Saturday, May 4, 2024
Homeರಾಜ್ಯಆಭರಣ ಮಳಿಗೆ, ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

ಆಭರಣ ಮಳಿಗೆ, ಉದ್ಯಮಿಗಳ ಮನೆ, ಕಚೇರಿಗಳ ಮೇಲೆ ಐಟಿ ದಾಳಿ

ಬೆಂಗಳೂರು,ಅ.4-ತೆರಿಗೆ ಕಟ್ಟದೆ ವಂಚನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಆದಾಯ ತೆರಿಗೆ (ಐಟಿ) ಅಧಿಕಾರಿಗಳು ನಗರದ 50 ಕಡೆ ಏಕಕಾಲಕ್ಕೆ ಆಭರಣ ಮಾಲೀಕರ ಅಂಗಡಿ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲದೆ, ವ್ಯಾಪಾರಿಗಳು, ವರ್ತಕರು, ದಂತ ವೈದ್ಯರು, ಮಾಲೀಕರು, ಖಾಸಗಿ ಕಂಪನಿಗಳು, ಮನೆ ಮತ್ತು ಕಚೇರಿಗಳ ಮೇಲೆ 15 ಕ್ಕೂ ಹೆಚ್ಚು ಅಧಿಕಾರಿಗಳು ದಿಢೀರ್ ದಾಳಿ ಮಾಡಿ ತೆರಿಗೆ ವಂಚನೆ ಸಂಬಂಧ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಗೆ ಒಳಗಾಗಿರುವ ಆಭರಣ ಅಂಗಡಿ ಮಾಲೀಕರು, ದಂತ ವೈದ್ಯರು, ಖಾಸಗಿ ವ್ಯಕ್ತಿಗಳಿಗೆ ಸದ್ಯದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಐಟಿ ಮುಂದಾಗಿದೆ ಎಂದು ತಿಳಿದುಬಂದಿದೆ. ಬೆಂಗಳೂರಿನ ವಿಜಯನಗರ, ಬಿಟಿಎಂ ಲೇಔಟ್, ಸದಾಶಿವನಗರ, ಹುಳಿಮಾವು ಸೇರಿದಂತೆ ಮತ್ತಿತರ ಕಡೆ ಒಟ್ಟು 50 ಅಧಿಕಾರಿಗಳ ತಂಡ ಚಿನ್ನದ ಅಂಗಡಿಗಳು, ಮೆಡಿಕಲ್ ಶಾಪ್‍ಗಳು, ಖಾಸಗಿ ಆಸ್ಪತ್ರೆಗಳ ಮಾಲಕರ ಮನೆ, ಉದ್ಯಮ ಸಂಸ್ಥೆಗಳ ಮೇಲೆ ದಾಳಿ ನಡೆಸಿ ಚಿರ, ಚರಾಸ್ತಿ ಪತ್ತೆ ಮಾಡಿದ್ದಾರೆ.

ಸುದ್ದಿ ಸಂಸ್ಥೆಗಳ ಮೇಲಿನ ದಾಳಿ ಸತ್ಯವನ್ನು ಹತ್ತಿಕ್ಕುವ ಪ್ರಯತ್ನ : ಸಚಿವ ಗುಂಡೂರಾವ್

ಗೋವಾ ಮತ್ತು ಚೆನ್ನೈನಿಂದ ಆಗಮಿಸಿದ್ದ ಐಟಿ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಸಣ್ಣದೊಂದು ಮಾಹಿತಿಯನ್ನೂ ನೀಡದೆ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. ವಿಜಯನಗರ ಮತ್ತು ಶಾಂತಿನಗರದಲ್ಲಿ ವೈದ್ಯೆಯರ ಮನೆ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ತೆರಿಗೆ ವಂಚನೆಗೆ ಸಂಬಂಧಿಸಿದ ದಾಖಲೆಗಳನ್ನು ಪತ್ತೆ ಮಾಡಿದ್ದಾರೆ.

