Saturday, July 27, 2024
Homeರಾಷ್ಟ್ರೀಯಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಸುಪ್ರೀಂ ಮಹತ್ವದ ತೀರ್ಪು

ಅಕ್ರಮ ಹಣ ವರ್ಗಾವಣೆ ಪ್ರಕರಣ ಕುರಿತಂತೆ ಸುಪ್ರೀಂ ಮಹತ್ವದ ತೀರ್ಪು

ನವದೆಹಲಿ,ಮೇ 16- ವಿಶೇಷ ನ್ಯಾಯಾಲಯವು ಅಕ್ರಮ ಹಣ ವರ್ಗಾವಣೆಯ ದೂರನ್ನು ಪರಿಗಣನೆಗೆ ತೆಗೆದುಕೊಂಡ ನಂತರ ಜಾರಿ ನಿರ್ದೇಶನಾಲಯವು (ಇಡಿ) ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಸೆಕ್ಷನ್‌ 19 ರಡಿ ಆರೋಪಿಯನ್ನು ಬಂಧಿಸಬಾರದೆಂದು ಸುಪ್ರೀಂಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿಗಳಾದ ಅಭಯ್‌ ಎಸ್‌‍.ಓಕ ಹಾಗೂ ಉಜ್ವಲ್‌ ಭುಯಾನ್‌ ಅವರಿದ್ದ ದ್ವಿಸದಸ್ಯ ಪೀಠವು ಈ ತೀರ್ಪು ನೀಡಿದೆ. ಆರೋಪಿಯು ಸಮನ್ಸ್ ನ ಅನ್ವಯ ನ್ಯಾಯಾಲಯದ ಮುಂದೆ ಹಾಜರಾದಾಗ ಕಸ್ಟಡಿ ಅವಧಿಯನ್ನು ಪಡೆಯಲು ಸಂಬಂಧಪಟ್ಟ ತನಿಖಾ ಸಂಸ್ಥೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕೆಂದು ನಿರ್ದೇಶನ ನೀಡಿದೆ.

ಆರೋಪಿಯು ವಿಶೇಷ ನ್ಯಾಯಾಲಯಕ್ಕೆ ಸಮನ್ಸ್ ಮೂಲಕ ಹಾಜರಾದರೆ ಅವರು ಕಸ್ಟಡಿಯಲ್ಲಿದ್ದಾರೆ ಎಂದು ಪರಿಗಣಿಸುವುದಿಲ್ಲ. ಸಮನ್‌್ಸಗೆ ಅನುಗುಣವಾಗಿ ನ್ಯಾಯಾಲಯದ ಮುಂದೆ ಹಾಜರಾದ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಅಗತ್ಯವಿಲ್ಲ ಎಂದು ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ ತೀರ್ಪು ನೀಡಿರುವುದಾಗಿ ಲೈವ್‌ ಲ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಪಿಎಂಎಲ್‌ಎ ಸೆಕ್ಷನ್‌ 45 ರ ಷರತ್ತುಗಳು ಆರೋಪಿಗಳಿಗೆ ಅನ್ವಯಿಸುವುದಿಲ್ಲ. ಮನಿ ಲಾಂಡರಿಂಗ್‌ ಪ್ರಕರಣದಲ್ಲಿ ಆರೋಪಿಯು ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ನ್ಯಾಯಾಲವು ಮೊದಲು ಪಬ್ಲಿಕ್‌ ಪ್ರಾಜಿಕ್ಯೂಟರ್‌ನ ವಿಚಾರಣೆಗೆ ಅವಕಾಶ ನೀಡಬೇಕೆಂದು ಸೂಚನೆ ನೀಡಿದೆ.

