ಕೋಲಾರ,ಏ.24- ಎಸ್ಎಸ್ಎಲ್ಸಿ ಪಾಸಾದ ಖುಷಿಯಲ್ಲಿ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿ ಮುಳುಗಿ ಸಾವನ್ನಪ್ಪಿರುವ ಘಟನೆ ಮುಳಬಾಗಿಲು ತಾಲ್ಲೂಕಿನ ಸೊನ್ನವಾಡಿ ಗ್ರಾಮದಲ್ಲಿ ನಡೆದಿದೆ.
ಕಿರಣ್(17) ಮೃತಪಟ್ಟ ವಿದ್ಯಾರ್ಥಿ. ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದಲ್ಲಿ ವ್ಯಾಸಂಗ ಮಾಡಿದ ಕಿರಣ್ ಎಸ್ಎಸ್ಎಲ್ಸಿಯಲ್ಲಿ ಉತ್ತೀರ್ಣನಾಗಿದ್ದು, ಫಲಿತಾಂಶ ವೀಕ್ಷಿಸಿದ ಬಳಿಕ ಸ್ನೇಹಿತರೊಂದಿಗೆ ಬಾವಿಯಲ್ಲಿ ಈಜಲು ಹೋಗಿದ್ದು, ಮೊದಲು ಸೊಂಟಕ್ಕೆ ಬೆಂಡು ಕಟ್ಟಿಕೊಂಡು ಬಾವಿಗೆ ಜಿಗಿದಿದ್ದಾನೆ.
ಸುಮಾರು ಹೊತ್ತಾದರೂ ನೀರಿನಿಂದ ಮೇಲೆ ಬಾರದೆ ನೀರು ಕುಡಿದು ಮೃತಪಟ್ಟಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಸುದ್ದಿ ತಿಳಿದ ಕೂಡಲೇ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮೃತದೇಹವನ್ನು ಹೊರತೆಗೆದಿದ್ದಾರೆ.
