ಚಿಕ್ಕಮಗಳೂರು,ಜು.16- ಪದವಿ ಮುಗಿಸಿದ ಯುವತಿಯೊಬ್ಬಳು ಕಾಲೇಜಿನಿಂದ ಅಂಕಪಟ್ಟಿ ತೆಗೆದುಕೊಂಡು ಬರಲು ತನ್ನ ಅಕ್ಕನ ಮಗಳೊಂದಿಗೆ ಬಂದವಳನ್ನು ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಒಳಗೆ ಹಾಡಹಗಲೇ ಬಲವಂತವಾಗಿ ಅಪಹರಿಸಲಾಗಿದೆ ಎಂದು ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೇಲೂರಿನಿಂದ ಚಿಕ್ಕಮಗಳೂರಿಗೆ ಬಸ್ಸಿನಲ್ಲಿ ಬಂದಿಳಿದ ತಕ್ಷಣವೇ ಈ ಕಿಡ್ನಾಪ್ ನಡೆದಿದೆ ಎಂದು ಶಂಕಿಸಲಾಗಿದೆ. ಯುವತಿಯ ಗ್ರಾಮದವನೇ ಆದ ಸಾಗರ್ ಎಂಬಾತ ಬಸ್ ನಿಲ್ದಾಣದ ಒಳಗೆ ಕಾರಿನಲ್ಲಿ ಬಂದು ಯುವತಿಯ ಕೈಹಿಡಿದು ಬಲವಂತವಾಗಿ ಕಾರಿನೊಳಗೆ ಎಳೆದು ಹಾಕಿದ್ದಾನೆ ಎಂದು ಎನ್ನಲಾಗಿದ್ದು, ತಕ್ಷಣವೇ ಕಾರಿನ ಡೋರ್ ಲಾಕ್ ಮಾಡಿ ಕಾರನ್ನು ಅತಿವೇಗವಾಗಿ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ.
ಆಗ ಯುವತಿ ಕಿರುಚಾಡಿದಾಗ ಆಕೆಯೊಂದಿಗಿದ್ದ ಆಕೆಯ ಅಕ್ಕನ ಮಗಳು ಬಿಡಿಸಲು ತೀವ್ರ ಯತ್ನ ನಡೆಸಿದಳಾದರೂ ಕಾರಿನ ಡೋರ್ ತೆರೆಯದ ಕಾರಣ ಸಾಗರ್ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ವರ್ಷದ ಹಿಂದೆ ಸಾಗರ್ ಯುವತಿಯನ್ನು ಮದುವೆ ಮಾಡಿಕೊಡುವಂತೆ ಪೋಷಕರಲ್ಲಿ ಕೇಳಿದ್ದನು ಎನ್ನಲಾಗಿದ್ದು, ಅದಕ್ಕೆ ಪೋಷಕರು ಒಪ್ಪಿಗೆ ನೀಡಿರಲಿಲ್ಲ. ಇದರಿಂದ ತೀವ್ರ ಆಕ್ರೋಶಗೊಂಡಿದ್ದ ಸಾಗರ್, ಯುವತಿಯನ್ನು ಹೇಗಾದರೂ ಮಾಡಿ ಬಲವಂತವಾಗಿಯಾಗಿಯಾದರೂ ವಿವಾಹವಾಗಲೇಬೇಕೆಂಬ ದುರುದ್ದೇಶದಿಂದ ಈ ಅಪಹರಣದ ಕೃತ್ಯ ಎಸಗಿದ್ದಾನೆ ಎಂದು ಪೋಷಕರು ಆರೋಪಿಸಿದ್ದಾರೆ.
ಘಟನೆ ನಡೆದ ನಂತರ ಪೋಷಕರು ಚಿಕ್ಕಮಗಳೂರಿಗೆ ಬಂದು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಸದ್ಯ ಯುವತಿ ಹಾಗೂ ಸಾಗರ್ ಇಬ್ಬರ ಮೊಬೈಲ್ ಫೋನ್ಗಳು ಸ್ವಿಚ್ ಆಫ್ ಆಗಿದ್ದು, ಯಾವುದೇ ರೀತಿಯ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಸಂಬಂಧ ಚಿಕ್ಕಮಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
