ಯವೂ ಇಲ್ಲ. ಬೆಳಗಾವಿ ಯೊಂದೇ ಅಲ್ಲ ಎಲ್ಲ ಜಿಲ್ಲೆಗಳಲ್ಲೂ ಸ್ಥಳೀಯ ಸಮಸ್ಯೆಗಳು ಇದ್ದೇ ಇರುತ್ತವೆ. ನಮ್ಮ ಸರ್ಕಾರವಷ್ಟೇ ಅಲ್ಲ ಹಿಂದಿನ ಸರ್ಕಾರದಲ್ಲೂ ಆ ರೀತಿಯ ಸಮಸ್ಯೆಗಳಿದ್ದವು ಎಂದು ಹೇಳಿದರು.

ಸದ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷರ ಬದಲಾವಣೆ ಇಲ್ಲ ಎಂದು ದೆಹಲಿ ಮಟ್ಟದಲ್ಲಿ ಹೈಕಮಾಂಡ್ ನಿರ್ಧರಿಸಿದೆ. ಲೋಕಸಭೆ ಚುನಾವಣೆವರೆಗೂ ಯಥಾಸ್ಥಿತಿಯೇ ಮುಂದುವರೆಯುವ ಸಾಧ್ಯತೆಗಳಿವೆ. ಚಂದ್ರಪ್ಪ ಅವರನ್ನು ಹೊರತುಪಡಿಸಿದರೆ ಉಳಿದ ನಾಲ್ವರು ಕಾರ್ಯಾಧ್ಯಕ್ಷರು ಒಂದಲ್ಲ ಒಂದು ಹುದ್ದೆಯಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಎಲ್ಲರೂ ಹೇಳಿದ್ದಾರೆ. ಅದು ಚರ್ಚೆಯ ಹಂತದಲ್ಲೂ ಇದೆ ಎಂದು ಹೇಳಿದರು.

ಮಿಜೋರಾಂನಲ್ಲಿ ಬಿಜೆಪಿ ಜೊತೆ ಮೈತ್ರಿಯಿಲ್ಲ : ಝೋರಾಮ್‍ತಂಗ

ಕೆಪಿಸಿಸಿ ಅಧ್ಯಕ್ಷರ ರೇಸ್‍ನಲ್ಲಿ ನನ್ನ ಹೆಸರಿಲ್ಲ. ನಾನು ಆಕಾಂಕ್ಷಿಯೂ ಅಲ್ಲ. ನನ್ನ ಸಾಮಥ್ರ್ಯಕ್ಕೆ ಅನುಗುಣವಾಗಿ ಕಾರ್ಯಭಾರಗಳಿವೆ. ಅವುಗಳನ್ನೇ ನಿಭಾಯಿಸುತ್ತೇನೆ. ನಾವಿನ್ನು ಬಹಳಷ್ಟು ದೂರ ಪ್ರಯಾಣ ಮಾಡಬೇಕು. ಟ್ರಾಕ್‍ಗೆ ಬರಬೇಕು. ಆವರೆಗೂ ಇರುವ ಜವಾಬ್ದಾರಿಗಳನ್ನೇ ನಿಭಾಯಿಸುತ್ತೇನೆ. ಸದ್ಯಕ್ಕೆ ನಮ್ಮ ಗಾಡಿ ಆರಾಮಾಗಿ ಚಲಿಸುತ್ತಿದೆ ಎಂದು ತಮ್ಮದೇ ಶೈಲಿಯಲ್ಲಿ ಹೇಳಿದರು.

ಬೆಂಗಳೂರಿನಲ್ಲಿ ಸುರಂಗಮಾರ್ಗ ರಸ್ತೆಗಳ ನಿರ್ಮಾಣದ ಮೂಲಕ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ಬಗ್ಗೆ ಚರ್ಚೆಗಳು ನಡೆದಿವೆ. ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಯೋಜನೆ ಬಗ್ಗೆ ಆಸಕ್ತಿ ಹೊಂದಿದ್ದಾರೆ. ಆದರೆ ಯಾವ ಇಲಾಖೆ ಕಾಮಗಾರಿಯನ್ನು ಕೈಗೊಳ್ಳಬೇಕು ಎಂಬ ಬಗ್ಗೆ ನಿರ್ಧಾರವಾಗಿಲ್ಲ.

