Saturday, May 4, 2024
Homeಇದೀಗ ಬಂದ ಸುದ್ದಿಡಾ.ಮಂಜುನಾಥ್ ವ್ಯಕ್ತಿತ್ವಕ್ಕೆ ಕಳಂಕ ಬರುವ ತೀರ್ಮಾನ ಮಾಡುವುದಿಲ್ಲ: ಎಚ್.ಡಿ. ದೇವೇಗೌಡರು

ಡಾ.ಮಂಜುನಾಥ್ ವ್ಯಕ್ತಿತ್ವಕ್ಕೆ ಕಳಂಕ ಬರುವ ತೀರ್ಮಾನ ಮಾಡುವುದಿಲ್ಲ: ಎಚ್.ಡಿ. ದೇವೇಗೌಡರು

ಬೆಂಗಳೂರು,ಮಾ.4- ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕರಾದ ಡಾ.ಸಿ.ಎನ್.ಮಂಜುನಾಥ್ ಅವರು ರಾಷ್ಟ್ರ ರಾಜಕಾರಣಕ್ಕೆ ಬರಬೇಕೆಂಬ ಪ್ರೀತಿ ವಿಶ್ವಾಸದ ಒತ್ತಾಯವಿದೆ. ಆದರೆ ಅದಕ್ಕೆ ಅವರು ಸಮ್ಮತಿ ಕೊಡುವುದಿಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ವೈದ್ಯರಾಗಿ, ನಿರ್ದೇಶಕರಾಗಿ ಸಲ್ಲಿಸಿದ ಸೇವೆಯಿಂದಾಗಿ ಅವರಿಗೆ ರಾಷ್ಟ್ರದಲ್ಲೇ ಉನ್ನತ ಮಟ್ಟದ ಗೌರವ ಸ್ಥಾನವಿದೆ. ಆ ವ್ಯಕ್ತಿತ್ವಕ್ಕೆ ಕಳಂಕ ಬರುವ ಯಾವ ತೀರ್ಮಾನವನ್ನು ನಾನು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಇವತ್ತಿನ ರಾಜಕೀಯ ವ್ಯವಸ್ಥೆ ಎಷ್ಟು ಕೆಟ್ಟು ಹೋಗಿದೆ ಎಂಬುದು ನಮಗೆ ಗೊತ್ತಿದೆ. ನಾಡಿನ ಜನರು ಪ್ರೀತಿ ವಿಶ್ವಾಸದಿಂದ ಅವರು ರಾಜಕೀಯಕ್ಕೆ ಬರಬೇಕೆಂದು ಬಯಸುತ್ತಿದ್ದಾರೆ. ಇವರಿಗೂ ಮಂಜುನಾಥ್‍ರವರ ವ್ಯಕ್ತಿತ್ವಕ್ಕೆ ಕಳಂಕ ತರುವ ಉದ್ದೇಶವಿಲ್ಲ ಎಂದು ಹೇಳಿದರು. ಲೋಕಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಗೌಡರು, ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವ ಅಮಿತ್ ಷಾ ಎಚ್.ಡಿ.ಕುಮಾರಸ್ವಾಮಿ ಅವರುಗಳು ಚರ್ಚೆ ಮಾಡಿದ ನಂತರ ತೀರ್ಮಾನವಾಗಲಿದೆ. ನಮಗೆ ಎಷ್ಟು ಕ್ಷೇತ್ರ ಕೊಡುತ್ತಾರೆ, ಯಾವ ಯಾವ ಕ್ಷೇತ್ರ ಕೊಡುತ್ತಾರೆ ಎಂಬುದು ಇನ್ನೊಂದು ವಾರದಲ್ಲಿ ಗೊತ್ತಾಗಲಿದೆ ಎಂದರು.

ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಪೋಟ ಪ್ರಕರಣದ ಬಗ್ಗೆ ಸರ್ಕಾರ ತನ್ನ ಕರ್ತವ್ಯ ನಿರ್ವಹಿಸುವುದರಲ್ಲಿ ಹಿಂದೆ ಬಿದ್ದಿದೆ ಎಂದು ಹೇಳುವುದಿಲ್ಲ. ಆ ಘಟನೆ ಬಗ್ಗೆ ಮುಖ್ಯಮಂತ್ರಿ ಹಾಗೂ ಗೃಹಸಚಿವರು ನೀಡಿರುವ ಹೇಳಿಕೆಯನ್ನು ಗಮನಸಿದ್ದೇನೆ. ಅಗತ್ಯಬಿದ್ದರೆ ಘಟನೆಯನ್ನು ಎನ್‍ಐಎಗೆ ವಹಿಸುವುದಾಗಿ ಮುಖ್ಯಮಂತಿ ಹೇಳಿದ್ದಾರೆ. ಹೀಗಾಗಿ ಆ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ. ಆದಷ್ಟು ಶೀಘ್ರ ದುಷ್ಕರ್ಮಿಗಳನ್ನು ಪತ್ತೆಹಚ್ಚಿ ಶಿಕ್ಷೆಗೊಳಪಡಿಸಬೇಕು ಎಂದು ಅವರು ತಿಳಿಸಿದರು.

ವಿಧಾನಸೌಧದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಇದೇ ವೇಳೆ ಗೌಡರು ತಿಳಿಸಿದರು.

RELATED ARTICLES

Latest News