ಮೇಕ್ರಿ ಸರ್ಕಲ್ ಬಳಿಯ ಗಜರಾಜ ಜ್ಯುವೆಲರ್ಸ್ ಮೇಲೂ ದಾಳಿ ನಡೆಸಲಾಗಿದೆ. ಕಳೆದ ಒಂದೂವರೆ ವರ್ಷದಿಂದ ತೆರಿಗೆ ಕಟ್ಟಿರಲಿಲ್ಲ ಎಂದು ತಿಳಿದುಬಂದಿದೆ. ದಾಳಿ ಸಂದರ್ಭದಲ್ಲಿ ಅಂಗಡಿಯ ಬಾಗಿಲು ಹಾಕಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕರು ಪ್ರತಿರೋಧ ತೋರಿದರೂ ಐಟಿ ಅಧಿಕಾರಿಗಳು ಯಾವುದಕ್ಕೂ ಜಗ್ಗಲಿಲ್ಲ.

ಪ್ರಭಾವಿ ರಾಜಕಾರಣಿ ಸಂಬಂಧಿಕರ ಆಭರಣ ಅಂಗಡಿ ಮತ್ತು ಕಚೇರಿಗಳ ಮೇಲೆ ದಾಳಿಯನ್ನು ನಡೆಸಲಾಗಿದೆ. ಸದಾಶಿವನಗರದ ಸ್ಯಾಂಕಿಟ್ಯಾಂಕಿ ರಸ್ತೆಯಲ್ಲಿರುವ ಲಕ್ಷ್ಮಿಲಾಲ ಜೈನ್‍ಗಣೇಶ್ ಆಭರಣದ ಅಂಗಡಿಗಳ ಮೇಲೂ ದಾಳಿ ನಡೆಸಲಾಗಿದೆ. ಎರಡು ಖಾಸಗಿ ಇನ್ನೋವ ಕಾರಿನಲ್ಲಿ ಬಂದಿದ್ದ ಐಟಿ ಅಧಿಕಾರಿಗಳು ಸುಮಾರು 3 ಗಂಟೆಗೂ ಹೆಚ್ಚು ಕಾಲ ದಾಖಲೆಗಳನ್ನು ಪರಿಶೀಲಿಸಿ ವಶಕ್ಕೆ ಪಡೆದಿದ್ದಾರೆ.

ತಿಂಗಳಾಂತ್ಯಕ್ಕೆ ಪಂಚರಾಜ್ಯ ಚುನಾವಣೆ ಘೋಷಣೆ ಸಾಧ್ಯತೆ

ವಿಜಯನಗರದ ಖ್ಯಾತ ದಂತ ವೈದ್ಯೆ ಸಂಧ್ಯಾ ಪಾಟೀಲ್ ಅವರು ನಡೆಸುತ್ತಿರುವ ಕ್ಲಿನಿಕ್ ಹಾಗೂ ಪ್ರಶಾಂತನಗರದಲ್ಲಿರುವ ಮನೆ ಮೇಲೆ ದಾಳಿ ನಡೆಸಲಾಗಿದೆ. ಶಾಂತಿನಗರದಲ್ಲಿ ನವೀನ್ ಎಂಬುವರಿಗೆ ಸೇರಿದ ಕಚೇರಿ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಬಿಗಿ ಭದ್ರತೆ ನಡುವೆ ಎರಡು ಇನ್ನೋವಾ ಕಾರಿನಲ್ಲಿ 10 ಅಧಿಕಾರಿಗಳ ತಂಡ ದಿಢೀರ್ ದಾಳಿ ನಡೆಸಿ ನವೀನ್‍ರಿಗೆ ಸೇರಿದ ಬ್ಯಾಂಕ್ ಖಾತೆಗಳು, ಚಿರ, ಚರಾಸ್ತಿಗಳ ಬಗ್ಗೆ ಪರಿಶೀಲನೆ ಮಾಡಿ, ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಕಳೆದ ತಿಂಗಳು ಸೆಪ್ಟೆಂಬರ್ 27ರಂದು ಬೆಂಗಳೂರಿನ ಹಲವು ಕಂಪೆನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿತ್ತು. ಬೆಂಗಳೂರಿನ 10ಕ್ಕೂ ಹೆಚ್ಚು ಖಾಸಗಿ ಕಂಪನಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ, ಆದಾಯ ತೆರಿಗೆ ತಪ್ಪು ಮಾಹಿತಿ, ಸುಳ್ಳು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ದಾಳಿ ನಡೆದಿತ್ತು. ಅದಾಗಿ ಒಂದು ವಾರದ ನಂತರ ಮತ್ತೊಮ್ಮೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

RELATED ARTICLES

Latest News