ಬಿಬಿಎಂಪಿಯೇ ಅಥವಾ ಲೋಕೋಪಯೋಗಿ ಇಲಾಖೆಯೇ ಎಂಬುದನ್ನು ಸರ್ಕಾರದ ಮಟ್ಟದಲ್ಲಿ ಮುಖ್ಯಮಂತ್ರಿಯವರು ಚರ್ಚಿಸಿ ನಿರ್ಧರಿಸಬೇಕಾಗುತ್ತದೆ. ಈ ವಿಷಯದಲ್ಲಿ ತಮ್ಮ ಹಾಗೂ ಡಿ.ಕೆ.ಶಿವಕುಮಾರ್ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸದಾಶಿವ ಆಯೋಗದ ವರದಿ ಜಾರಿಯಾಗ ಬೇಕು ಎಂಬುದು ಹಲವು ವರ್ಷಗಳ ಬೇಡಿಕೆ. ಒಮ್ಮೆ ಈ ಬಗ್ಗೆ ನಿರ್ಧಾರ ತೆಗೆದುಕೊಂಡು ಆ ಸಮುದಾಯಗಳಿಗೆ ನ್ಯಾಯ ದೊರಕಿಸಬೇಕಿದೆ. ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಅವರು ವರದಿ ಜಾರಿಗೆ ಒತ್ತಾಯಿಸಿ ಮಾದಿಗ ಸಮುದಾಯದ ಮುಖಂಡರು, ಶಾಸಕರು ಮತ್ತು ಸಚಿವರ ಮನೆಗಳಿಗೆ ಮುತ್ತಿಗೆ ಹಾಕಬೇಕು ಎಂದು ಕರೆ ನೀಡಿರುವುದು ತಪ್ಪಲ್ಲ.

ಮಾಹಿತಿ ಆಯುಕ್ತರ ನೇಮಕದಲ್ಲಿ ಲೋಪ : ರಾಷ್ಟ್ರಪತಿಗಳಿಗೆ ಪತ್ರ ಬರೆದ ಚೌಧರಿ

ಸಚಿವರಾಗಿದ್ದರೂ ಕೆಲವೊಮ್ಮೆ ಸಮುದಾಯದ ಜೊತೆಯಲ್ಲೂ ನಿಲ್ಲಬೇಕಾಗುತ್ತದೆ. ಇದನ್ನು ಸರ್ಕಾರದ ವಿರುದ್ಧ ಎಂದು ಭಾವಿಸಲಾಗುವುದಿಲ್ಲ ಎಂದರು. ಮಾದಿಗ ಸಮುದಾಯದವರು ಶಾಸಕರ ಮನೆಗೆ ಮುತ್ತಿಗೆ ಹಾಕುವುದು ಹೊಸದೇನಲ್ಲ. ಎಷ್ಟು ಜನ ಬರುತ್ತಾರೋ ಬರಲಿ ನಾನು ಸಿದ್ದನಿದ್ದೇನೆ. ಊಟ ಉಪಚಾರ ಎಲ್ಲವನ್ನು ತಯಾರಿ ಮಾಡಿಕೊಂಡು ಅವರ ಜೊತೆ ಒಂದು ಗಂಟೆ ನಾನು ಕೂಡ ಸಾಂಕೇತಿಕವಾಗಿ ಧರಣಿ ಮಾಡುತ್ತೇನೆ ಎಂದು ಹೇಳಿದರು.

ಕಾಂತರಾಜು ಆಯೋಗದ ವರದಿಯಿಂದ ಯಾರಿಗೂ ಅನ್ಯಾಯವಾಗುವುದಿಲ್ಲ. ಮೊದಲು ಅದು ಸರ್ಕಾರಕ್ಕೆ ಸಲ್ಲಿಕೆಯಾಗಲಿ. ಆ ಬಳಿಕ ವಿಧಾನಸಭೆಯಲ್ಲಿ ಒಂದು ವಾರ ಕಾಲ ನಿರಂತರ ಚರ್ಚೆಯಾಗಲಿ ಎಲ್ಲ ಸಮುದಾಯಗಳು ಅಭಿಪ್ರಾಯ ಹೇಳುವ ಮೂಲಕ ಯಾರಿಗೂ ಅನ್ಯಾಯವಾಗದಂತೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಲೋಪವಿದ್ದರೆ ಸಾರಸಗಟಾಗಿ ತಿರಸ್ಕಾರ ಮಾಡಬಹುದು ಇಲ್ಲವಾದರೆ ಅಂಗೀಕಾರದ ಬಗ್ಗೆ ಚರ್ಚೆಯಾಗಲಿ ಎಂದು ಹೇಳಿದರು.

RELATED ARTICLES

Latest News