ಚಿಕ್ಕಮಗಳೂರು, ಜ.18- ತಲೆ ಮೇಲೆ ಮರಬಿದ್ದು ಗಾಯಗೊಂಡಿದ್ದ ಯುವತಿಯೋರ್ವಳಿಗೆ ನರ್ಸ್ ಹಾಗೂ ಕಾಂಪೌಂಡರ್ ಚಿಕಿತ್ಸೆ ನೀಡಿದ್ದು, ಚಿಕಿತ್ಸೆಗಾಗಿ ಆಕೆಯನ್ನು ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದು, ಇದಕ್ಕೆ ನರ್ಸ್- ಕಾಂಪೌಂಡರ್ ಅವರ ನಿರ್ಲಕ್ಷ್ಯವೇ ಕಾರಣ ಎಂದು ಕುಟುಂಬಸ್ಥರು ಆಸ್ಪತ್ರೆ ಮುಂಭಾಗ ಶವವಿಟ್ಟು ಪ್ರತಿಭಟನೆ ನಡೆಸಿದ್ದಾರೆ.
ಹೊಸಪೇಟೆ ಗ್ರಾಮದ ಕವಿತಾ (21) ಮೃತ ದುರ್ದೈವಿ.
ಯುವತಿ ಕಾಫಿ ಹಣ್ಣು ಕೊಯ್ಯುವಾಗ ತಲೆ ಮೇಲೆ ಮರಬಿದ್ದು ಗಾಯಗೊಂಡಿದ್ದಳು. ಆಕೆಯನ್ನು ತಕ್ಷಣ ಚಿಕ್ಕಮಗಳೂರು ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಈ ವೇಳೆ ಪಾಳಿಯಲ್ಲಿರುವ ವೈದ್ಯರಿಲ್ಲದ ಕಾರಣ ನರ್ಸ್ ಹಾಗೂ ಕಾಂಪೌಂಡರ್ ಒಂದು ಇಂಜೆಕ್ಷನ್ ಕೂಡ ಕೊಡದೇ ಕೇವಲ ಬ್ಯಾಂಡೇಜ್ ಹಾಕಿ, ಶಿವಮೊಗ್ಗಕ್ಕೆ ಕರೆದುಕೊಂಡು ಹೋಗುವಂತೆ ಸೂಚಿಸಿದ್ದರು. ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಸ್ಕ್ಯಾನ್ ಮಾಡದೆ, ಎಕ್ಸ್ ರೇ ಮಾಡದೆ, ಒಂದ್ ಇಂಜಕ್ಷನ್ ಕೂಡ ಮಾಡದೆ ಹೇಗೆ ಶಿವಮೊಗ್ಗಕ್ಕೆ ಕಳುಹಿಸಿದ್ರಿ? ಸ್ಥಳಕ್ಕೆ ಜಿಲ್ಲಾ ಸರ್ಜನ್ ಬರಬೇಕು ಎಂದು ಆಗ್ರಹಿಸಿ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