ಆರೋಪಿಯು ತಪ್ಪಿತಸ್ಥನಲ್ಲ ಹಾಗೂ ಬಿಡುಗಡೆಯಾದ ನಂತರ ಅಂತಹ ಅಪರಾಧವನ್ನು ಮಾಡುವ ಸಾಧ್ಯತೆಯಿಲ್ಲ ಎಂದು ಮನವರಿಕೆ ಮಾಡಿದಾಗ ಮಾತ್ರ ಷರತ್ತುಗಳು ಅನ್ವಯಿಸುತ್ತವೆ. ಈ ವೇಳೆ ಅಂತಹ ಆರೋಪಿಗೆ ಜಾಮೀನು ನೀಡಬಹುದು. ವಿಶೇಷ ನ್ಯಾಯಾಲಯವು ಅಪರಾಧದ ಅರಿವು ಪಡೆಯುವ ಪ್ರಕರಣಗಳಲ್ಲಿ ಕೂಡ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯು ಜಾಮೀನಿಗಾಗಿ ಕಠಿಣ ಪರಿಸ್ಥಿತಿಯನ್ನು ಎದುರಿಸಬೇಕೆ ಎಂಬ ಪ್ರಶ್ನೆಗೆ ಸುಪ್ರೀಂಕೋರ್ಟ್‌ ಈ ತೀರ್ಪು ನೀಡಿದೆ.

ಸೆಕ್ಷನ್‌ 44 ರಡಿಯಲ್ಲಿ ದೂರಿನ ಆಧಾರದ ಮೇಲೆ ಪಿಎಂಎಲ್‌ಎ ಸೆಕ್ಷನ್‌ 4 ರಡಿ ಶಿಕ್ಷಾರ್ಹ ಅಪರಾಧವನ್ನು ಪರಿಗಣನೆಗೆ ತೆಗೆದುಕೊಂಡ ನಂತರ ದೂರಿನಲ್ಲಿ ಆರೋಪಿ ಎಂದು ತೋರಿಸುವ ವ್ಯಕ್ತಿಯನ್ನು ಬಂಧಿಸಲು ಇಡಿ ಅಧಿಕಾರಿಗಳು ಸೆಕ್ಷನ್‌ 19 ರಡಿಯಲ್ಲಿ ಅಧಿಕಾರ ಚಲಾಯಿಸಲು ಅಶಕ್ತರಾಗಿದ್ದಾರೆ.

ಅದೇ ಅಪರಾಧದ ಹೆಚ್ಚಿನ ತನಿಖೆಗಾಗಿ ಸಮನ್‌್ಸ ನೀಡಿದ ನಂತರ ಹಾಜರಾಗುವ ಆರೋಪಿಯ ಕಸ್ಟಡಿಯನ್ನು ಇಡಿ ಬಯಸಿದರೆ, ವಿಶೇಷ ನ್ಯಾಯಲಯಕ್ಕೆ ಅರ್ಜಿ ಸಲ್ಲಿಸಬೇಕು. ಆಗ ನ್ಯಾಯಾಲಯ ಸಮತಿಸಿದರೆ ಮಾತ್ರ ಆರೋಪಿಯನ್ನು ಕಸ್ಟಡಿಗೆ ಪಡೆಯಬೇಕಾಗುತ್ತದೆ.

ಈ ವೇಳೆ ಇಡಿ ಅಧಿಕಾರಿಗಳು ವಿಶೇಷ ನ್ಯಾಯಾಲಯದ ಮುಂದೆ ಸಂಕ್ಷಿಪ್ತವಾದ ವಿವರಗಳನ್ನು ನೀಡಬೇಕು. ಇದನ್ನು ದಾಖಲಿಸಿದ ನಂತರ ಅರ್ಜಿಯ ಮೇಲೆ ನ್ಯಾಯಾಲಯ ಆದೇಶ ನೀಡಬಹುದು.

ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸೆಕ್ಷನ್‌ 19 ರಡಿ ಆರೋಪಿಯನ್ನು ಎಂದಿಗೂ ಬಂಧಿಸದಿದ್ದರೂ ಕಸ್ಟಡಿ ವಿಚಾರಣೆ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿದರೆ, ಆಗ ಮಾತ್ರ ಅನುಮತಿ ನೀಡಬಹುದು ಎಂದು ನ್ಯಾಯಮೂರ್ತಿಗಳಾದ ಅಭಯ್‌ ಎಸ್‌‍.ಓಕ ಹಾಗೂ ಉಜ್ವಲ್‌ ಭುಯಾನ್‌ ಅವರಿದ್ದ ದ್ವಿಸದಸ್ಯ ಪೀಠವು ಈ ತೀರ್ಪನ್ನು ನೀಡಿದೆ.

RELATED ARTICLES

Latest News